ಶುಕ್ರವಾರ, ಜುಲೈ 17, 2020

ಸ್ವಾತಂತ್ರ್ಯದ ಸ್ವರ್ಗ ಸುಖದಲ್ಲಿ ತೇಲಾಡುತ್ತಿರುವ ಭಾರತೀಯರು!

ಈ ವಾರ ಬರೆದ ಅಂಕಣ ಬರಹ,ಸಮಚಿತ್ತದಿಂದ ಓದಿಕೊಳ್ಳಿ.ನಿನ್ನೆ SMJ NEWS YADGIR ದಲ್ಲಿ ಪ್ರಕಟಗೊಂಡಿದೆ.

ಸ್ವಾತಂತ್ರ್ಯದ ಸ್ವರ್ಗ ಸುಖದಲ್ಲಿ ತೇಲಾಡುತ್ತಿರುವ ಭಾರತೀಯರು!



“ಅಲಾ ಕಾದು ನಾಯಕ್ಗಾರು,ನೇನು ಚೆಪ್ಪೇದೆಂಟೆಂಟೆ ಭಾರತಾನಿಕಿ ಸ್ವಾಂತಂತ್ರ್ಯ ವಚ್ಚಿನಪ್ಪಡಿನಿಂಚಿ ಇಂತವರಿಕಿ ಆಂದ್ರ ಪ್ರದೇಶಾಲು ಕೊನ್ನಿ ಪ್ರಾಂತ್ಯಾಲು ಇಂತವರಿಕೂ ಕೊಂದರೂ ಎಲೆಕ್ಷನ್ ಸೆಂಟರಿಕಿ ವೆಳ್ಳಿ ಮತಂ ಎಯ್ಯಲೇದು ತೆಲುಸಾ?ಕಾವಾಲಂಟೆ ಡಬ್ಬಯ್ ಎನಬೈ ಸಂವತ್ಸರ ಉನ್ನ ಮುಸುಲೋಡನ್ನಿ ಅಡಿಗಿ ಸೂಡು,ಅಲಾ ಉಂದಿ ಪರಿಸ್ಥಿತಿ!”ಎಂದ ನನ್ನ ಒಬ್ಬ ಹಿರಿಯ ಸ್ನೇಹಿತ,ಆತನಿಗೂ ಸರಿ ಸುಮಾರು ಅರವತ್ತು ವರ್ಷಗಳು.ಇದು ಬರೀ ಆಂದ್ರದ ಕಥೆ ಮಾತ್ರವಲ್ಲ,ಕರ್ನಾಟಕದಲ್ಲೂ ಅನೇಕ ಪ್ರದೇಶಗಳಲ್ಲಿ ಇಂಥದ್ದೊಂದು ಪರಿಸ್ಥಿತಿ ಇದೆ.ದೇಶವ್ಯಾಪಿ ನೋಡುವುದಾದರೆ ವಿಹಾರ,ಓರಿಸ್ಸಾಗಳಲ್ಲಿ ಈ ತರಹದ ವಾತಾವರಣವಿದೆ;ಕಾಶ್ಮೀರವೂ ಇದಕ್ಕೆ ಹೊರತಲ್ಲ.ಪೋಲಿಸು,ಮಿಲಟರಿ ಇತ್ಯಾದಿಗಳವೆ,ಅವು ದುರ್ಬಲರ ಪಾಲಿಗೆ ಮಾತ್ರ.ಇಲ್ಲಿ ಬರೆದರುವ ಸತ್ಯವನ್ನು ಯಾವ ಸರ್ಕಾರಗಳೂ ಒಪ್ಪಿಕೊಳ್ಳುವುದಿಲ್ಲ.ಹಾಗೆ ಒಪ್ಪಿಕೊಂಡರೆ ಸಂವಿಧಾನಕ್ಕೂ ಕಾನೂನಿಗೂ ಮರ್ಯಾದೆ ಇರುವುದಲ್ಲ.ನನ್ನಗಿನ್ನೂ ಮತಾಧಿಕಾರ ಬಾರದ ದಿನಗಳಲ್ಲಿ ನಾನದನ್ನು ಕಣ್ಣಿನಿಂದ ನೋಡಿದ್ದೇನೆ.ಬ್ಯಾಲೆಟ್ ಪೇಪರ್ ಪದ್ಧತಿಯಲ್ಲಿ ಚುನಾವಣೆ ನಡೆಯುತ್ತಿದ್ದ ಕಳೆದ ಎರಡ್ಮೂರು ದಶಕಗಳ ಹಿಂದೆ ಮತ ಪೆಟ್ಟಿಗೆಗಳನ್ನು ನಾಶ ಮಾಡುವ,ನಾಪತ್ತೆ ಮಾಡುವ ಪ್ರಕರಣಗಳು ವರದಿಯಾಗುತ್ತಿದ್ದವು,ಮತ ಪೆಟ್ಟಿಗೆಗಳನ್ನು ಸಾರಾಸಗಟಾಗಿ ಬದಲಾಯಿಸಿದ ಉದಾಹರಣೆಗಳೂ ಉಂಟು!ಇದು ಬರೀ ಈ ದೇಶದ ಕಥೆಯಲ್ಲ;ಪ್ರಪಂಚದ ಅನೇಕದ ದೇಶಗಳಲ್ಲಿ ಇಂಥಹ ಘಟನೆಗಳು ಘಟಿಸುತ್ತವೆ.ಎಲ್ಲಿ ಆಯುದ್ಧಗಳಿಗೂ,ಹಣಕ್ಕೂ ಪ್ರಾಮುಖ್ಯತೆ ಇದೆಯೋ ಅಲ್ಲಿ ಇದೆಲ್ಲಾ ಸಹಜ.ಪಕ್ಕದ ಪಾಕಿಸ್ತಾನದಲ್ಲಿ ಬಂದೂಕು ರಾಜಕಾರಣವನ್ನು ನಿರ್ದೇಶಿಸುತ್ತದೆ.ಅಪಘಾನ ದೇಶದಲ್ಲಿ ತಾಲಿಬಾನ್ ಸರ್ಕಾರ ಅಸ್ಥಿತ್ವಕ್ಕೆ ಬಂದಿದ್ದು ಹಾಗೇನೆ.ರಾಜ ಪ್ರಭುತ್ವ ಇರುವ ದೇಶಗಳಲ್ಲಿ ಬಂದೂಕು ಶಾಸನ ಬರೆಯುತ್ತದೆ!

ಈ ಲೇಖನ ಬರೆಯುವ ಮುನ್ನ ಮತ ಚಲಾವಣೆಯ ಕುರಿತು ಪ್ರಸ್ತಾವನೆ ಏಕೆಂದರೆ ಭಾರತದಲ್ಲಿ ನಿಜವಾದ ಪ್ರಜಾಪ್ರಭುತ್ವ ಅನುಷ್ಠಾನಗೊಂಡಿಲ್ಲ ಎಂದು ಹೇಳುವುದಕ್ಕೆ,ಮತದ ಘನತೆ ಪ್ರಜೆಗಳಿಗೆ ಅರ್ಥವಾಗಿಲ್ಲ ಎಂದು ಹೇಳುವುದಕ್ಕೆ,ಪ್ರಜಾ ಪ್ರಭುತ್ವದ ಹೆಸರಿನಲ್ಲಿ ಭಾರತದಲ್ಲಿ ನಡೆಯುತ್ತಿರುವ ಮತ್ತೊಂದು ಸುತ್ತಿನ ಸಾಮ್ರಾಜ್ಯಶಾಹಿ ಮಾದರಿಯ ರಾಜಕಾರಣವನ್ನು ವಿವರಿಸಲಿಕ್ಕೆ!ಇನ್ನೇನು ಮತ್ತೆ?ಭಾರತದ ಪ್ರಜೆ ಯಾವ ಅರ್ಥದಲ್ಲಿ ಪ್ರಭು?

ಹೆಂಡದ ಅಮಲಿನಲ್ಲಿ ಚುನಾವಣೆ ನಡೆಯುತ್ತದೆ,ಹಣದ ಆಮಿಷದಲ್ಲಿ ಚುನಾವಣೆ ನಡೆಯುತ್ತದೆ,ಜಾತಿಯ ಆಧಾರದಲ್ಲಿ ಚುನಾವಣೆ ನಡೆಯುತ್ತದೆ,ಧರ್ಮ ಸಂಘರ್ಷದ ಬೆಂಕಿಯ ಬಿಸಿಯಲ್ಲಿ ಚುನಾವಣೆ ನಡೆಯುತ್ತದೆ;ಜಾತ್ಯಾತೀತ ನಿಲುವು,ಅಭಿವೃದ್ಧಿಯ ಆಶಯದಲ್ಲಿ ಯಾವತ್ತು ಚುನಾವಣೆ ನಡೆದಿದೆ ಹೇಳಿ?ಒಬ್ಬ ಬೀದಿ ರೌಡಿ,ಒಂದು ಕಾಲದಲ್ಲಿ ಗಣೇಶ್ ಬೀಡಿಗೂ ಗತಿ ಇಲ್ಲದವನು ರಾಜಕೀಯ ಅಸ್ತಿತ್ವ ಪಡೆದ ಮೇಲೆ ಆತನ ವೈಭೋಗ ಜೀವನವನ್ನು ಗಮನಿಸಿ ನೋಡಿ;ಇವತ್ತು ಗ್ರಾಮ ಪಂಚಾಯತಿ ಚುನಾವಣೆಗೂ ಲಕ್ಷಾಂತರ ಹಣ ಸುರಿಯಬೇಕಾಗಿದೆ,ಸುರಿದಾದ ಮೇಲೆ?ಸ್ನೇಹಿತರೆ ನಿಮ್ಮ ನಿಮ್ಮ ಗ್ರಾಮಗಳಲ್ಲಿ ಗಮನಿಸಿ ನೋಡಿ;ಹದಿನಾಲ್ಕನೆಯ ಹಣಕಾಸಿನ ಬಳಕೆ ಮತ್ತದರ ದುರುಪಯೋಗ ಅರ್ಥವಾದೀತು!ಹಣ ಸುರಿದು ಚುನಾಯಿತನಾಗುವ ಸದಸ್ಯ ಹಣ ರಿಕವರಿಯಲ್ಲಿ ತೊಡಗುತ್ತಾನೆ,ಸಂಪೂರ್ಣ ರಾಜಕೀಯ ಈ ತಳಹದಿಯ ಮೇಲೆ ನಿಂತಿದೆ;ಹೀಗಾಗಿ ರಾಜಕೀಯ ಒಂದು ಉದ್ಯಮವಾಗಿ ಬದಲಾಗಿ ಹೋಗಿದೆ.ಒಬ್ಬ ಗ್ರಾಮ ಪಂಚಾಯತಿಯ ಅಧ್ಯಕ್ಷ ಏನಿಲ್ಲವೆಂದರೂ ಕೋಟಿಗಳ ಲೆಖ್ಖದಲ್ಲಿ ಲೂಟಿ ಹೊಡೆಯುತ್ತಾನೆ,ಲೆಖ್ಖ ಹುಡುಕುವುದು ಕಷ್ಟ.ಸರ್ಕಾರಿ ವ್ಯವಸ್ಥೆಯನ್ನು ಭ್ರಷ್ಟ ಕೂಟ ಆ ರೀತಿ ರೂಪಿಸಿಕೊಂಡಿದೆ.

ಬ್ರಿಟೀಷ್ ಭಾರತ ಚೆಂದಿತ್ತು!ಅವರು ಕ್ರೂರಿಗಳೇ ನಿಜ,ಕಟ್ಟುನಿಟ್ಟಿನ ಕಾನೂನುಗಳನ್ನು ಹೇರಿದ್ದರು,ಜನ ಪಾಲಿಸಬೇಕಿತ್ತು ಕೂಡಾ.ಆ ಕಾನೂನುಗಳಿಂದ ಇಕ್ಕಟ್ಟು ಉಂಟಾದಾಗ ಭಾರತದ ಕೆಲ ಪಟ್ಟಭದ್ರರು ಸ್ವಾತಂತ್ರ್ಯ ಚಳುವಳಿಯನ್ನು ಹುಟ್ಟು ಹಾಕಿರಬಹುದು.ಭಾರತದ ಇತಿಹಾಸದಲ್ಲಿ ಅಕ್ಷರ ಪರ್ವ ಆರಂಭವಾದದ್ದು ಬ್ರಿಟೀಷರಿಂದಲೇ,ಅವರು ಶಾಲೆಗಳನ್ನು,ವಿದ್ಯುತ್ ನ್ನು,ಸಂಚಾರಿ ವ್ಯವಸ್ಥೆಯನ್ನು ತಂದರು.ಇದಕ್ಕೂ ಮುನ್ನ ಭಾರತದಲ್ಲಿ ಏನಿತ್ತು?ಕತ್ತಿ ಕಠಾರಿಗಳಿಂದ ಸಂಸ್ಥಾನಗಳನ್ನು ಆಳುವುದು,ಗೆಲ್ಲುವುದು,ರಕ್ತ ಹರಿಸುವುದು ಇತ್ಯಾದಿ ಇತ್ತು.ಯುದ್ಧಗಳಾಗುತ್ತಿದ್ದವು;ಯುದ್ಧದ ಪರಿಣಾಮ ಜೀವ ಹಾನಿ,ಲೂಟಿ ಇತ್ಯಾದಿಯಾಗಿರುತ್ತಿತ್ತು.ಪ್ರತಿ ಯುದ್ಧದ ನಂತರದ ಪರಿಣಾಮಗಳನ್ನು ಗಮನಿಸಿ ನೋಡಿ:ಲೂಟಿ ಬಹು ಮುಖ್ಯ ಉದ್ದೇಶವಾಗಿ ಕಾಣಿಸುತ್ತದೆ.ಧನಕನಕಗಳ ಲೂಟಿ,ಸುಂದರ ಸ್ತ್ರೀಯರ ಒತ್ತುವರಿ,ಸೆರೆ ಸಿಕ್ಕವರನ್ನು ಗುಲಾಮರನ್ನಾಗಿ ಮಾಡಿಕೊಳ್ಳುವ ಪ್ರಕ್ರಿಯೆ!ಇದರಿಂದ ವ್ಯಕ್ತವಾಗುವುದೇನೆಂದರೆ ರಾಜನ ಉದ್ದೇಶ ದಾಹವಾಗಿರುತ್ತಿತ್ತು,ಬಹುತೇಕ ಅದು ರಕ್ತದಾಹವಾಗಿರುತ್ತಿತ್ತು.ಇದರ ಹೊರತು ಅಭಿವೃದ್ಧಿಯ ಉಲ್ಲೇಖಗಳು ನಮಗೆ ಇತಿಹಾಸದ ಉದ್ದಕ್ಕೂ ಬಹು ವಿರಳವಾಗಿ ಗೋಚರಿಸುತ್ತವೆ;ಭಾರತದಲ್ಲಿ ನಿರ್ಮಿಸಲಾಗಿರುವ ಕೆರೆ ಕಟ್ಟೆಗಳು,ಆಣೆಕಟ್ಟೆಗಳು ಮತ್ತು ಅಭಿವೃದ್ಧಿಪರ ಕಾರ್ಯಗಳು ಜರುಗಿದ್ದು ಬ್ರಿಟೀಷ್ ಭಾರತದಲ್ಲಿ!ಮತ್ತು ಸ್ವಾತಂತ್ರ್ಯಾನಂತರ.ರಾಜ ಮಹಾರಾಜರ ಕಾಲದ ಒಂದೇ ಒಂದು ಜನಾಭಿವೃದ್ಧಿ ಸ್ಮಾರಕವೊಂದನ್ನು ನಾವು ಕಾಣಲಾರೇವು,ಗುಡಿಗುಂಡಾರಗಳ ಹೊರತು!ಹೌದು,ಭಾರತದಲ್ಲಿ ಪುರಾತನ ಸಂಸ್ಕೃತಿ ಎಂದು ಬಲು ಹೆಮ್ಮೆಯಿಂದ ಹೇಳುವಂಥದ್ದು ಮೌಢ್ಯದಿಂದ ಕೂಡಿದೆ,ಗಮನಿಸಿ ನೋಡಿ.ದೇವರು ಕೊಡುತ್ತಾನೆ ಎಂದು ಆಕಾಶದ ಕಡೆಗೆ ಮುಖ ಮಾಡಲು ಹಚ್ಚಿದರು,ಜನರಲ್ಲಿ ಜ್ಞಾನದ ದೀವಿಗೆ ಹಚ್ಚಲಿಲ್ಲ.ಅರ್ಥ-ಪರಾಮರ್ಥವನ್ನು ಜ್ಞಾನ ಎಂದರು,ಆ ಜ್ಞಾನಿಗಳು ಬರೀ ಬೋಧನೆಗೆ ಮಾತ್ರ ಸೀಮಿತವಾದರು.ನೀವು ನೋಡಿ:ಜಗತ್ತಿಗೆ ಬುದ್ದಿ ಹೇಳಿದ ಯಾವ ದಾರ್ಶನಿಕನೂ ಸುಖ ಜೀವನ ಮಾಡಲಿಲ್ಲ.ಬುದ್ದ,ಬಸವ,ಅಂಬೇಡ್ಕರ್ ಯಾದಿಯಾಗಿ!ವಿಪರ್ಯಾಸವಲ್ಲವೇ?ಆತ್ಮ ಪರಮಾತ್ಮಗಳ ಪರಿಕಲ್ಪನೆ ಹುಟ್ಟು ಹಾಕಿದ ಸಾಕ್ರೆಟಿಸ್ ನೂ ಸುಖವಾದ ಸಾವನ್ನು ಕಾಣಲಿಲ್ಲ.ಜೀಸಸ್ ನ ಕೊನೆಯ ದಿನಗಳು ನಿಮಗೆ ಗೊತ್ತೇ ಇವೆ.

ಪುರಾತನ ಭಾರತದಲ್ಲಿ ಕ್ಷತ್ರೀಯರು,ಬ್ರಾಹ್ಮಣರು ಮಾತ್ರವಲ್ಲದೆ ದಲಿತ ವರ್ಗಗಳು ವಿದ್ಯೆ ಕಲಿತರೆ ನಾಲಿಗೆ ಕತ್ತರಿಸುವ ರೂಢಿ ಇತ್ತಂತೆ,ಎಂತಹ ದಾರುಣವಲ್ಲವೇ?ಭಾರತಕ್ಕೆ ಬ್ರಿಟೀಷರು ಬರುವ ಮುನ್ನ ಈ ದೇಶವನ್ನು ನಿರಕ್ಷರಿಗಳ ನಾಡು,ಹಾವಾಡಿಸುವವರ ನಾಡು,ಅನಾಗರಿಕರ ನಾಡು ಎಂದೇ ಕರೆಯಲಾಗುತ್ತಿತ್ತಂತೆ.ನಾಗರಿಕತೆ ಮೈಗೂಡಿದ್ದು ಭಾರತಕ್ಕೆ ಶಿಕ್ಷಣ ವ್ಯವಸ್ಥೆ ಪರಿಚಯವಾದ ಮೇಲೆ.ಒಳ್ಳೆಯದಕ್ಕೋ ಕೆಟ್ಟದ್ದಕ್ಕೋ ಭಾರತದಲ್ಲಿ ಮೊದಲು ಶಾಲೆಗಳನ್ನು ಪರಿಚಯಿಸಿದ್ದು ಬ್ರಿಟೀಷರು,ಈ ದೇಶದಲ್ಲಿ ಅಕ್ಷರದ ಬೀಜ ದಲಿತನ ಎದೆಯಲ್ಲಿ ಮೊಳಕೆ ಒಡೆದಿದ್ದು ಅಂದಿನಿಂದ.ಡಾ//ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಾಲ್ಯದ ಜೀವನದ ಶಿಕ್ಷಣದ ದಿನಗಳನ್ನು ನೀವು ಸ್ಮರಿಸಿಕೊಳ್ಳಿ,ಆತ ಅನೇಕ ಅವಮಾನ,ತಾತ್ಸಾರ,ತಿರಸ್ಕಾರಗಳನ್ನು ಭರಿಸಬೇಕಾಯಿತು.ಕಳೆದ ಇಪ್ಪತ್ತೈದು ಮೂವತ್ತು ವರ್ಷಗಳ ಹಿಂದೆ ದಲಿತರನ್ನು ಮುಟ್ಟಬಾರದು ಎನ್ನುವ ನಿಲುವಿನ ಮಾಸ್ತರನ ಉದ್ದದ ಕೋಲಿನಿಂದಲೇ ನಾನು ಶಿಕ್ಷಣ ಕಲೆತಿದ್ದು.ಇವತ್ತಿನ ನಲವತ್ತು ನಲವತ್ತೈದು ವರ್ಷಗಳ ವಯೋಮಾನದ ವ್ಯಕ್ತಿಗಳು ತಮ್ಮ ಬಾಲ್ಯಕಾಲವನ್ನು ಸ್ಮರಿಸಿಕೊಳ್ಳಬಹುದು.

ನೀವೊಮ್ಮೆ ಅನಂತಮೂರ್ತಿಯವರ ಕಥೆಯೊಂದನ್ನು ಆಧರಿಸಿ ನಿರ್ಮಿಸಿದ ಚಲನಚಿತ್ರವೊಂದನ್ನು ನೋಡಿರಬಹುದು,ಅದು ತಬರನ ಕಥೆ ಎಂದು.ಬ್ರಿಟೀಷರು ಭಾರತವನ್ನು ಬಿಟ್ಟು ಹೋದ ಮೇಲೆ ಇಲ್ಲಿನ ದಲಿತ ವರ್ಗಗಳು ಅನುಭವಿಸಿದ ದಾರುಣ ಯಾತನೆಯನ್ನು ಆ ಕಥೆ ಸೂಕ್ಷ್ಮವಾಗಿ ವ್ಯಕ್ತಪಡಿಸುತ್ತದೆ.ಸ್ವಾತಂತ್ರ್ಯ ಹೋರಾಟಗಾರರು ಎಂದು ಹೇಳಿಕೊಳ್ಳುವ ಆಗಿನ ಪುಂಡ ಪೋಕರಿಗಳು 1947ರ ನಂತರದ ದಿಗಳನ್ನು ಬಹು ಕಠೋರ ಮಾಡುತ್ತವೆ.ಪಿಂಚನಿಗಾಗಿ ಸ್ವತಂತ್ರ ಭಾರತದ ಸರ್ಕಾರಿ ಕಛೇರಿಗಳಿಗೆ ಅಲೆಯುವ ತಬರ ಸಾವಿನ ಕೊನೆಯವರೆಗೆ ಅಲೆಯುತ್ತಲೇ ಇರುತ್ತಾನೆ,ಹೀಗೆ ಅಲೆಯುತ್ತಾ ಅಲೆಯುತ್ತಾ ಆತ ಹೆಂಡತಿಯನ್ನು,ತನ್ನ ಬದುಕನ್ನು ಕಳೆದುಕೊಳ್ಳುತ್ತಾನೆ.ಆತ ಕೊನೆಗೆ ನೊಂದು ಹೇಳುವ ಮಾತು ಬ್ರಿಟೀಷರೇ ಪಾಡಿದ್ದರು ಎನ್ನುವುದು!ಪ್ರಜಾಪ್ರಭುತ್ವವನ್ನು ಈ ನೆಲಕ್ಕೆ ಪರಿಚಯಿಸಿದವರೂ ಬ್ರಿಟೀಷರೆ!ಅವರ ನೀತಿಗಳು ಕಠೋರವಾಗಿದ್ದರೂ ದುಡಿದು ಉಣ್ಣುವವರಿಗೆ ತೊಂದರೆ ಇರಲಿಲ್ಲ ಎನ್ನುವುದನ್ನು ಆ ಕಥೆ ಹೇಳುತ್ತದೆ.ಸ್ವಾತಂತ್ರ್ಯಾನಂತರ ಈ ದೇಶದ ರಾಜಕೀಯ ಚುಕ್ಕಾಣಿ ಹಿಡಿದ ದೇಶದದೊಳಗಿನ ಬ್ರಿಟೀಷರು ದೇಶವನ್ನು ಸಮರ್ಥವಾಗಿ ಕಟ್ಟುವ ಕೆಲಸ ಮಾಡಲೇ ಇಲ್ಲ.

ವಿಚಾರ ಮಾಡಿ ನೋಡಿ:ಭಾರತದಲ್ಲಿ ಲೂಟಿ ಎಂಬ ಕರಕುಶಲ ವಿದ್ಯೆ ಬಲ್ಲವನು ಶ್ರೀಮಂತನಾಗಿದ್ದಾನೆ,ಉಳಿದಂತೆ ಅನೇಕ ವರ್ಗಗಳು ಪಾರಂಪಾರಿಕವಾಗಿ ಬಡತನವನ್ನು,ದಡ್ಡತನವನ್ನು ಹಾಗೇ ಹೊತ್ತುಕೊಂಡಿವೆ;ಅವಕ್ಕೆ ರಾಜಕೀಯವೆಂದರೆ ಏನು?ಸಂವಿಧಾನವೆಂದರೆ ಏನು?ತಮ್ಮ ಹಕ್ಕುಗಳು ಎಂದರೆ ಏನು?ಸರ್ಕಾರ ಯಾರದ್ದು,ಯಾರು ಈ ದೇಶದ ಪ್ರಭು ಎಂದು ಇಲ್ಲಿಯವರೆಗೆ ಅರ್ಥವೇ ಆಗಿಲ್ಲ.ಆತ ಸಾಕ್ಷರನಾಗದ ಹಾಗೆ ವ್ಯವಸ್ಥಿತವಾಗಿ ನೋಡಿಕೊಳ್ಳಲಾಗುತ್ತಿದೆ.ಹೇಗೆ ಎಂದರೆ ಅದಕ್ಕೆ ಸ್ಪಷ್ಟ ಉದಾಹರಣೆಯನ್ನಾಗಿ ಆತ ತನ್ನ ಮತವನ್ನು ಕ್ಷುಲ್ಲಕ ಕಾರಣಗಳಿಗಾಗಿ ಮಾರಿಕೊಳ್ಳುತ್ತಿರುವುದನ್ನು ಹೇಳಬಹುದು.ಹೇಗಿದೆ ನೋಡಿ ಈ ದುಷ್ಟರ ಕೂಟ:ದೇಶದಲ್ಲಿ ಪ್ರಧಾನವಾಗಿ ಎರಡು ಪಕ್ಷಗಳು ಪ್ರಚಲಿತದಲ್ಲಿವೆ,ಒಂದು ಕಾಂಗ್ರೇಸ್ ಇನ್ನೊಂದು ಬಿಜೆಪಿ.ಒಂದು ಕನ್ನಡಿಯೊಳಗೆ ಬಂಗಾರ ತೋರಿಸುತ್ತಾ ತಾನು ಅಧಿಕಾರಕ್ಕೆ ಬಂದರೆ ಅದು ನಿಮಗೆ ದೊರೆಯಲಿದೆ ಎಂದು ಆಸೆ ತೋರಿಸುತ್ತಾ ಈ ದೇಶವನ್ನು ಆಳುತ್ತಾ ಬಂದಿದೆ.ಇನ್ನೊಂದು ರಾಮ ಮಂದಿರ ಮತ್ತು ಧರ್ಮಗಳ ಬೆಂಕಿ ಹಚ್ಚುತ್ತಾ ಅಧಿಕಾರಕ್ಕೆ ಬರುತ್ತಿದೆ.ಕನ್ನಡಿಯೊಳಗಿನ ಬಂಗಾರವೂ ಈ ಸ್ವಾತಂತ್ರ್ಯಾನಂತರದ ದಿನಗಳಿಂದ ದೊರೆಯಲಿಲ್ಲ.ಮತ್ತೊಂದರದ ಕಥೆ ನಿಮಗೆ ಗೊತ್ತೇ ಇದೆ:ಅದು ಮಾತಿನಲ್ಲೇ ಸಮಸ್ತ ದೇಶವಾಸಿಗಳ ಮನಸ್ತೃಪ್ತಿ ಪಡಿಸುತ್ತಿದೆ.

ಡಾ// ಬಾಬಾ ಸಾಹೇಬ್ ಅಂಬೇಡ್ಕರ್ ಅವರ ದಿವ್ಯ ಜ್ಞಾನ ಮತ್ತು ಕಠಿಣ ಪರಿಶ್ರಮದಿಂದ ಈ ದೇಶಕ್ಕೆ ಜಗತ್ತಿನಲ್ಲಿ ಇನ್ನೆಲ್ಲೂ ಇಲ್ಲದಂತಹ ಸರ್ವಶ್ರೇಷ್ಠ ಸಂವಿಧಾನ ಲಭ್ಯವಾಯಿತು.ಅದು ಎಲ್ಲಾ ಮತ-ಧರ್ಮ-ಪಂಥಗಳಿಗೂ ಸಮಾನ ನ್ಯಾಯ ನೀಡುವ ಗ್ರಂಥ.ಭಾರತದಲ್ಲಿ ಒಂದು ವರ್ಗ ಅದನ್ನು ಸಂವಿಧಾನ ಲೋಕಾರ್ಪಣೆಯಾದ ದಿನದಿಂದಲೂ ದ್ವೇಷಿಸುತ್ತಲೇ ಬಂದಿದೆ.ಭಾರತದಲ್ಲಿ ಬಹು ಸಂಖ್ಯಾತ ದಲಿತ ವರ್ಗಗಳು ಇಲ್ಲದೇ ಹೋಗಿದ್ದರೆ,ದಲಿತ ವರ್ಗಗಳು ಸುಶಿಕ್ಷಿತವಾಗಿರದೇ ಹೋಗಿದ್ದರೆ ಸಂವಿಧಾನವನ್ನೂ ಬಾಬಾ ಸಾಹೇಬರನ್ನು ಒಳ ಒಳಗೇ ದ್ವೇಷಿಸುವ ಜನ ಯಾವತ್ತೋ ಸಮಾಧಿ ಮಾಡಿ ಬಿಡುತ್ತಿದ್ದರು.ಇಷ್ಟಾಗಿಯೂ ಸಂವಿಧಾನವನ್ನು ಸುಡುವಿಕೆ,ಸಂವಿಧಾನ ಶಿಲ್ಪಿಯ ತೇಜೋವಧೆಗೆ ಪ್ರಯತ್ನಿಸುತ್ತಲೇ ಇದ್ದಾರೆ.ಇತ್ತೀಚಿನ ಕೆಲ ವರ್ಷಗಳಲ್ಲಿ ದಲಿತ ಹುಡುಗರೇ ಮೀಸಲಾತಿ ಮತ್ತು ಸಂವಿಧಾನ ವಿರೋಧಿ ನಿಲುವು ತಾಳುತ್ತಿರುವ ಆಘಾತಕಾರಿ ಅಂಶಗಳು ಕಾಣತೊಡಗಿವೆ.ಅವು ಸಮ್ಮೋಹನಕ್ಕೆ ಒಳಗಾಗಿವೆ!

ಸರ್ಕಾರಿ ಕಛೇರಿಗಳು ಈ ದೇಶದ ಮುಗ್ಧ ಪ್ರಜೆಯ ಪಾಲಿಗೆ ಕಗ್ಗಂಟಾಗಿರುವ ಪ್ರಸ್ತುತ ಸಂದರ್ಭದಲ್ಲಿ ಪ್ರಜಾಪ್ರಭುತ್ವ ಪ್ರಶ್ನಿಸಲ್ಪಡುತ್ತದೆ.ಎಲ್ಲಿ ನೋಡಿದರೂ ಹಣ,ಹಣ,ಹಣ.ಭ್ರಷ್ಟಾಚಾರ ತಾಂಡವವಾಡುತ್ತಿದೆ.ಕೋಟ್ಯಾಂತರ ತೆರಿಗೆ ಹಣದಲ್ಲಿ ರೂಪಿಸಲಾಗುತ್ತಿರುವ ಕಾಮಗಾರಿಗಳು ರಾಜಕೀಯ ಹಿಂಬಾಲಕ ಗುತ್ತಿಗೆದಾರರ ಮುಖೇನ ಮತ್ತೆ ರಾಜಕಾರಣಿಗಳ ಪಾಲಾಗುತ್ತಿದೆ,ಅಂದರೆ ಕಿಕ್ ಬ್ಯಾಕ್! ಮತವನ್ನು ಮಾರಿಕೊಂಡ ಜನ ಚಿಲ್ಲರೆ ಕನಸುಗಳಿಗಾಗಿ ದಾರಿ ಕಾಯುತ್ತಾರೆ,ಉದ್ಯೋಗಖಾತ್ರಿ ಕೂಲಿ,ಒಂದು ಶೌಚಾಲಯ ಹೆಚ್ಚೆಂದರೆ ಒಂದು ಆಶ್ರಯ ಯೋಜನೆ ಮನೆ;ಅವೂ ದುಡ್ಡುಕೊಟ್ಟು ಪಡೆದುಕೊಳ್ಳಲೇಬೇಕು.

ಈಗ ಹೇಳಿ?ನಾವು ಯಾವ ಅರ್ಥದ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ?

“ಲೇದು ನಾಯಕ್,ಎಲೆಕ್ಷನ್ ವಸ್ತುನ್ನಾಯ್ ಕದಾ,ಅಪ್ಪುಡು ಒಕ ಟೆಂಟ್ ಎಸ್ತುನ್ನಾರು,ಅಂದುಲು ಕೋಳಿ-ಕುರಿ ಮಾಂಸಂ ಕೋರ ಮರಿಯು ಬಿರ್ಯಾನಿ ಒಂಟಿಸ್ತಾರು.ಅಕ್ಕಡಿ ಜನಾಂದರೂ ಮಂದು ತಾಗೇಸಿ ಭೋಜನಂ ಚೇಸ್ತುನ್ನಪ್ಪಡು ಇಕ್ಕಡಿ ಓಟಿಂಗ್ ಆಯ್ ಪೋತುಂದಿ!”ಅಂದ ನನ್ನ ಗೆಳೆಯ,ಅಂದರೆ ಚುನಾವಣೆಯ ದಿನ ಗಲ್ಲಿಗಲ್ಲಿಗಳಲ್ಲಿ ಟೆಂಟು ಹಾಕಿ ಕೋಳಿ ಕುರಿ ಮಾಂಸದ ಏರ್ಪಾಡು ಮಾಡಲಾಗುತ್ತದೆ.ಜನ ಕುಡಿಯುತ್ತಾ ಊಟ ಮಾಡುವ ಸಂದರ್ಭದಲ್ಲಿ ಈ ಕಡೆ ಓಟಿಂಗ್ ಮುಗಿದಿರುತ್ತದೆ.ಭಾಗಶಃ ರಾಯಲಸೀಮಾ ಭಾಗದಲ್ಲಿ ಈ ಮಾದರಿಯ ಚುನಾವಣೆ ನಡೆಯುತ್ತದೆ ಎನ್ನುವುದು ಆತನ ಮಾತು.ಅದು ನಿಜವೂ ಹೌದು!

ಈ ಪುರುಷಾರ್ಥಕ್ಕಾಗಿ,ಈ ದುಷ್ಟರಿಗಾಗಿ ಸ್ವಾತಂತ್ರ್ಯ ಬೇಕಿತ್ತಾ ಅನ್ನಿಸುತ್ತದೆ.ಉಳಿದಿದ್ದು ಮುಂದಿನ ವಾರಕ್ಕೆ…



ನಿಮ್ಮವನು-ಲಕ್ಷ್ಮೀಕಾಂತ ನಾಯಕ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಹೋರಾಟವೂ ಉದ್ದಿಮೆಯಾಗಿ ಹೋದ ಈ ಸಂಕೀರ್ಣ ಕಾಲಘಟ್ಟದ ಕುರಿತು

 ನೀವು ಪರೀಕ್ಷಿಸಿ ನೋಡಿ:ಲಕ್ಷಾಂತರ,ಕೋಟ್ಯಾಂತರ ಸಂಘಟನೆಗಳು ಹೋರಾಟಗಾರರು ಜನ್ಮತಳೆದಿದ್ದಾರೆ;ಅಷ್ಟೇ ಸಮಸ್ಯೆಗಳು ಹೆಚ್ಚಾಗುತ್ತಿವೆ.ಇವೆಲ್ಲವನ್ನೂ ವಿಶ್ಲೇಷಿಸಿ ನೋಡಿದಾಗ ಎ...