ಸೋಮವಾರ, ಮಾರ್ಚ್ 30, 2020

ನಂದನವನದಂತಹ ಈ ಸ್ವರ್ಗ ಭೂಮಿಗೆ ಅದೆಲ್ಲಿಂದ ಬಂದು ಒಕ್ಕರಿಸಿತು ಕರೋನಾ?


ನಂದನವನದಂತಹ  ಸ್ವರ್ಗ ಭೂಮಿಗೆ ಅದೆಲ್ಲಿಂದ ಬಂದು ಒಕ್ಕರಿಸಿತು ಕರೋನಾ

ಈ ಕರೋನಾ ಮಹಾ ಮಾರಿ ನಮ್ಮ ದೇಶವನ್ನು ಪ್ರವೇಶಿಸಿರುವ ಈ ಸಂದಿಗ್ಧ ಸಂದರ್ಭದಲ್ಲಿ ಸೋಕಾಲ್ಡ್‌ ಸಮಾಜ ಸೇವಕರು ವಿಚಿತ್ರ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ!ತಾವು ಮಾಡುತ್ತಿರುವುದು ಸರಿಯಾ,ಅರ್ಥಪೂರ್ಣವಾ?ಊಹುಂ,ಒಂದೂ ಗೊತ್ತಿಲ್ಲ.ಐದಾರು ರೂಪಾಯಿಗೆ ದೊರೆಯಬಹುದಾದ ಅತ್ಯಂತ ಕಳಪೆ ಗುಣಮಟ್ಟದ ಮಾಸ್ಕುಗಳನ್ನು ತಂದು ಅಮಾಯಕ ಜನರಿಗೆ ಹಂಚುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.ಹಾಗೆ ಮಾಡುತ್ತಾ ಪ್ರಕಟವಾಗದ ಕೇವಲ ಪಿಡಿಎಫ್‌ಗೆ ಮಾತ್ರ ಸೀಮಿತವಿರುವ ದಿನ ಪತ್ರಿಕೆಗಳಿಗೆ ಸುದ್ದಿ ಕೊಡುವ ಮೂಲಕ ತಮ್ಮ ಬೆನ್ನನ್ನು ತಾವೇ ಚಪ್ಪರಿಸಿಕೊಳ್ಳುತ್ತಿದ್ದಾರೆ.ಇದರ ಹಿನ್ನೆಲೆಯಲ್ಲಿ ಮಾನವೀಯ ಕಳಕಳಿ ಇಲ್ಲ.ತಮ್ಮ ಪ್ರಚಾರದ ತೆವಲನ್ನು ಈ ಮೂಲಕ ಈಡೇರಿಸಿಕೊಳ್ಳುವ ಯತ್ನ ಮಾಡುತ್ತಿದ್ದಾರೆ.ಭಾರತದ ಹಳ್ಳಿಗಳ ಮುಗ್ಧ ಪ್ರಜೆಯ ಮನೋ ಭೂಮಿಕೆಯ ಮೇಲೆ ಹೀರೋ ಆಗಲೆತ್ನಿಸುವ ಆ ಕ್ರಮ ಅಕ್ಷಮ್ಯ!ಅವು ಅಮಾಯಕ ಜನ;ಹಾಲು ಎಂದು ನಂಬಿಸಿ ವಿಷ ಕೊಟ್ಟರೂ ಕುಡಿದು ಬಿಡುತ್ತವೆ.ಈ ತರಹದ ಉದಾಹರಣೆಗಳನ್ನು ಲಕ್ಷ ಕೊಡಬಹುದು;ಯಾರೋ ಹುಟ್ಟಿಸಿದ ಸುಳ್ಳು ವದಂತಿಗೆ ಕಲ್ಲಿನ ಗಣಪತಿಗೆ ಹಾಲು ಕುಡಿಸಿದ ದೇಶವಿದು;ಅತ್ಯಂತ ಬೇಗ ಸಮೂಹಸನ್ನಿಗೆ ಒಳಗಾಗುತ್ತದೆ.ಇಷ್ಟಕ್ಕೂ ನೀವು ನೀಡುವ ಆ ಅಗ್ಗದ ಮಾಸ್ಕುಗಳಿಂದ ಏನಾದರೂ ಪ್ರಯೋಜನೆ ಇದೆಯಾ ಎಂದು ಪ್ರಶ್ನೆ ಹಾಕಿಕೊಂಡು ಉತ್ತರ ಕಂಡುಕೊಳ್ಳಲು ಯತ್ನಿಸಿದಾಗ...

“ಸದ್ಯಕ್ಕೆ ಜನಗಳು ಹೋಮ್‌ ಕ್ವಾರೆಂಟೈನ್‌ನಲ್ಲಿ ಇರುವ ಅಗತ್ಯವಿದೆ.ಅದೆಲ್ಲದಕ್ಕೂ ಹೆಚ್ಚು ಅಂದರೆ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.ಇಲ್ಲಿ ಮುಖ್ಯವಾಗಿ ಜನಗಳಿಗೆ ಏನಾದರೂ ಸಹಾಯ ಮಾಡಲೇಬೇಕು ಎನ್ನುವುದಾದರೆ ಸ್ಯಾನಿಟೈಜೆಷನ್‌ ಬಗ್ಗೆ ಅರಿವು ಮೂಡಿಸಬೇಕು.ಶುಚಿತ್ವಕ್ಕೆ ಮಹತ್ವ ಕೊಡುವುದನ್ನು ಪ್ರತಿಯೊಬ್ಬರಿಗೂ ತಿಳಿಸಬೇಕು.ಪ್ರತಿ ವಸ್ತುವನ್ನು ಮುಟ್ಟಿದಾಗಲೂ ಸಾಬೂನಿನಿಂದ ಕೈಗಳನ್ನು ತೊಳೆದುಕೊಳ್ಳಬೇಕು.ತಮ್ಮ ಕೈಗಳನ್ನು ವೈರಸ್‌ ದೇಹ ಪ್ರವೇಶಿಸಬಹುದಾದ ಕಣ್ಣು,ಬಾಯಿ,ಮೂಗಿನ ಹತ್ತಿರ ತಾರದೆ ಇರಬೇಕು.ಮುಖ್ಯವಾಗಿ ಪರಸ್ಪರರು ಅಂತರ ಕಾಯ್ದುಕೊಳ್ಳಬೇಕು.ಈ ಮಾಸ್ಕಿನಿಂದ ಏನೂ ಪ್ರಯೋಜನೆ ಇಲ್ಲ.ಮಾಸ್ಕು ಯಾರು ಬಳಸಬೇಕು ಎಂದರೆ ಕೆಮ್ಮು,ನೆಗಡಿ,ಜ್ವರ ಇರುವಂತಹ ವ್ಯಕ್ತಿಗಳು ಬಳಸಬೇಕು.ಏಕೆಂದರೆ,ಕೆಮ್ಮಿದಾಗ,ಸೀನಿದಾಗ ಆತನ ಮೂಗು ಮತ್ತು ಬಾಯಿಯಿಂದ ಹೊರ ಚಿಮ್ಮುವ ಕಣಗಳು ಇತರ ವ್ಯಕ್ತಿಗೆ ಸ್ಪ್ರೆಡ್‌ ಆಗದಿರಲಿ ಎಂದು.ನಾರ್ಮಲ್‌ ವ್ಯಕ್ತಿಗೆ ಅದರ ಅಗತ್ಯವಿಲ್ಲ.ಒಂದು ವೇಳೆ ನಾರ್ಮಲ್‌ ವ್ಯಕ್ತಿ ಮಾಸ್ಕ ಧರಿಸಿದಾಗ ಪಕ್ಕದಲ್ಲಿ ಕರೋನಾ ಸೋಂಕಿತ ವ್ಯಕ್ತಿ ಇದ್ದರೆ ಮಾಸ್ಕಿನಿಂದ ಸೋಂಕು ತಗಲುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.ಈ ಮಾಸ್ಕಿನಿಂದ ಇನ್ನೊಂದು ತೊಂದರೆ ಇದೆ;ಒಂದು ಮಾಸ್ಕನ್ನು ಹೆಚ್ಚೆಂದರೆ ಆರು ತಾಸು ಬಳಸಬೇಕು.ಅದರ ಬಳಕೆಯ ನಂತರ ಅದನ್ನು ನಾಶ ಮಾಡಬೇಕು.ತುಂಬಾ ಜನ ಕೊಂಡ ಒಂದು ಮಾಸ್ಕನ್ನು ದೀರ್ಘಾವದಿ ಬಳಸುತ್ತಾರೆ,ತಪ್ಪದು.ಮಾಸ್ಕನ್ನು ಆರು ತಾಸು ಮಾತ್ರ ಬಳಸಬೇಕು.ಕೊನೆಯದಾಗಿ ಒಂದು ಮಾತು:ನಾರ್ಮಲ್‌ ವ್ಯಕ್ತಿಗಳು ಮಾಸ್ಕ್‌ ಬಳಸುವ ಅಗತ್ಯವಿಲ್ಲ.ಡಸ್ಟ್‌ ಅಲರ್ಜಿಯಂತಹ ತೊಂದರೆ ಇರುವವರು ಮಾಸ್ಕ್‌ ಬಳಸಬೇಕು.ಈ ಕಲುಷಿತ ವಾತಾವರಣದಲ್ಲಿ ಮಾಸ್ಕ್‌ ಬಳಸುವ ಅಗತ್ಯ ಕಡ್ಡಾಯವಾಗಿದ್ದರೂ ಈ ಕರೋನಾ ನೆಪಕ್ಕೆ ಮಾಸ್ಕ್‌ ಬಳಸುವುದು,ದೀರ್ಘಾವದಿ ಒಂದೇ ಮಾಸ್ಕನ್ನು ಬಳಸುವುದು,ಬಳಸಿದ ಮಾಸ್ಕನ್ನು ಎಲ್ಲಂದರಲ್ಲಿ ಬಿಸಾಕುವುದು ತುಂಬಾ ಅಪಾಯ!”ಎಂದರು ನನ್ನ ವೈದ್ಯ ಸ್ನೇಹಿತರೊಬ್ಬರು.ಇದು ಸತ್ಯ ಕೂಡಾ.ಜಾಗತಿಕವಾಗಿ ಬಹುತೇಕ ವೈದ್ಯರ ಅಭಿಪ್ರಾಯ ಕೂಡಾ ಇದೇ ಆಗಿದೆ.ನಾರ್ಮಲ್‌ ವ್ಯಕ್ತಿ ಕೆಮ್ಮಿದಾಗ,ಸೀನಿದಾಗ ಯಾವ ವೈರಸ್‌ ಸ್ಪ್ರೆಡ್‌ ಆಗುತ್ತವೆ ಹೇಳಿ?ಆದರೆ ಸೋಂಕಿತರು ಮಾತ್ರ ಕಡ್ಡಾಯವಾಗಿ ಮಾಸ್ಕ್‌ ಬಳಸಲೇಬೇಕು;ಬರೀ ಮಾಸ್ಕ್‌ ಬಳಸುವುದಷ್ಟೇ ಅಲ್ಲ;ಅವರು ಸಾಮಾಜಿಕ ಸ್ವಾಸ್ಥ್ಯವನ್ನೂ ಕಾಪಾಡಬೇಕು.ಹೋಮ್‌ ಕ್ವಾರೆಂಟೈನ್‌ ಅಥವಾ ಸರ್ಕಾರದ ನಿಗಾವಣೆಗೆ ಒಳಪಡಬೇಕು.
         

          ಏನಿದು ಮಾಸ್ಕ್‌ ಉಚಿತ ವಿತರಣೆಯ ಹಿನ್ನೆಲೆ?ಮಾಸ್ಕ್‌ ವಿತರಿಸುವ ಮೂಲಕ ಜನರನ್ನು ಕಾಪಾಡಿದಂತಾಗುತ್ತದಾ?ಮಾಸ್ಕ್‌ ಜೀವನಾವಶ್ಯಕ ವಸ್ತುವಾ?ಬಿಡಿ ಸ್ವಾಮಿ ನಾಟಕ!ಸಮಾಜಕ್ಕೆ,ಯಾವ ಮೂಲಭೂತ ಸೌಕರ್ಯಗಳನ್ನೂ ಹೊಂದಿರದ ಅನೇಕ ಹಳ್ಳಿಗಳು ಭಾರತದಲ್ಲಿವೆ.ಅವರಿಗಿನ್ನೂ ತಮ್ಮ ಮೂಲಭೂತ ಹಕ್ಕುಗಳೇ ಲಭ್ಯವಾಗಿಲ್ಲ.ಕೇಂದ್ರ ಸರ್ಕಾರ ಕೆಲವು ಸೌಲಭ್ಯಗಳನ್ನು ಘೋಷಿಸುವುದರ ಮೂಲಕ ಜನರ ಜೊತೆ ನಾವಿದ್ದೇವೆ ಎನ್ನುವ ವಿಶ್ವಾಸ ತುಂಬುವ ಪ್ರಯತ್ನ ನಡೆಸಿತು.ನಿಮಗೆ ಗೊತ್ತೇ?ಭಾರತದ ಬಹುತೇಕ ಹಳ್ಳಿಗರಿಗೆ ಕಾರ್ಮಿಕ ಇಲಾಖೆ ಎನ್ನುವುದೊಂದು ಇದೆ ಎನ್ನುವುದೇ ಗೊತ್ತಿಲ್ಲ.ತುಂಬಾ ಜನ ಜನಧನ್‌ ಖಾತೆಯನ್ನು ಹೊಂದಿಲ್ಲ.ಕೆಲವರ ಹತ್ತಿರ ಇನ್ನೂ ಆಧಾರ್‌ ಕಾರ್ಡೂ ಇಲ್ಲ.ಯಾವ ಬಡವನಿಗೆ ಈ ಸಂದರ್ಭದಲ್ಲಿ ಸರ್ಕಾರದ ಔದಾರ್ಯ ತಲುಪುತ್ತದೆ?ಹೀಗಿರುವಾಗ ಸಮಾಜ ಸೇವೆಯನ್ನು ಮಾಡಲೇಬೇಕು ಎನ್ನುವ ಆಶಯ ಇರುವವರು ಪ್ರಸ್ತುತ ಸಂದರ್ಭದಲ್ಲಿ ಜನರಿಗೆ ಏನು ಅಗತ್ಯ ಎನ್ನುವುದರ ಕುರಿತು ಯೋಚಿಸಬೇಕು.ಹಳ್ಳಿಗರಿಗೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಇರುತ್ತವೆ,ಮಹಿಳೆಯರಿಗೆ ವಿಟಮಿನ್‌ ಮಾತ್ರೆಗಳ ಅಗತ್ಯ ಇರುತ್ತದೆ,ಗರ್ಭಿಣಿ ಸ್ತ್ರೀಯರಿರುತ್ತಾರೆ;ಅವರ ನಿಗಾವಣೆ ಅತ್ಯಗತ್ಯ.

          ಇದೆಲ್ಲದಕ್ಕೂ ಮಿಗಿಲು ಸ್ಯಾನಿಟೈಜೆಷನ್‌ನ ಅರಿವು ಮೂಡಿಸುವುದು!ಪದೇ ಪದೇ ಕೈತೊಳೆದುಕೊಳ್ಳುವುದರ ಬಗ್ಗೆ ಮನ ಮುಟ್ಟುವ ಹಾಗೆ ತಿಳಿಸುವುದು,ಸಾಮಾಜಿಕ ಅಂತರ ಮತ್ತು ಬೇರೆ ವ್ಯಕ್ತಿಯನ್ನು ಮನೆಯೊಳಕ್ಕೆ ಕರೆದುಕೊಳ್ಳುವುದನ್ನು ತಡೆಯುವುದು,ಮತ್ತು ವಲಸಿಗ ಕೂಲಿ ಕಾರ್ಮಿಕರನ್ನು ಸೂಕ್ತ ತಪಾಷಣೆಯ ಹೊರತು ಗ್ರಾಮ ಪ್ರವೇಶಿಸದ ಹಾಗೆ ನಿರ್ಬಂಧಿಸುವುದು.ಸದ್ಯಕ್ಕೆ ಸಮಾಜ ಸೇವಕರ ಅಗತ್ಯವಿಲ್ಲ ಜನಕ್ಕೆ.ಪೋಲಿಸ್‌ ಇಲಾಖೆ,ಆರೋಗ್ಯ ಸಹಾಯಕರು,ಗ್ರಾಮಪಂಚಾಯತಿ,ಗ್ರಾಮಲೆಖ್ಖಿಗರ ಅಗತ್ಯವಿದೆ.ಇದರ ಜೊತೆ ಜನರ ಸಹಕಾರವೂ ಅತ್ಯಗತ್ಯ.ಪ್ರಸ್ತುತ ಸಂದರ್ಭದಲ್ಲಿ ಗ್ರಾಮೀಣ ಭಾಗದವಿದ್ಯಾವಂತ  ಯುವಕರ ಹೆಗಲ ಮಹತ್ತರ ಜವಬ್ದಾರಿ ಇದೆ.ಅಶಿಕ್ಷಿತರು,ಕೆಲ ಮೊಂಡು ಜನಗಳಿಗೆ ಸೂಕ್ತ ರೀತಿಯ ತಿಳುವಳಿಕೆ ನೀಡಬೇಕು.ಜನ ಸಾಮೂಹಿಕವಾಗಿ ಸೇರುವುದನ್ನು ನಿರ್ಬಂಧಿಸಬೇಕು.ಜನ ಬುದ್ದಿಗೇಡಿಗಳ ಹಾಗೆ ವರ್ತಿಸಿದಾಗ ಕೂಡಲೆ ಸಂಬಂಧಿಸಿದವರ ಗಮನಕ್ಕೆ ತರಬೇಕು.

          ಬಿಡಿ,ಅಗ್ಗದ ಮಾಸ್ಕ್‌ ಹಂಚುವ ಆ ಮೂಲಕ ಬಿಟ್ಟಿ ಪ್ರಚಾರ ಪಡೆಯುವ ಸ್ವಾರ್ಥವನ್ನು.ಸ್ವಾರ್ಥಕ್ಕೆ ಇದು ಸೂಕ್ತ ಕಾಲವಲ್ಲ.ಒಂದು ಉಡಾಫೆ ಇಡೀ ಊರನ್ನೇ ಸ್ಮಶಾನ ಮಾಡಬಹುದು.ಈ ಮಾಸ್ಕ್‌ ಆರು ತಾಸಿನ ನಂತರ ಬದಲಾಯಿಸಬೇಕು.ನಿಮ್ಮಿಂದಲೇ ಹೊರಬಿದ್ದ ಕಣಗಳು ಅದರಲ್ಲಿ ತುಂಬಿರುತ್ತವೆ.ಅದನ್ನು ಸೂಕ್ತ ರೀತಿಯಲ್ಲಿ ನಾಶ ಮಾಡಿ.ಮಾಸ್ಕ್‌ ಫ್ಯಾಷನ್‌ ಅಲ್ಲ.

          ಕೊನೆಯದಾಗಿ:ಕರೋನಾ ವೈರಸ್ಸಿಗೆ ಮದ್ದಿಲ್ಲ ಎನ್ನುವುದೇ ಆತಂಕಕಾರಿ ವಿಷಯವಾಗಿದೆ.ಅದು ನೆಗಡಿ ಪ್ರಬೇಧಕ್ಕೆ ಸೇರಿದ ಖಾಯಿಲೆ.ನೆಗಡಿಯೂ ತೀವ್ರವಾಗಿ ಬಾಧಿಸಿದಾಗ ಶ್ವಾಸಕೋಶ ಸಂಬಂಧೀ ತೊಂದರೆಗಳು ಉಂಟಾಗುತ್ತವೆ.ಆ ವೈರಸ್‌ ಸೂಕ್ತ ಔಷಧಿಗಳಿಂದ ನಿಯಂತ್ರಣಕ್ಕೆ ಬರುತ್ತದೆ.ಈ ವೈರಾಣಿಗೆ ಔಷಧಿ ಇಲ್ಲ.ವೈರಸ್‌ ಸೋಂಕಿತ ಪ್ರತಿ ವ್ಯಕ್ತಿಯೂ ಸಾಯುತ್ತಾನೆ ಅಂತ ಅರ್ಥವಲ್ಲ.ಸದ್ಯಕ್ಕೆ ಇದಕ್ಕೆ ಏಕೆ ಹೆದರಬೇಕಾಗಿ ಬಂದಿದೆ ಎಂದರೆ ಇದರ ತೀವ್ರವಾದ ಹರಡುವಿಕೆಯ ಗುಣಕ್ಕಾಗಿ!ಯಾರಲ್ಲಿ ಹೆಚ್ಚು ರೋಗನಿರೋಧಕ ಶಕ್ತಿ ಇದೆ,ಯಾರಲ್ಲಿ ಇಲ್ಲ ಎಂದು ನಿರ್ಧರಿಸುವುದು ಹೇಗೆ?ಅದಲ್ಲದೆ ಇದು ಅರವತ್ತಕ್ಕಿಂತ ಮೇಲ್ಪಟ್ಟ ವಯಸ್ಸಿನ ಹಿರಿಯರಿಗೆ ಮಾರಣಾಂತಿಕವಾಗಿದೆ.ಇದೇ ಭಯವನ್ನು ಉಂಟು ಮಾಡಿದೆ.

          ಏನೇ ಕಷ್ಟಗಳಿರಲಿ,ಭ್ರಾತೃತ್ವ,ಅಣ್ಣ ತಮ್ಮ,ತಂದೆ ತಾಯಿ ಎನ್ನುವ ಭಾವನೆಗಳಿಂದ ಇಡೀ ದೇಶವೇ ಒಂದು ಕುಟುಂಬ ಎಂದು ಬದುಕುತ್ತಿರುವವರು ನಾವು.ಸ್ವರ್ಗ ಭೂಮಿ ಇದು.ಇದು ಸ್ಮಶಾನವಾಗದಿರಲಿ ಎನ್ನುವುದು ಪ್ರಜಾ ಸ್ಪಂದನದ ಆಶಯ.

                                                                                                                  ಲಕ್ಷ್ಮೀಕಾಂತ ನಾಯಕ

ಶನಿವಾರ, ಮಾರ್ಚ್ 28, 2020

ಗಂಡಸಿನ ಪ್ರೇಮ ಬಂಧನದಲ್ಲಿ ಬಂಧಿಯಾದ ಹೆಂಗಸಿನ ಭಾವನೆಗಳ ಮೇಲೊಂದು ವಿಚಾರ ಲಹರಿ

ಹೆಣ್ಣು ಪುರುಷನ ಅಪನಂಬಿಕೆ,ಆತನ ಅಹಂ,ಆತನ ಅನಾರೋಗ್ಯಕಾರಿ ಸ್ವಾರ್ಥ,ಮತ್ತು ಆತನ ಹೇಡಿತನ ಗುಲಾಮಳಾಗಿದ್ದಾಳೆ.ಕೈಲಾಗದ ಪುರುಷ ಹೆಣ್ಣಿನ ಮೇಲೆ ಅಪನಂಬಿಕೆ ತಾಳುತ್ತಾನೆ ಎನ್ನುವುದು ನನ್ನ ಬಲವಾದ ಪ್ರತಿಪಾದನೆ.ಈ ಹಿನ್ನೆಲೆಯಲ್ಲಿ ಹೆಣ್ಣಿ ಭಾವನೆಗಳ ಸುತ್ತಾ ಒಂದು ಚಿಕ್ಕ ಬರಹ,ಮನೆಯಲ್ಲಿಯೇ ಇದ್ದೀರಲ್ಲ,ಆಕೆಯ ಭಾವನೆ ಅರ್ಥವಾಗಲೆಂದು!ಓದಿಕೊಳ್ಳಿ:

ಗಂಡಸಿನ ಪ್ರೇಮ ಬಂಧನದಲ್ಲಿ ಬಂಧಿಯಾದ ಹೆಂಗಸಿನ ಭಾವನೆಗಳ ಮೇಲೊಂದು ವಿಚಾರ ಲಹರಿ

             “ಏನಿದೆ?ಕಸ,ಮುಸುರೆ,ಮನೆವಕೆಲಸ,ರಾತ್ರಿ ಹಾಸಿಗೆಯ ಸೇವೆಯ ಹೊರತು ಹೆಣ್ಣಿಗೆ!”ಎಂದಳು ಆಕೆ.ಆಕೆಯ ಕಣ್ಣುಗಳಲ್ಲಿ ಹತಾಶೆಯ ಭಾವ ಅತ್ಯಂತ ಸ್ಪಷ್ಟವಾಗಿ ಕಾಣಿಸುತ್ತಿತ್ತು.ಎಲ್ಲವೂ ಇದೆ ಆಕೆಗೆ;ಹಣ,ಆಸ್ತಿ,ಬಂಗಾರ,ಬಂಗಲೆ,ಹವಾನಿಯಂತ್ರಿತ ವ್ಯವಸ್ಥೆ;ಸ್ವಾತಂತ್ರ್ಯವೊಂದನ್ನು ಬಿಟ್ಟು!ಕನಸುಗಳಿಗೆ ಸಮಾಧಿ ಕಟ್ಟುತ್ತಾ ಪ್ರೇಮದ ಸಂಕೋಲೆಯಲ್ಲಿ ಸಮಾಧಿಯಾಗುತ್ತಾ ಆಕೆ ಸುಖವಾಗಿದ್ದಾಳೆ;ದೊಡ್ಡ ಮನೆ ಹೆಣ್ಣು ಮಗಳಾಕೆ.ಪ್ರಪಂಚ ಆಕೆಯ ಸುಖದ ಸುಪ್ಪತ್ತಿಗೆ ಕಂಡು ಹೊಟ್ಟೆ ಉರಿದುಕೊಳ್ಳುತ್ತಿದ್ದರೆ ಆಕೆ ಸ್ವಾತಂತ್ರ್ಯ ರಹಿತ ಜೀವನಕ್ಕೆ ಬೇಸತ್ತು ಸುಖದ ಸಂಕೋಲೆಯೊಳಗೆ ಉರಿದು ಹೋಗುತ್ತಿದ್ದಾಳೆ.ಮನಸ್ಸು,ಅದರೊಳಗಿನ ಕನಸು,ಜಗ ಬೆಳಗುವ ಆಕೆಯ ಆಸೆಯ ಶವ ಸತ್ತು ನಾರುತ್ತಿದ್ದರೂ ಯಾರಿಗೂ ಅರ್ಥವಾಗುತ್ತಿಲ್ಲ.
          “ಯಾರು ಹೇಳಿದ್ದಾರೋ ಕಾಣೆ,ಹೆಣ್ಣಿನ ಜೀವನವೊಂದು ನರಕ.ಆಕೆ ಅನೇಕ ಸಂಕಟಗಳನ್ನು ಸುಖವೆಂದು ಭಾವಿಸಿ ನುಂಗಬೇಕು.ಆಕೆಗೆ ಪ್ರೇಮದ ಕವಚ ತೊಡಿಸಿ ಪ್ರೇಮವನ್ನೇ ಸುಖವೆಂದು ನಂಬಿಸಿ ಪ್ರೇಮ ಪಂಚರದಲ್ಲಿ ಬಂಧಿಸಿ ಬಿಡುತ್ತಾರೆ.ಆಕೆ ಮೂರು ಹೊತ್ತೂ ಚಾಕರಿ ಮಾಡಬೇಕು;ಗಂಡನ ಚಾಕರಿ,ಅತ್ತೆ ಮಾವಂದಿರ ಚಾಕರಿ,ಅವರ ಬಂಧು ಬಳಗದ ಚಾಕರಿ,ಮಕ್ಕಳ ಚಾಕರಿ!ಆಕೆ ವ್ಯವಸ್ಥಿತವಾಗಿ ದಾಸಿ;ಸಂವಿಧಾನ ಸ್ತ್ರೀ ಸ್ವಾತಂತ್ರ್ಯ ಕಲ್ಪಿಸಿಕೊಟ್ಟರೂ ಅದು ಪುಸ್ತಕದ ಪುಟಗಳಲ್ಲಿ ಮಾತ್ರ ಉಳಿದಿದೆ. ‘ನಿನಗೇನು ಕಡಿಮೆ ಮಾಡಿದ್ದೀರಿ,ಬಂಗಾರ ಕೊಟ್ಟಿಲ್ಲವಾ,ಬಂಗಾರದಂತಹ ಮಕ್ಕಳನ್ನು ಕೊಟ್ಟಿಲ್ಲವಾ,ಬಂಗಲೆ ಕೊಟ್ಟಿಲ್ಲವಾ,ಕೇಳಿದಾಗೆಲ್ಲಾ ನಿನಗಿಷ್ಟವಾಗುವ ಬಟ್ಟೆ ಕೊಟ್ಟಿಲ್ಲವಾ?’ಎನ್ನುತ್ತಾನೆ ಗಂಡ.ಮನಸ್ಸು ಮೂಕವಾಗಿ ರೋಧಿಸುತ್ತದೆ:ಸ್ವಾತಂತ್ರ್ಯ ಎಲ್ಲಿ ಕೊಟ್ಟಿದ್ದೀರಿ ಎಂದು.ಹೆಣ್ಣಿನ ಜೀವನ ಅಡುಗೆ ಮನೆಯ ನಾಲ್ಕು ಗೋಡೆಗಳಲ್ಲಿ ಕಮರಿ ಹೋಗುತ್ತದೆ;ಹಾಸಿಗೆಯಲ್ಲಿ ಇಷ್ಟವಿರಲಿ ಬಿಡಲಿ;ತೆರೆದುಕೊಳ್ಳಬೇಕು:ಅಪ್ಪಟ ಸೂಳೆಯಂತೆ!”ಎಂದಳಾಕೆ.
          “ಕನಿಷ್ಠ ಹೆಣ್ಣಿಗೆ ತನ್ನ ದೇಹದ ಮೇಲೂ ಸ್ವಾತಂತ್ರ್ಯವಿರದಿದ್ದದ್ದು ದುರದೃಷ್ಟ!ಗಂಡು ತನ್ನ ತೆವಲಿಗಾಗಿ ಆಕೆಯ ದೇಹವನ್ನು ಹಿಂಸ್ರ ಪಶುವಿನಂತೆ ಬಳಸಿಕೊಳ್ಳುತ್ತಾನೆ!ಆಕೆ ಸಹಿಸಲೇಬೇಕು.ಏಕೆಂದರೆ ಆಕೆಗೆ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಯ ಭಯ!ನೋವನ್ನೂ ಸುಖವೆಂದೇ ಭಾವಿಸಬೇಕು,ಭಾವನೆಗಳನ್ನು ವ್ಯಕ್ತಪಡಿಸುವಂತಿಲ್ಲ!”ಆಕೆ ನೋವಿನಿಂದ ಈ ಮಾತನ್ನು ಹೇಳಿದಳು.
          ಮೈಡಿಯರ್ ಫ್ರೇಂಡ್ಸ್,
          ಜಗತ್ತಿನ ಕೋಟ್ಯಾಂತರ ಮಹಿಳೆಯರ ಒಳಮನಸ್ಸಿನ ಅಳಲಿದು.ಹೆಂಡತಿ ತಾನು ಹೇಳಿದಂತೆಯೇ ಕೇಳಬೇಕು.ಆಕೆ ಮನೆಯ ಹೊಸಿಲು ದಾಟಿ ಆಚೆ ಬರುವಂತಿಲ್ಲ.ಗಂಡಸು ಆಕೆ ಸುಂದರವಾಗಿರಬೇಕು ಎಂದು ಭಾವಿಸುತ್ತಾನೆ;ಸೌಂದರ್ಯವನ್ನು ಹೊರ ಪ್ರಪಂಚಕ್ಕೆ ತೋರಿಸುವಂತಿಲ್ಲ.ಆಕೆ ಮುಕ್ತವಾಗಿ ಮಾತಾಡುವಂತಿಲ್ಲ.ಆಕೆ ಆರೋಗ್ಯವಂತ ಸ್ನೇಹವನ್ನೂ ಹೊಂದುವಂತಿಲ್ಲ.ಆಕೆ ಸಾಮಾಜಿಕ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವಂತಿಲ್ಲ.ಆಕೆಯ ಕನಸುಗಳನ್ನು ಸಾರ್ವತ್ರಿಕವಾಗಿ ಅಭಿವ್ಯಕ್ತಿಸುವಂತಿಲ್ಲ.ಅದೇನೋ ತಿಳಿಯದು,ಗಂಡಸು ಈ ವಿಷಯದಲ್ಲಿ ಅಪ್ಪಟ ಸ್ವಾರ್ಥಿ,ಹೆಂಡತಿಯನ್ನು ಗೃಹ ಬಂಧನದಲ್ಲಿ ಇಡಲೇ ಇಷ್ಟಪಡುತ್ತಾನೆ.ಸ್ತ್ರೀ ಸ್ವಾತಂತ್ರ್ಯದ ಅರ್ಥಕ್ಕೆ ಮತ್ತದರ ಆಶಯಕ್ಕೆ ಘೋರ ಅನ್ಯಾಯ ಮಾಡುತ್ತಾನೆ..ಇದರಿಂದಾಗಿ ಜಗ ಬೆಳಗಬೇಕೆನ್ನುವ ಜಗ ಬೆಳಗುವ ಸಾಮರ್ಥ್ಯವಿರುವ ಎಷ್ಟೊಂದು ಚೈತನ್ಯಗಳು ಕೇವಲ ತೊಟ್ಟಿಲು ತೂಗುವ ಕೈಗಳಾಗಿಯೇ ಉಳಿದು ಹೋಗುತ್ತವೆ;ಜಾಗತಿಕವಾಗಿ ಈ ಮಾತು ಎಷ್ಟರ ಪ್ರಮಾಣದಲ್ಲಿ ಸತ್ಯವೋ ಅರಿಯೆ,ಭಾರತದ ಮಟ್ಟಿಗೆ ಹೇಳುವುದಾದರೆ ಹೆಣ್ಣೊಂದು ದಾಸಿ,ಆಕೆ ಅಡುಗೆ ಮತ್ತು ಮನೆ ಕೆಲಸ ಮಾಡುವ ಯಂತ್ರ.ಹಾಸಿಗೆಯಲ್ಲಿ ಸೂಳೆ,ಮಕ್ಕಳ ಕಾರ್ಖಾನೆ ಮಾತ್ರ!
          ಹೌದಲ್ವಾ?
          ಇತ್ತೀಚೆಗೆ ನನಗೊಬ್ಬ ಹೋರಾಟಗಾರ್ತಿಯ ಪರಿಚಯವಾಯಿತು.ಆಕೆ ಅದ್ಭುತ ಮಾತುಗಾರಳು.ಮೈಕು ಹಿಡಿದರೆ ಪುಂಖಾನುಪುಂಕಾಗಿ ಮಾತಾಡುವಾಕೆ.ಆಕೆ ಒಂದು ದಿನ ನನಗೊಂದು ಮಾತು ಹೇಳಿದಳು, “ನೋಡಿ,ಈ ಭಾರತದ ಸದ್ಯದ ಸ್ಥಿತಿಯಲ್ಲಿ ಮೇಲ್ವರ್ಗ ಅಥವಾ ಆರ್ಥಿಕವಾಗಿ ಮುಂದುವರೆದಂತಹ ಮನೆಗಳಿಂದ ಹೆಣ್ಣು ಮಕ್ಕಳು ಹೊರಗೆ ಬರುವುದು ಎಂದರೆ ತುಂಬಾ ಕಠಿಣವಾದ ವಿಚಾರ,ಆಕೆ ಗಂಡನಿಗೆ ಉತ್ತರ ಹೇಳಬೇಕು,ಮಕ್ಕಳಿಗೆ ಸಮಜಾಯಿಸಿ ನೀಡಬೇಕು ಮತ್ತು ಸಮಾಜದಿಂದ ಬರುವ ಎಲ್ಲಾ ಟೀಕೆ ಟಿಪ್ಪಣಿಗಳನ್ನು ಸಹಿಸಬೇಕು.ಒಂದಂತೂ ಸತ್ಯ,ಹೆಣ್ಣೊಂದು ತಾನು ಈ ಸಮಾಜಕ್ಕೆ ತನ್ನದೇ ಆದ ಕೊಡುಗೆಯೊಂದನ್ನು ನೀಡಬೇಕು ಎಂದು ಕಠಿಣ ಶಪಥ ಹಾಕಿಕೊಂಡಿದ್ದೇ ಆದರೆ ಆಕೆಯನ್ನು ತಡೆಯಲಿಕ್ಕೆ ಯಾರಿಂದಲೂ ಸಾಧ್ಯವಿಲ್ಲ.ಆಕೆ ಆಣೆಕಟ್ಟೆ ಆಗಲಾರಳು,ಯಾವಾಗಲು ಭೋರ್ಗರೆಯುವ ನದಿ.ಹೇಗೆ ಯಶಸ್ವಿ ಪುರುಷನ ಹಿಂದೆ ಹೆಂಗಸೊಬ್ಬಳಿರುತ್ತಾಳೋ ಹಾಗೆ ಯಶಸ್ವಿ ಮಹಿಳೆಯ ಹಿಂದೆ ಪುರುಷನೊಬ್ಬನ ಅಗತ್ಯವಿರುತ್ತದೆ.ಆ ಪುರುಷ ಗಂಡನೇ ಆಗಿರಬೇಕು.ಇಲ್ಲಿ ಮುಖ್ಯವಾಗಿ ಬೇಕಿರುವುದು ಪರಸ್ಪರ ನಂಬಿಕೆ.ಪ್ರೀತಿ,ಹಾಂ ಪ್ರೀತಿ ಎಂದರೆ ವ್ಯವಸ್ಥಿತ ಬೇಲಿಯಾಗಿರಬಾರದು.ಮೊದಮೊದಲು ನಮ್ಮವರು ವಿರೋಧಿಸುತ್ತಿದ್ದರು,ಅವರ ಅಗತ್ಯಗಳನ್ನು ರಾತ್ರೋರಾತ್ರಿ ಪೂರೈಸಿ ನಾನು ಬೆಳಗಿನ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸಿದ್ದವಾಗಿರುತ್ತಿದ್ದೆ.ಇವತ್ತು ರಾಜ್ಯಾದ್ಯಂತ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ,ಮಕ್ಕಳು ಮತ್ತು ಯಜಮಾನರು ಇವತ್ತು ಪ್ರೋತ್ಸಾಹಿಸುತ್ತಿದ್ದಾರೆ.ಒಂದಂತೂ ಸತ್ಯ,ಹೆಣ್ಣು ಪ್ರೇಮ ಪಂಜರದಲ್ಲಿ ಬಂಧಿಯಾದ ಗಿಣಿ!”ಎಂದಳಾಕೆ.ಆಕೆ ಇವತ್ತು ಯಶಸ್ವಿ ಹೋರಾಟಗಾರ್ತಿ.
          ಸುದೀರ್ಘ ದಾಂಪತ್ಯದ ನಂತರ ಮಕ್ಕಳು ಇತ್ಯಾದಿ ಅಗತ್ಯಗಳು ಮುಗಿದ ಮೇಲೂ ಪುರುಷ ಪ್ರಪಂಚ ಹೆಣ್ಣನ್ನು ನಾಲ್ಕು ಗೋಡೆಗಳಿಗೆ ಮಾತ್ರ ಏಕೆ ಸೀಮಿತವಾಗಿಡಬಯಸುತ್ತದೆ ಎನ್ನುವುದು ಸದ್ಯಕ್ಕೆ ನಮ್ಮ ಮುಂದಿರುವ ಪ್ರಶ್ನೆ.ಜೀವನವನ್ನು ಸುದೀರ್ಘವಾಗಿ ಅನುಭವಿಸಿ ಆಗಿರುತ್ತದೆ.ಶಯನಗೃಹದ ಹಾಸಿಗೆಯ ಮೇಲೆ ಗಾಳಿಗೂ ಆಸ್ಪದ ಕೊಡದ ದಾಂಪತ್ಯದ ದೀರ್ಘಾವದಿ ಸಾಹಚರ್ಯದ ನಂತರೂ ಪುರುಷ ಮತ್ತು ಸ್ತ್ರೀಯ ಮಧ್ಯೆ ಸಮಾನ ಭಾವದ ನಂಬಿಕೆ ಮೂಡದೆ ಹೋದರೆ ಹೇಗೆ?ಗಂಡು ಮತ್ತು ಹೆಣ್ಣು ದಾಂಪತ್ಯದ ಕೊಂಡಿಗಳಾದಾಗ ಒಂದು ಆತ್ಮ,ಎರಡು ದೇಹ ಎನ್ನಲಾಗುತ್ತದೆ;ಈ ಸಂದರ್ಭದಲ್ಲಿ ಪರಸ್ಪರರ ಏಳಿಗೆ ಮತ್ತು ಗೆಲುವುಗಳು ಏಕಪಕ್ಷೀಯವಾಗಿ ಒಬ್ಬರವು ತಾನೆ?ಏಕೆ ಪುರುಷ ತನ್ನ ಸ್ತ್ರೀಯ ವಿಷಯದಲ್ಲಿ ಸ್ವಾರ್ಥಿಯಂತೆ ವರ್ತಿಸುತ್ತಾನೆ?ಆತ ಭಯ ಪಡುತ್ತಾನಾ?ಇವು ಅರ್ಥವಾಗದ ಮತ್ತು ಉತ್ತರ ಸಿಗದ ಪ್ರಶ್ನೆಗಳಾಗಿ ನಮ್ಮನ್ನು ಕಾಡುತ್ತವೆ.
           ಉತ್ತಮ ಗುಣಮಟ್ಟದ ವಸ್ತ್ರ,ಮಣಗಟ್ಟಲೆ ಬಂಗಾರ ಬಂಗಲೆಯ ಆಚೆಗೂ ಮನಸ್ಸಿಗೆ ಬೇಕಾಗಿರುವ ಸಂತೋಚ ಬೇರೆಯದೆ ಇರುತ್ತದೆ.ಸಮಾಜ ಸೇವೆಯ ಕನಸುಗಳಿರುತ್ತವೆ.ಪ್ರೇಮವನ್ನು ಸಾಮಜಿಕವಾಗಿ ವಿಸ್ತರಿಸಿ ಆತ್ಮೋನ್ನತಿಯ ಭಾವ ಅನುಭವಿಸುವ ಆಸೆ ತುಂಬಾ ಜನರನ್ನು ಕಾಡುತ್ತಿರುತ್ತದೆ,ಮುಖ್ಯವಾಗಿ ಇದು ಮಹಿಳೆಯರಲ್ಲಿ.ಪ್ರತಿ ಸಲ ಹೆಣ್ಣಿನ ಮನಸ್ಸು ನೋಯುವುದು ತನ್ನ ಪುರುಷನಿಂದಲೇ,ಅದನ್ನು ಆಕೆ ವ್ಯಕ್ತಪಡಿಸಲಾರಳು.ಅದಕ್ಕೆ ಅನೇಕ ಕಾರಣಗಳಿವೆ.ಗಂಡಿಗೆ ಹೆಣ್ಣು ಹೆಣ್ಣಿಗೆ ಗಂಡು ಪರಸ್ಪರ ವತ್ತಾಸೆಯಾಗಿ ನಿಲ್ಲದಿದ್ದರೆ ಅವರ ಸುದೀರ್ಘ ಸಾಹಚರ್ಯಕ್ಕೆ ಅರ್ಥವಿರಲಾರದು,ಇದರಿಂದ ಅತ್ಯಂತ ಸ್ಪಷ್ಟವಾಗಿ ಅರ್ಥವಾಗುವ ವಿಷಯ:ಅವರಿಬ್ಬರ ಮಧ್ಯೆ ನಂಬಿಕೆ ಮೂಡಿಲ್ಲವೆಂದು!ನೆನಪಿರಲಿ:ಆಕೆಯನ್ನು ನೀವು ಭಾವಿಸುವ ಸುಖದಿಂದ ಬಂಧಿಸ ಹೊರಟರೆ ಮನಸ್ಸು ನಿಮ್ಮಿಂದ ವಿಮುಕ್ತವಾಗುತ್ತಲೇ ಹೋಗುತ್ತದೆ.
          ಶ್ರೀಮತಿ ಇಂದಿರಾಗಾಂಧಿಯವರು,ಸುಷ್ಮಾ ಸ್ವರಾಜ್,ಕುಮಾರಿ ಜಯಲಲಿತ ಇತಿಹಾಸ ಪುಟಗಳಲ್ಲಿ ಧ್ರುವ ತಾರೆಗಳಾದರು.ಅವರ ಖಾಸಗಿ ಬದುಕು ಕೂಡಾ ಉನ್ನತವಾಗಿತ್ತು.ಅವೂ ತೊಟ್ಟಿಲ ತೂಗುವ ಕೈಗಳು,ಜಗತ್ತನ್ನೇ ತೂಗಿದವು.ಆ ಶಕ್ತಿ ಸ್ತ್ರೀಯರಿಗೆ ಇದೆ.ಸ್ತ್ರೀ ಮೀಸಲಾತಿಯಿದೆ.ಆದರೆ ಸ್ತ್ರೀಯರು ಪುರುಷರಿಂದ ಸ್ವಾತಂತ್ರ್ಯಗೊಂಡಿಲ್ಲ.ಅವರನ್ನು ಸಂಸಾರದ ಜವಬ್ದಾರಿ ಎನ್ನುವ ಬಂಧನದಲ್ಲಿ ಬಂಧಿಸಿ ‘ಹೇ ನಮ್ ಹೆಣ್ಮಕ್ಕಳು ಆಚೆ ಬರಂಗಿಲ್ಲಪ್ಪಾ,ಆಕೆಗೆ ನನ್ನ ಮಾತೆಂದರೆ ವೇದವಾಕ್ಯ!’ಎನ್ನುವಂತ ಮಾತು ಮೂರ್ಖ ಗಂಡಸು ತನ್ನ ಅಹಂ ತೃಪ್ತಿ ಪಡಿಸಲಿಕ್ಕೆ ಸಾರ್ವಜನಿಕ ವಲಯದಲ್ಲಿ ಬಹು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ.ಸ್ತ್ರೀ ಈತನ ಅಹಂಗೆ ಒಳಪಟ್ಟು ವ್ಯಕ್ತಿತ್ವರಾಹಿತ್ಯಳಾಗಿ ನಾಲ್ಕು ಗೋಡೆಗಳ ಮಧ್ಯೆ ಕಮರಿ ಹೋಗುತ್ತಾಳೆ.ಸುಖದ ಸುಪ್ಪತ್ತಿಗೆಯಲ್ಲಿ ಬಂಧಿತಳಾದ ಹೆಣ್ಣಿನ ಕೂಗು ಹೊರ ಪ್ರಪಂಚಕ್ಕೆ ಕೇಳಿಸುವುದೇ ಇಲ್ಲಲ.
          ಅಂತಿಮವಾಗಿ ಆಕೆಯ ಆತ್ಮ ಕೂಗುತ್ತದೆ:
          ನಾನು ಮನುಷ್ಯಳು ಎಂದು!

                                     ಲಕ್ಷ್ಮೀಕಾಂತ ನಾಯಕ

ಭಾನುವಾರ, ಮಾರ್ಚ್ 15, 2020

ನಲವತ್ತರ ಹೊಸಿಲಿನಲ್ಲಿ ನನ್ನ ಕೊಂಚ ಆತ್ಮಕ್ಷೋಭೆ ಕಕ್ಕುವ ಯತ್ನದಲಿ....

ನಲವತ್ತರ ಹೊಸಿಲಿನಲ್ಲಿ ನನ್ನ ಕೊಂಚ ಆತ್ಮಕ್ಷೋಭೆ ಕಕ್ಕುವ ಯತ್ನದಲಿ....

ಎರಡು ಕತ್ತೆಯ ವಯಸ್ಸು ನಲವತ್ತೆಂದರೆ!ಒಂದು ನಿಶ್ಚಿತ ಗುರಿ ತಲುಪುತ್ತೇನೆ ಎಂದು ಕೊಂಡಿದ್ದೆ;ಉಹುಂ,ಜೀವನ ಇನ್ನೂ ಅಧ್ವಾನವಾಗಿ ಹೋಯಿತು.ದುಡಿತೀನಿ,ಹಣವಿರುತ್ತದೆ,ಎಲ್ಲವೂ ಸರಿ ಇರುತ್ತದೆ ಎಂದು ಭಾವಿಸಿದ್ದೆ.ನನ್ನ ಭಾವ ಹುಸಿಯಾಯಿತು;ಕನಸು ಬರೀ ಕಮರಲಿಲ್ಲ.ಸುಟ್ಟು ಭಸ್ಮವಾದವು!ಈಗ ಮುಂದೇನು ಎನ್ನುವ ಚಿಂತೆ ದಟ್ಟವಾಗಿ ಕಾಡತೊಡಗಿದೆ.ನಂದು ಬಿಡಿ,ಅಲೆಮಾರಿ!ಎಲ್ಲೋ ತಿಂದು ಹೇಗೋ ಮಲಗಿ ಜೀವನ ಕಳೆದು ಬಿಡಬಲ್ಲೆ.ಜೀವದ ಮೇಲೂ ಆಸೆ ಇಲ್ಲ ನಂಗೆ.ಕಳೆದ ಹನ್ನೆರಡು ವರ್ಷಗಳ ಹಿಂದೆ ನನ್ನ ಬದುಕು ಮುಗಿದು ಹೋಯಿತು;ಪುನಃ ಬದುಕು ಕಟ್ಟಿಕೊಳ್ಳಬೇಕೆಂದುಕೊಂಡ ನನ್ನ ಪ್ರಯತ್ನಗಳೆಲ್ಲಾ ವಿಫಲವಾದವು,ಬರೀ ವಿಫಲವಲ್ಲಾ,ಹೈರಾಣಕ್ಕೆ ದಾರಿ ಮಾಡಿದವು.ನನ್ನ ಕಥೆ ನನಗೆ ಮುಖ್ಯವಲ್ಲ.ಮಕ್ಕಳ ಗತಿ?

ಒಂದು ವಿಷಯವಂತೂ ಸತ್ಯ;ಹಣ ಮತ್ತು ಆರೋಗ್ಯ ಸ್ಥಿರವಾಗಿದ್ದರೆ ಯಾವ ಬಂಧು ಬಳಗದ ಅಗತ್ಯವಿಲ್ಲ.ಯಾವ ಸಮಸ್ಯೆಯೂ ನಮ್ಮನ್ನು ಕಾಡುವುದಿಲ್ಲ.ನಮಗೆ ತೊಂದರೆಗಳು ಯಾವಾಗ ಕಾಡಲಿಕ್ಕೆ ಪ್ರಾರಂಭಿಸುತ್ತವೆ ಎಂದರೆ ನಾವು ನಾವಿಡುವ ತಪ್ಪು ಹೆಜ್ಜೆಗಳಿಂದ ಮತ್ತು ಸರಿಯಾದ ಆರ್ಥಿಕ ಅವಗಾಹನೆ ಇಲ್ಲದಿರುವುದರಿಂದ!ಬಹುತೇಕ ಸಮಸ್ಯೆಗಳಿಗೆ ಉಡಾಫೆ ಮತ್ತು ಉದಾಸೀನ ಕಾರಣವಾಗುತ್ತದೆ.ಇದು ನನ್ನ ಜೀವನದ ಸಿದ್ಧ ಅನುಭವ,ನಾನು ಜೀವನವನ್ನು ತುಂಬಾ ಉಡಾಫೆಯಿಂದ ಕಳೆದೆ.ಪತ್ನಿಯ ಮರಣದ ನಂತರ ಮುಂದಿನ ಜೀವನವನ್ನು ಊಹಿಸಲಿಲ್ಲ.ಆರೋಗ್ಯ ಹಣ ಸ್ಥಿರವಾಗಿರುತ್ತದೆ ಎಂದುಕೊಳ್ಳುತ್ತಾ ಬಹಳ ಉದಾಸೀನನಾದೆ.ಅದರ ಕಂದಾಯವನ್ನೀಗ ನಾನು ಕಟ್ಟತೊಡಗಿದ್ದೇನೆ!

ಮಕ್ಕಳಿಗೆ ಸರಿಯಾದ ಆಹಾರ ಒದಗಿಸದೆ ಹೋದೆ,ಅವು ಕೃಶಗೊಂಡಿವೆ,ಪೌಷ್ಟಿಕಾಂಶದ ಕೊರತೆ ಸ್ಪಷ್ಟವಾಗಿ ಕಾಣಿಸುತ್ತಿದೆ.ನನಗೂ ಸರಿಯಾದ ಆಹಾರದ ಕೊರತೆ ಮತ್ತು ಇತರ ಮಾನಸಿಕ ಒತ್ತಡಗಳಿಂದ ಹಲವು ಸಮಸ್ಯೆಗಳಿಂದ ನರಳುತ್ತಿದ್ದೇನೆ.ಬದುಕಿನ ಬಗೆಗಿನ ನನ್ನ ನಂಬಿಕೆ ಎನ್ನುವ ಹಡುಗು ಇಂದು ಸಂಪೂರ್ಣವಾಗಿ ಮುಳುಗಿ ಹೋಗಿದೆ.ಖಿನ್ನತೆ ನನ್ನನ್ನು ಇಡಿ ಇಡಿಯಾಗಿ ಆವರಿಸಿಕೊಂಡಿದೆ.ಹತಾಶೆ ಸಾಕಿನ್ನೂ ಎನ್ನುವ ಭಾವನೆಯನ್ನು ತರುತ್ತಿದೆ.ಇಂತಹ ಸಂಕಷ್ಟದ ಸಂದರ್ಭದಲ್ಲಿ ಒಂದೊಂದೆ ಕೊಂಡಿಗಳು ಕಳಚಿ ಸಂಪೂರ್ಣ ನಗ್ನನಾಗಿದ್ದೇನೆ.ಸಂತೆ ಮುಗಿದಂತೆ!

ಮುಂದೇನು ಎನ್ನುವುದು ಸದ್ಯಕ್ಕಿರುವ ಪ್ರಶ್ನೆ!

ಮನೆ ಕೆಲಸ ಅಡುಗೆ ಇತ್ಯಾದಿ ಮಾಡುತ್ತಾ ಕುಳಿತರೆ ಉಳಿದ ಇನ್ಯಾವ ಕೆಲಸವೂ ನಡೆಯುವುದಿಲ್ಲ.ಉಳಿದ ಕೆಲಸಗಳನ್ನು ಮಾಡದಿದ್ದರೆ ಹಣದ ಮುಗ್ಗಟ್ಟು!ನನ್ನ ಬದುಕಿನ ಹೊದಿಕೆ ಹೇಗಿದೆ ಎಂದರೆ ತಲೆಗಾದರೆ ಕಾಲಿಗೆ ಆಗುತ್ತಿಲ್ಲ ಕಾಲಿಗಾದರೆ ತಲೆಗಿಲ್ಲ!ಮನಸ್ಸು ಗೊಂದಲಕ್ಕೆ ದ್ವಂದ್ವಕ್ಕೆ ಬಿದ್ದಿರುವುದರಿಂದ ಇತ್ತೀಚಿಗೆ ನಿದ್ರಾಹೀನತೆ ಕಾಡತೊಡಗಿದೆ.ರಾತ್ರಿ ನಿದ್ರೆ ಇಲ್ಲದಿರುವಿಕೆಯಿಂದ ಹಗಲು ಉಲ್ಲಾಸವಾಗಿರದು!ತೀರಾ ಒಂಟಿತನ ನನ್ನನ್ನು ಹೆದರಿಸತೊಡಗಿದೆ.ಈ ಸಮಸ್ಯೆಗಳಿಗೆಲ್ಲಾ ಕಾರಣ ಮತ್ತು ಪರಿಹಾರ ಗೊತ್ತಿದ್ದರೂ ಮುಂದುವರೆಯದ,ಹಿಂಜರಿಕೆ,ಹೇಡಿತನ ನನ್ನನ್ನು ಆವರಿಸಿಕೊಂಡಿವೆ.

ಹತಾಶೆಯೇ ಜೀವನವಾಗಿರುವ ಈ ಶುಭ ಸಂದರ್ಭದಲ್ಲಿ ಇರುವ ಸಣ್ಣ ಆಸರೆಯೊಂದೂ ಈ ಸಲ ಕೈಬಿಟ್ಟಿದೆ.ಸದ್ಯಕ್ಕೆ ತಾಯಿಯೂ ಕೂಡಾ ನನ್ನ ಪಾಲಿಗೆ ಸತ್ತು ಹೋದಳು;ತಂದೆ ಜೀವಂತ ಹೆಣ!

ನಿಜವಾದ ಸಮಸ್ಯೆ ಈಗ ಎದುರಾಗಿದೆ.ಈಗ ಜಗತ್ತಿನಲ್ಲಿ ಅತ್ಯಂತ ಬೆಲೆ ಬಾಳುವ ವಸ್ತು ಯಾವುದೆಂದು ಕೇಳಿದರೆ ನಾನು ಹೇಳುವ ಉತ್ತರ ಶಾಂತಿ,ನೆಮ್ಮದಿ ಎಂದಾಗಿರುತ್ತದೆ.

ಬಹಳ ಅಸ್ತವ್ಯಸ್ತಗೊಂಡೆ,ಯಾವ ಭರವಸೆಗಳೂ ಉಳಿಯಲಿಲ್ಲ....

ಭೂತ ರಹಸ್ಯ


ಭೂತ ರಹಸ್ಯ!
ನಿಸರ್ಗದೊಳಗಿನ ಕೆಲವು ಸಂಗತಿಗಳನ್ನು ಬಳಸಿಕೊಂಡು ಹೇಗೆ ಮಾನವ ಸಮಾಜವನ್ನು ಭಯದ ಬೇಲಿಯಲ್ಲಿ ನರಳುವಂತೆ ಮಾಡಲಾಯಿತೋ ಯೋಚಿಸಿ,ದೇವರ ಭಯ ಸೃಷ್ಟಿಸಲಾಯಿತು;ಪರಮಾರ್ಥ ಸಾಧನೆಯೇ ಮನುಷ್ಯನ ಮೋಕ್ಷದ ಅಂತಿಮ ಗುರಿ ಎನ್ನಲಾಯಿತು.ಹಲವು ಕಟ್ಟಳೆಗಳ ಸಂಕೋಲೆಯಲ್ಲಿ ಮನುಷ್ಯ ತನ್ನನ್ನು ತಾನು ಬಂಧಿಸಿಕೊಂಡು ನರಳತೊಡಗಿದ.ದೇವರ ಭಯದ ನಂತರ ದೆವ್ವದ ಭಯ ಸೃಷ್ಟಿಸಲಾಯಿತು. ದೆವ್ವವೆಂದರೆ ವಿಕಾರರೂಪಿ,ವಿಕಾರ ಸದ್ದಿನ,ಮನುಷ್ಯನ ನಾಶದ ಒಂದು ಕ್ರೂರ ಅಂಶ ಎಂದು ನಂಬಿಸಲಾಯಿತು.ಮನುಷ್ಯ ಸತ್ತ ಮೇಲೆ ಆತನ ಆತ್ಮ ಭೂತವಾಗುತ್ತದೆ ಎಂದು ಹೇಳಲಾಯಿತು;ಸತ್ತ ದೇಹದಿಂದ ಸಾಯದ ಆತ್ಮವೊಂದು ಭೂತವಾಗಿ ಮನುಷ್ಯನನ್ನು ಕಾಡುತ್ತದೆ ಎಂದು ಭಯಾನಕವಾಗಿ ಚಿತ್ರಿಸಲಾಯಿತು.ಮೊನ್ನೆ ಹಳ್ಳಿಯೊಂದರ ಮಸೀದಿ ಎಂದು ಹೇಳಲಾಗುವ(ಅಲ್ಲಾಯ್‌ಗುಡಿ,ಅಥವಾ ಪೀರಲ ದೇವರ ಗುಡಿ)ಸ್ಥಳದಲ್ಲಿ ಕುಳಿತಿರಬೇಕಾದರೆ ಆ ದೇವರ ಪೂಜಾರಿ ಲೋಭಾನ ಊದುಬತ್ತಿಗಳಿಂದ ಹೊಗೆ ಸೃಷ್ಟಿಸಿ ಮಕ್ಕಳಿಗೆ ಕಾಡುತ್ತಿರುವ ದೆವ್ವಗಳನ್ನು ಬಿಡಿಸುವ ಕಾಯಕದಲ್ಲಿ ನಿರತನಾಗಿದ್ದ,ಮತ್ತು ತಾಯತ ಚೀಟಿ ಇತ್ಯಾದಿಗಳನ್ನು ಕಟ್ಟುತ್ತಿದ್ದ.ಹೆಣ್ಮಕ್ಕಳು ಭಯ ಭಕ್ತಿಯಿಂದ ಪೂಜಾರಿ ಮಾಡುವ ಎಲ್ಲಾ ಕೆಲಸಗಳನ್ನು ಮಾಡಿಸಿ ನಂತರ ಒಂದು ದೀರ್ಘದಂಡ ನಮಸ್ಕಾರ ಹಾಕಿ ಹೋಗುತ್ತಿದ್ದರು;ನನಗೆ ನಗು ಬಂತು,ನಕ್ಕೆ‌.ಪೂಜಾರಿಯನ್ನು ನಾನು ಕಾಣಬಾರದ ಜಾಗಗಳಲ್ಲಿ ಮಾಡಬಾರದ ಕೆಲಸಗಳನ್ನು ಮಾಡುವಾಗ ಹಲವಾರು ಬಾರಿ ಕಂಡಿದ್ದೆ.ದೇವರನ್ನೇ ವ್ಯಭಿಚಾರಕ್ಕಿಳಿಸುವ ಆಸಾಮಿ ಆತ!fine,ಇರಲಿ ಬಿಡಿ.
ಭಯ ಇನ್ನೂ ಇದೆ,ಇನ್ನೂ ಭಯಾನಕವಾಗಿದೆ.ಆ ಭಯ ಇರುವುದರಿಂದಲೇ ದೇವರು ದೆವ್ವಗಳ ಗುಡಿ ಗುಂಡಾರ ಚರ್ಚು ಮಸೀದಿಗಳು ಬೃಹತ್ ಪ್ರಮಾಣದಲ್ಲಿ ತಲೆ ಎತ್ತುತ್ತಿವೆ.ಮನುಷ್ಯನ ಭಯವನ್ನೇ ಬಂಡವಾಳ ಮಾಡಿಕೊಂಡು ಹಲವು ಕೋಟಿ ಜನ ಬದುಕುತ್ತಿದ್ದಾರೆ.ಭಯ ಯಾವತ್ತಿಗೂ ಭೂಮಿಯಿಂದ ತೊಲಗಲಾರದು,ಮನುಷ್ಯನೇ ಸೃಷ್ಟಿಸಿದ ಭಯ ಮನುಷ್ಯನನ್ನು ಏನೂ ಮಾಡಿದರೂ ಬಿಡದಂತೆ ಸುತ್ತಿಕೊಂಡಿದೆ.
ಈ ಭಯದ ಬಗ್ಗೆ ಏಕೆ ಬರೆಯಬೇಕಾಗಿ ಬಂತೆಂದರೆ,ಸ್ಮಶಾನದ ಕುರಿತು ಇವತ್ತು ಮತ್ತು ಯಾವತ್ತಿಗೂ ವಿಚಿತ್ರವಾದ ಭಯ ಮನುಷ್ಯ ಸಂಕುಲಕ್ಕಿದೆ.ಅದಕ್ಕೆ ಪೂರಕ ಎನ್ನುವಂತೆ ಸ್ಮಶಾನವೂ ಕೆಲವೊಂದು ಆ ಕುರಿತಾದ ಅಂಶಗಳನ್ನು ಜೀವಂತವಿಟ್ಟಿದೆ.ನಾವು ಸೃಷ್ಟಿಸಿದ ಹಲವು ಸಾಹಿತ್ಯವೂ ಸ್ಮಶಾನವನ್ನು ಒಂದು ಭಯದ ಕೇಂದ್ರ ಎನ್ನುವಂತೆಯೇ ಚಿತ್ರಿಸಲಾಗಿದೆ.ಸ್ಮಶಾನದ ದಿಕ್ಕಿನಿಂದ ನರಿಯ ಊಳಿಡುವಿಕೆ,ವಿಕಾರ ಸದ್ದುಗಳು,ತರಗೆಲೆಗಳ ಸದ್ದು ಇತ್ಯಾದಿಗಳನ್ನು ದೆವ್ವದ ಚಟುವಟಿಕೆ ಎಂದು ಬಿಂಬಿಸುವ ಯತ್ನ ಮಾಡುತ್ತೇವೆ.ನಿಜ,ಇದೆಲ್ಲವೂ ನಿಜ;ಸ್ಮಶಾನದಲ್ಲಿ ತರಗೆಲೆಗಳ ಸದ್ದಿರುತ್ತದೆ.ಮತ್ತು ಗಾಢಾಂಧಕಾರದ ಸಮಯದಲ್ಲಿ ಭೂತದ ಸದ್ದೂ ಅತ್ಯಂತ ವಿಕಾರವಾಗಿ ಕೇಳಿ ಬರುತ್ತದೆ.ಇದೆಲ್ಲವೂ ಭೂತದ ಅಥವಾ ದೆವ್ವದ ಅಸ್ತಿತ್ವವನ್ನು ಒಪ್ಪಿಕೊಳ್ಳುವಂತಿದೆ!
ಮೊನ್ನೆ ಗೆಳೆಯರಾರೋ ನನ್ನ ವಾಟ್ಸಪ್ ನಂಬರಿಗೆ kabar bijju ಎನ್ನುವ ವಿಚಿತ್ರವಾದ ಜೀವಿಯ ಧ್ವನಿ ಇರುವ ವಿಡಿಯೋ ಕಳಿಸಿದರು,ಅದು ಸ್ಮಶಾನದಲ್ಲಿದ್ದು ಶವ ಭೋಜನೆ ಮಾಡುತ್ತಾ ಜೀವಿಸುತ್ತದೆ.ಅದರ ವಿಚಿತ್ರವೇನೆಂದರೆ ಅದು ನೆಲಗುದ್ದು ಜೀವ ಸಂಕುಲಕ್ಕೆ ಸೇರಿದ ನೆಲವನ್ನು ಗುದ್ದಿ ತೋಡಿ ಸಮಾಧಿಯ ಆಳದೊಳಕ್ಕೆ ಇಳಿಯುವುದು!ಇದು ಆಮೆಯನ್ನು ಹೋಲುವ ಜೀವಿಯಾಗಿದ್ದು ಇದರ ನಡುಗೆ ತರಗೆಲೆಯ ಸದ್ದು ಹೊರಡಿಸುತ್ತದೆ.ಇನ್ನೊಂದು ಆಶ್ಚರ್ಯಕರ ಸಂಗತಿ ಎಂದರೆ ಇದು ಮನುಷ್ಯನ ಅಳುವನ್ನು ಹೋಲುವ ಧ್ವನಿಯನ್ನು ಹೊಂದಿದೆ!
ಈಗ ತಿಳಿಯಿತೆ ಸ್ಮಶಾನದ ಭೂತದ ಚೀತ್ಕಾರ!
ಇದೊಂದೇ ಒಂದು ಧ್ವನಿಯ ಆಧಾರದಲ್ಲಿ ಸತ್ತ ಮನುಷ್ಯನ ನಂತರ ಭೂತ ಹುಟ್ಟಿಕೊಂಡಿದೆ.
ಮನುಷ್ಯ ಒಬ್ಬ ಬಂಡವಾಳಗಾರ,ಆತ ಏನನ್ನಾದರೂ ಬಂಡವಾಳ ಮಾಡಿಕೊಳ್ಳುತ್ತಾನೆ.
                              ಲಕ್ಷ್ಮೀಕಾಂತ ನಾಯಕ

ಮಲ್ಲ!

ಮಲ್ಲ!

(೧)
◾◾◾◾◾◾◾◾◾◾◾◾◾◾◾◾◾◾◾◾◾◾◾
ಮಲ್ಲ ಸೊಂಟ ಮುರಿದ ನಾಯಿಯಂತೆ ಗುಡಿಸಲ ಮುಂದಕ್ಕೆ ಬಂದಾಗ ಆತನ‌ ಮೈ ಬೆವರಿತ್ತು.ಬೆವರಿನಿಂದ ಮೈ ತೋಯ್ದು ಹೋಗಿತ್ತು.ಸೂಕ್ಷ್ಮವಾಗಿ ಗಮನಿಸಿದರೆ ಅವನೊಳಗಿನ ನೋವನ್ನು ಕುಟುಂಬಸ್ಥರು ಗುರುತಿಸಬಹುದಿತ್ತು;ಆದರೆ ಸದಾ ಕುಡಿದ ಅಮಲಿನಲ್ಲಿರುತಿದ್ದ ಮಲ್ಲ ಹಾಗೆ ಗಂಭೀರವಾಗಿ ತನ್ನ ಬಗ್ಗೆ ಯೋಚಿಸಬಹುದಾದ ಸಾಧ್ಯತೆಯನ್ನು ಕಳೆದುಕೊಂಡಿದ್ದ.ಮನೆ ತುಂಬಾ ಮಕ್ಕಳಿದ್ದರು;ಯಾರೂ ಮಲ್ಲನ ಕಡೆ ತಿರುಗಿ ನೋಡಲಿಲ್ಲ.ಗುಡುಸಿಲಿನ ಒಂದು ಮೂಲೆಯಲ್ಲಿದ್ದ ಒಲೆಯಲ್ಲಿನ ಬೆಳಗಿನ ಬೂದಿ ಕೆದುಕವುದರಲ್ಲಿದ್ದ ಹೆಂಡತಿ ಕೆಂಚಿ ‘ಕುಡುಕ ನಾಯಿ ಬಂತು ನೋಡು!’ಎಂದು ಮನಸ್ಸಿನಲ್ಲಿಯೇ ಗೊಣಗಿಕೊಂಡಳು.ಇತ್ತೀಚಿನ ಕೆಲವು ದಿನಗಳಿಂದ‌ ಮಲ್ಲನ ಕುಡಿತ ವಿಪರೀತವಾಗಿ ಮಾರ್ಪಟ್ಟಿತ್ತು.ಒಂದು ಕ್ಷಣವೂ ವ್ಯರ್ಥವಾಗದಂತೆ ದುಡಿಯುವ ಅವಸರಕ್ಕೆ ಅವನನ್ನು ಅವನ ಕುಡಿತ ಈಡು ಮಾಡಿತ್ತು.ಪ್ರತಿ ಅರ್ಧ ಗಂಟೆಗೊಮ್ಮೆ ಯಡಿಯೂರಪ್ಪ ಕುಮಾರಸ್ವಾಮಿ ನೇತೃತ್ವದ ಸಾರಾಯಿ ಬಂದ್ ನಿರ್ಧಾರಕ್ಕೆ ಹುಟ್ಟಿದ ಕಳ್ಳ ಕ್ವಾರ್ಟರ್ ಮಾರಾಟದ ಅಂಗಡಿಯಲ್ಲಿ ನೈಂಟಿ ಒರಿಜಿನಲ್ ಚಾಯ್ಸ್ ಎನ್ನುವ ನಾಮಧೇಯ ಎಣ್ಣೆ ಕುಡಿಯುವನು;ಮತ್ತು ಕುಡಿಯುತ್ತಲೇ ಇರುವನು.ಹಾಳಾದವನು ದುಡಿದ ಒಂದು ರೂಪಾಯಿಯೂ ಸಂಸಾರಕ್ಕೆ ಕೊಡುವುದಿಲ್ಲ ಎನ್ನುವುದು ಹೆಂಡತಿಯ ದಿನನಿತ್ಯದ ಗೋಳಾಗಿದೆ.ಮೊದಲು ಸಾರಾಯಿ ಅಂಗಡಿ ಇದ್ದಾಗ ಪಾಡಿತ್ತು,ನೂರು ರೂಪಾಯಿಯಲ್ಲಿ ಔಟಾಗಿ ಬಂದು ಮನೆಯೊಳಗೆ ಬೀಳುತ್ತಿತ್ತು.ಉಳಿದ ರೊಕ್ಕ ಕಿಸೆಯೊಳಗಿರುತ್ತಿದ್ದವು;ಮಕ್ಕಳು ಮರಿಗಳು ತೆಗೆದು ತನ್ನ ಕೈಗೆ ಕೊಡುತ್ತಿದ್ದವು.ಹಾಳಾದವರು,ಅವರ ಹೆಂಡರು ಮಕ್ಕಳು ರಂಡ್ಯಾರು ಆಗಲಿ ಸಾರಾಯಿ ಬಂದ್ ಮಾಡುತ್ತೀವಿ ಅಂತೇಳಿ ಹತ್ತು ರೂಪಾಯಿಗೆ ಸಿಗುವುದನ್ನು ನೂರು ರೂಪಾಯಿಗೆ ಸಿಗುವಂತೆ ಮಾಡಿ ಬಡವನ ಹೆಂಡತಿ ಮಕ್ಕಳು ಉಪವಾಸ ಬೀಳುವಂತೆ ಮಾಡಿದರು ಎನ್ನುವುದು ಕೆಂಚಿಯ ದಿನನಿತ್ಯದ ಶಾಪವಾಗಿದೆ.ರಾಜ್ಯದ ಅಷ್ಟೂ ಜನರ ಶಾಪ ನಿಜವಾಗಿ ಬಡವರ ಉಸಿರು ಸರ್ಕಾರಗಳಿಗೆ ಮುಟ್ಟಲಿ ಎನ್ನುವುದು ಕೆಲವರ ಆಶಯವಾಗಿದೆ.

ಮಲ್ಲ ತೇಕು ಉಸಿರಿನೊಂದಿಗೆ ಅತ್ಯಂತ ಪ್ರಯಾಶದೊಂದಿಗೆ ಗುಡಿಸಲು ತಲುಪವಷ್ಟರಲ್ಲಿ ಜೀವ ಬಾಯಿಗೆ ಬಂದಿತ್ತು.ಅದೇಕೋ ಕಣ್ಣಗಳು ಮುಚ್ಚಿಕೊಳ್ಳುವ ಯತ್ನ ಮಾಡತೊಡಗಿದ್ದವು.ಆಕಾಶದಲ್ಲಿ ಯಮಧರ್ಮನ ಧೂತರು ಕರಿ ಹಗ್ಗದೊಂದಿಗೆ ಕೈ ಬೀಸಿ ಕರೆಯುತ್ತಿರುವಂತೆ ಅನ್ನಿಸತೊಡಗಿತ್ತು.ಮಲ್ಲ ಗುಡಿಸಿಲಿನ ಹೊಸ್ತಿಲು ತಲುಪುತ್ತಿರುವಂತೆ ಕಣ್ಣು ಕತ್ತಲಾದಂತಾಗಿ ನೆಲಕ್ಕೆ ಕುಸಿದುಬಿಟ್ಟ.ಪ್ರಾಣ ಈಗ ಹೊರ ಹೋಗಲು ಸಿದ್ಧವಾಗಿತ್ತು. ಒಲೆಯ ಬೂದಿ ಕೆದರುತ್ತಿದ್ದ ಹೆಂಡತಿಯನ್ನು ಉದ್ದೇಶಿಸಿ ತುಂಬಾ ಕಷ್ಟದಿಂದ ಹೀಗೆ ಹೇಳಿದನು:“ಕೆಂಚಿ ಗೊಣಮಂತಣ್ಣ ದಣಿ ನನ್ ಮ್ಯಾಲ್ ಗಾಡಿ ಹೊಡೆದಾನ,ನಾನು ಸಾಯ್ತೀನಿ,ಅವನ ಮನೀಗಿ ಹೋಗ್ರೀ ನೀವೆಲ್ಲಾ...!”ಇಷ್ಟು ಹೇಳುವ ಹೊತ್ತಿಗೆ ಆತನ ಧ್ವನಿ ಅಡಗಿ ಹೋಯಿತು.ಆದರೆ ಆ ಮಾತನ್ನು ಆತ ಪ್ರಾಣವನ್ನು ಬಹು ಕಷ್ಟದಿಂದ ತಡೆ ಹಿಡಿದು ಹೇಳಿದ್ದಾಗಿತ್ತು.ವಿಚಿತ್ರವೆಂದರೆ ಆ ಮಾತನ್ನು ಅಲ್ಲಿ ಯಾರೂ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.ಹೆಂಡತಿ ಕೆಂಚಿಗೆ ಮತ್ತು ಮಕ್ಕಳಿಗೆ ಅಂತಹ ಮಾತುಗಳು ಸಹಜವಾಗಿದ್ದವು.ಪ್ರತಿದಿನವೂ ಇಂತಹ ಬಡಬಡಿಕೆಗಳು ಕುಡಿದ ಅಮಲಿನಲ್ಲಿ ಇದ್ದೇ ಇರುತ್ತಿದ್ದವು.ಹಂಗಾಗಿ ಆ ಕುಟುಂಬಸ್ಥರು ಆ ಮಾತುಗಳ ಕಡೆಗೆ ಗಮನ ಕೊಡಲಿಲ್ಲ.

ನಂತರ ಮಲ್ಲ ಸೈಲಂಟಾದ.ಆತನಿಂದ ಯಾವುದೇ ಧ್ವನಿ ಬರಲಿಲ್ಲ.ಆತ ಗುಡಿಸಿಲಿನ ಹೊಸ್ತಿಲಲ್ಲೇ ಮಲಗಿದ್ದ.ಮಕ್ಕಳು ಅಪ್ಪ ಸತ್ತ ಆಟ ಆಡುತ್ತಿದ್ದಾನೆ ಎಂದು ಭಾವಿಸಿದವು,ಕೆಂಚಿ ಕೂಡಾ ಹಾಗೆಯೇ ಭಾವಿಸಿದಳು.

ಹಾಳಾದವನೆ ಹಿಂಗ್ಯಾಕ್ ವಸ್ತಿಲಿಗೆ ಮಲಗಿರುವೆ ಅಂತ ಕೆಂಚಿ ಮಲ್ಲನಿಗೆ ಮುಟ್ಟುವವರೆಗೆ ಆ ದೇಹ ತಣ್ಣಗಾಗಿರುವುದು ಅಲ್ಲಿದ್ದ ಯಾರಿಗೂ ತಿಳಿದಿರಲಿಲ್ಲ.

ಮಲ್ಲ ಸತ್ತು ಹೋಗಿದ್ದ!
◾◾◾◾◾◾◾◾◾◾◾◾◾◾◾◾◾◾◾◾◾

(೨)

ಚಿಟ್ಟನೆ ಚೀರಿದಳು ಕೆಂಚಿ!ಮಲ್ಲ ತಣ್ಣಗಾಗಿದ್ದ.ಅದಾಗಲೇ ಅವನು ಸತ್ತು ಹೋಗಿದ್ದ.ಅಪ್ಪ ಸತ್ತ ಆಟ ಆಡುತ್ತಿಲ್ಲ ಎಂದು ತಾಯಿಯ ಅಳುವಿನಿಂದ ಮನಗಂಡ ಮಕ್ಕಳು ಅವೂ ಅಳತೊಡಗಿದವು.ಗುಡಿಸಲ ಮುಂದಿನಿಂದ ಹೊರಟ ಆಕ್ರಂದನ ಇಡೀ ಕೇರಿಯನ್ನು ಆಕ್ರಮಿಸಿಕೊಂಡಿತು.ಕೆಂಚಿ ಮತ್ತು ಆಕೆಯ ಮಕ್ಕಳ ಆರ್ತನಾದ ಕೇರಿಯ ಪ್ರತೀ ಕುಟುಂಬವನ್ನೂ ತಲುಪಿತು.ನಿಮಿಷ ಕಳೆಯುವುದರಲ್ಲಿ ಕೇರಿಯ ಬಡ ಜೀವಿಗಳೆಲ್ಲಾ ತಾವೂ ದುಃಖದಲ್ಲಿ ಪಾಲುದಾರರು ಎನ್ನುವಂತೆ ಕೆಂಚಿಯ ಗುಡಿಸಲ ಮುಂದೆ ದೌಡಾಯಿಸಿದರು.ಇಳಿ ಸಂಜೆಯ ಆ ಗೋಧೋಳಿ ಸಮಯದಲ್ಲಿ ಆ ಕೆಳಗೇರಿ ಅಳುವಿನಿಂದ ತುಂಬಿ ಹೋಯಿತು.ಕುಡುಕ ಮಲ್ಲನ ಸಾವಿನ ಕುರಿತು ಸೇರಿದ ಕೇರಿಯ ಹಿರಿ ಕಿರಿಯರೆಲ್ಲಾ ತರಾವರಿ ಮಾತುಗಳನ್ನಾಡತೊಡಗಿದರು.ಗಲ್ತಿ ಸರಾಯಿಯಿಂದ ಸಾವು ಸಂಭವಿಸಿದೆ ಎಂದು ಮಾತನಾಡಿದರೆ ಇಲ್ಲ ಹಾರ್ಟ್ ಅಟ್ಯಾಕ್ ಆಗಿದೆ ಎಂದು ಇನ್ನೊಬ್ಬರು ಮಾತನಾಡುತ್ತಾ ಸಾವನ್ನು ಎಲೆ ಅಡಿಕೆಯ ರೀತಿಯಲ್ಲಿ ಒಬ್ಬರು ಜಗಿಯುತ್ತಿದ್ದರೆ ಇನ್ನೊಬ್ಬರು ಗುಟುಕಾದಂತೆ ನಮುಲತೊಡಗಿದರು.ಕೆಳಗೇರಿ ಜನರ ಬದುಕೇ ಅಷ್ಟು,ತಾವು ಎಷ್ಟು ದಿನ ಬದುಕಿರುತ್ತೇವೋ ಅಷ್ಟು ದಿನ ಮಾತ್ರ ತಮ್ಮ ಬದುಕು.ಯಂಡಿ ಕಸ,ಉಳ್ಳವರ ಒಕ್ಕಲು ಮಾಡುತ್ತಾ ಉಳಿದ ಹೆಂಜಲು ತಿಂದು ಬದುಕುವ ತಮಗೆ ಬದುಕಲಿರುವ ದಿನಗಳೂ ತಿಳಿಯವು;ಬದುಕಿನ ಸವಿಯೂ ತಿಳಿಯದು!ತಮಗೇನಾದರೂ ಸಂತೋಷ ಉಂಟಾಗುತ್ತದೆ ಎಂದರೆ ಹೊಟ್ಟೆ ತುಂಬಾ ಕುಡಿದು ಹೊಟ್ಟೆ ತುಂಬಾ ಸತ್ತ ದನದ ಮಾಂಸ ತಿಂದಾಗ ಎಂದು ಕೇರಿಯ ಮುದುಕ ಗೊಟ್ಟೆಪ್ಪಜ್ಜ ತನ್ನ ಸಹಪಾಠಿಗಳಿಗೆ ವೇದಾಂತದ ರೀತಿಯಲ್ಲಿ ಹೇಳುತ್ತಿದ್ದ.ಮಲ್ಲನ ಸಾವು ಒಂದು ಅನಿರೀಕ್ಷಿತವಾಗಿತ್ತು.ಈಗ ತಾಸೊತ್ತಿಗಿಂತ ಮೊದಲು ಬದುಕಿದ್ದು ಗಲ್ಲಿ ಗಲ್ಲಿಗಳಲ್ಲಿ ಕುಡಿದು ಡಿರಕಿ ಹೊಡೆದ ಮಲ್ಲ ಹೆಣವಾಗಿರುವುದು ನಂಬಲಾರದ ವಿಷಯವಾಗಿತ್ತು.ಯಾಕ್ ಸತ್ತ ಮಲ್ಲ ಎನ್ನುವ ಪ್ರಶ್ನೆಗಳೊಂದಿಗೆ ಅನಿಶ್ಚಿತವಾಗಿರುವ ಬಡವರ ಪ್ರಾಣದ ಬಗ್ಗೆ ಕೆಳಗೇರಿಯ ಜನಗಳೆಲ್ಲಾ ಯೋಚಿಸಿದರು.ನಮ್ಮಪ್ಪ ಸಿವ ಇಟ್ಟಷ್ಟು ದಿನ ಇರಬೇಕಲ್ಲಾ ಅಂತ ತಮ್ಮ ತಮ್ಮೊಳಗೆ ಅಂದುಕೊಂಡರು.

ಮಕ್ಕಳು ಮರಿ ಸಣ್ಣವು ಇರೋವಾಗ ಮಲ್ಲನ ಸಾವು ದುರ್ದೈವ ಅಂತ ಹೆಣ್ಮಕ್ಕಳು ಹಲುಬಿದರು.ನೋವು ಕಂಡಾಗ ಹೆಣ್ಮಕ್ಕಳಿಗೆ ಕರುಗುವ ಕರಳು ಕೊಟ್ಟ ಶಿವನ ವೈಚಿತ್ರಕ್ಯ ಸಾಕ್ಷಿ ಎನ್ನುವಂತೆ ಕೇರಿಯ ಹೆಂಗಸರು ಮಲ್ಲನ ಗುಣಗಾನ ಮಾಡುತ್ತಾ ಸ್ಪರ್ಧೆಗೆ ಬಿದ್ದಂತೆ ಅಳತೊಡಗಿದರು.ಮಕ್ಕಳು ಇನ್ನು ಸಣ್ಣವು ಇರುವಾಗ ನಿನ್ ಹೇಣ್ತೀ ಕೆಂಚೀನ ಬಿಟ್ಟು ಹೋಗಬಾರದಿತ್ತು ಎಂದು ಹೆಣಕ್ಕೆ ಅವರು ಕೇಳೇ ಕೇಳಿದರು.ಹೆಣ ಏನು ಮಾತಾಡೀತು?ಸ್ತಬ್ಧದ ಹೊರತು!

ಬದುಕಿರುವಾಗ ಮಲ್ಲ ಓಣಿಗೆ ಅಲಾರಂನಂತಿದ್ದ.ಸದಾ ಕುಡಿದ ಅಮಲಿನಲ್ಲಿರುತ್ತಿದ್ದ ಅವನು ಒಂದಿಲ್ಲ ಒಂದು ಧ್ವನಿಯನ್ನು ಹೊರಡಿಸುತ್ತಲೇ ಇರುತ್ತಿದ್ದ.ಗಂಡ ಹೆಂಡತಿಯರ ಜಗಳ ಪ್ರತಿ ನಿಮಿಷ ತಾರಕ ಸ್ವರದಲ್ಲಿರುತ್ತಿತ್ತು.ಆಜುಬಾಜು ಗುಡಿಸಿಲಿನ ಕುಟುಂಬದವರ ಕಿವಿ ದಡ್ಡಿ ತಿಂದು ಹೋಗಿದ್ದವು.ಒಂದ್ ಸಲ ಮನರಂಜನೆ ಅನ್ನಿಸಿದರೆ ಇನ್ನೊಂದು ಸಲ ಕಿರಿಕಿರಿ ಅನ್ನಿಸುತ್ತಿತ್ತು.ಅಂವ ಯಾವಗಲೋ ಬ್ಯಾಡರೋಣಿಯೊಳಗೆ ಆಡಿದ ಬಯಲಾಟದ ಮಾತುಗಳನ್ನು ರಸವತ್ತಾಗಿ ಹೇಳುತ್ತಿದ್ದ.ಸಿನಿಮಾ ಹಾಡುಗಳನ್ನು ತನ್ನದೆ ಭಾಷೆಯಲ್ಲಿ ಹಾಡುತ್ತಿದ್ದ.ನಿಶೆಯೊಳಗೆ ಜೋಲಿ ಹೊಡೆಯುತ್ತಾ ವಿಚಿತ್ರ ನರ್ತನ ಮಾಡುತ್ತಿದ್ದ.ನರ್ತನ ಮಾಡುತ್ತಾ ಮಾಡುತ್ತಾ ಗುಡಿಸಲ ಮುಂದಿನ ಅಂಗಳದಲ್ಲಿ ಮಲಗಿ ನಿದ್ದೆ ಹೋಗುತ್ತಿದ್ದ.ಎಷ್ಟೆ ಆಗಲಿ ಕೆಂಚಿ ಮತ್ತವಳ ಮಕ್ಕಳು ಮ್ಯಾಲೊಂದು ಗಂಡ ಅನ್ನುವ ಮಮಕಾರದಲ್ಲಿ ಕೌದಿ ಹೊದೆಸುತ್ತಿದ್ದರು.ಬಲು ವಿಚಿತ್ರವಾಗಿದ್ದ ಮಲ್ಲ.ಎಷ್ಟೇ ಕುಡಿದರೂ ಹೆಂಡತಿ ಮಕ್ಕಳ ಮೇಲೆ ಕೈ ಮಾಡಿದವನಲ್ಲ.ಬರೀ ಬಾಯಿ ಮಾತಿನ ಜಗಳ.ಸದಾ ಕುಡಿದ ಅಮಲಿನಲ್ಲಿ ಇರಬೇಕೆಂದು ಬಯಸುವ ಆತ ಸಂಸಾರ ನಿರ್ವಹಣೆಗೆ ಹಣ ನೀಡುತ್ತಿರಲಿಲ್ಲ ನಿಜ;ಆದರೆ ಮನೆಗೊಬ್ಬ ಗಣಮಗನಾಗಿದ್ದ.ನಾಲ್ಕು ಮಕ್ಕಳಿಗೆ ತಂದೆಯಾಗಿದ್ದ.ಹುಟ್ಟಿದ ನಾಲ್ಕು ಮಕ್ಕಳ ಪೈಕಿ ಮೂರು ಹೆಣ್ಣಾದರೆ ಒಂದು ಗಂಡು.ಆ ಒಂದು ಗಂಡು ಮಾತು ಮತ್ತು ಕಿವಿಯಿಲ್ಲದೆ ಹುಟ್ಟಿತ್ತು.ಆದರೂ ಹುಡುಗ ಚುರುಕಾಗಿದ್ದ.ದೊಡ್ಡ ಮಗಳನ್ನು ಮದುವೆ ಮಾಡಿಕೊಟ್ಟಿದ್ದ.

ಮಲ್ಲ ಊರಿಗೆ ಬಾಳ್ ಬೇಕಾದವನಾಗಿದ್ದ.ಮೇಲ್ಜಾತಿಯ ಜನಗಳ ಮನ ಮೆಚ್ಚಿದ ಆಳಾಗಿದ್ದ.ಮನುಷ್ಯರಾರು ಮಾಡದ ಕೆಲಸಗಳನ್ನು ಕುಡಿದ ಅಮಲಿನಲ್ಲಿ ಅಥವಾ ಕುಡಿಸಿದರೆ ಯಾವುದೇ ಹೇಸಿಗೆ ಇಲ್ಲದೆ ಮಾಡಿ ಮುಗಿಸುತ್ತಿದ್ದ.ಬಚ್ಚಲು ಕಟ್ಟಿದರೆ,ಶೌಚದ ಪೈಪು ಬಂದಾದರೆ ಹೀಗೆ ಪ್ರತಿಯೊಂದು ಕೆಲಗಳನ್ನು ಅವನು ಅಸಹ್ಯಪಟ್ಟುಕೊಳ್ಳದೆ ಮಾಡುತ್ತಿದ್ದ.

ಓಣಿ ಜನ ಅವನ ಗುಣಗಳನ್ನು ಒಂದೊಂದೇ ನೆನಪಿಸಿಕೊಂಡು ಅಳುತ್ತಿರುವಾಗ ಮೇಲ್ಜಾತಿಯ ಕೆಲ ಊರಿನ ಹಿರಿಯರು ಬೈಕುಗಳೊಂದಿಗೆ ಗುಡಿಸಲ ಮುಂದೆ ಬಂದು ನಿಂತರು.ಕೆಳಗೇರಿಯ ಜನ ದುಃಖದಲ್ಲಿಯೇ ಅಚ್ಚರಿಪಟ್ಟುಕೊಂಡರು!
◾◾◾◾◾◾◾◾◾◾◾◾◾◾◾◾◾◾◾◾◾◾◾◾◾◾◾◾◾◾◾◾
(೩)

“ಮಲ್ಲ ನಮ್ ಮನಿ ಮಗ ಇದ್ದಂಗಿದ್ದ.ಅಂವ ಸತ್ತ ಸುದ್ದಿ ಕೇಳಿ ಬಾಳ್ ದುಃಖ ಆಯ್ತು,ಈ ಸಾವು ಅನ್ನೋದು ಹೇಳಿಕೇಳಿ ಬರೋದಿಲ್ಲ.ದೇವರು ಯವಾಗ ಕರ್ಕೊಂತಾನೋ ಅವಾಗ ಹೋಗೋದೆ!ತಂಗಿ ಕೆಂಚವ್ವಾ,ದುಃಖ ತಾಳಿಕೋ,ನಾವೆಲ್ಲಾ ನಿನ್ ಜತಿ ಇರ್ತೀವಿ.ನೀನೇನು ಚಿಂತಿ ಮಾಡಬ್ಯಾಡ!”ಅಂದ ಗೊಣಮಂತದಣಿ ಹಿಂದ ಬಂದ ತಮಟೆರಾಯ.ತಮಟೆರಾಯ ಸಮಾಧಾನ ಹೇಳೋದಿಕ್ಕೆ ಬಾಳ್ ಚಾಣಾಕ್ಷ ಮನುಷ್ಯ.ಯಾವ ನ್ಯಾಯವನ್ನೂ ಸಲೀಸಾಗಿ ಬಗೆಹರಿಸುವ ಅವನ ಗುಣ ಊರಿಗೆ ಮೆಚ್ಚಿಗೆಯಾಗಿತ್ತು.ಹಂಗಂತಾನೆ ಅವನು ಊರಿನ ಪ್ರತಿ ಕದಲಿಕೆಗಳ ಸೂತ್ರದಾರನಾಗಿದ್ದ.ಇಡೀ ಊರು ನೊಣಗಳ ಹಾಗೆ ಅವನ ಸುತ್ತಾ ಸುತ್ತುತ್ತಿತ್ತು.ಅಂವ ನೊಣ ಸುತ್ತುಗನ ಗಿಡವಾಗಿದ್ದ.

ಕೆಂಚಿ ಕೈಯಾಗ ಐದು ಸಾವಿರ ರೂಪಾಯಿ ಕೊಟ್ಟರು.ಸತ್ತವ ತಿರುಗಿ ಬರಂಗಿಲ್ಲ.ಇದ್ದವರು ಮುಂದ ನೋಡಿ ಬದುಕಬೇಕು ಎಂದು ಸೂಚ್ಯವಾಗಿ ಹೇಳಿದ.ಕೆಂಚವ್ವ ಬಾಯಾಗ ಸೆರಗಿಟ್ಟುಕೊಂಡು ದುಃಖದಿಂದಲೇ ತಲೆ ಅಲ್ಲಾಡಿಸಿದಳು.ಕೆಳಗೇರಿಯೊಳಗೆ ಯಾರೂ ಸತ್ತರೂ ಮೇಲ್ಜಾತಿಯ ಜನ ತಿರುಗಿಯೂ ನೋಡುವುದಿಲ್ಲ.ಮಲ್ಲನ ಹೆಣಕ್ಕೆ ಊರ ಪ್ರಮುಖರು ಬಂದು ಭೇಟಿಕೊಟ್ಟಿದ್ದು ತುಂಬಾ ಅಚ್ಚರಿಯ ಸಂಗತಿಯಾಗಿತ್ತು.ದೊಡ್ಡೋರು ಹೇಳಿದಂಗ ಕೇಳಲೇಬೇಕಲ್ಲ.ಕೆಂಚಿ ಹಣ ಇಸಗೊಂಡು ಸುಮ್ಮನಾದಳು.

ಊರಿನ ಹಿರಿಯ ಮನುಷ್ಯರು ಅಲ್ಲಿಂದ ಹೋದ ಮೇಲೆ ಕೆಳಗೇರಿಯ ಜನ ಚರ್ಚೆಯಲ್ಲಿ ಮುಳುಗಿದರು.ಕೆಲವರು ತಮಟೆರಾಯ ಗೊಣಮಂತ ದಣಿಯ ಗುಣಗಳನ್ನು ಕೊಂಡಾಡಿದರು.ಅವರು ಬಾಳ್ ದೊಡ್ ಮನುಷ್ಯರಪ್ಪ.ಮೇಲ್ಜಾತಿಯ ನಾಯಿಗಳೂ ನಮ್ಮ ಓಣ್ಯಾಗ ಬರೋಂಗಿಲ್ಲ,ಅಂತಾದ್ರಲ್ಲಿ ದಣೇರಾ ಮಲ್ಲನ ಗುಡಿಸಿಲಿಗೆ ಬಂದಾರ ಅಂದ್ರ ಮಲ್ಲನ ಜನ್ಮ ಪಾವನವಾಯಿತು ಎಂದು ಓಣಿಯ ಕೆಲವರು ಬಹಿರಂಗವಾಗಿ ಅಂದರು.ತುಂಬಾ ಜನ ಹೌದೌದು ಎಂದರು.

ಈ ಎಲ್ಲಾ ಚರ್ಚೆಗಳ ಮಧ್ಯೆ ಅಲ್ಲೊಬ್ಬನಿದ್ದ:ರಾಮ!ರಾಮ ಅನುಮಾನಗೊಂಡ.ಕೆಳಗೇರಿ ಜನರನ್ನು ಮನುಷ್ಯರು ಎಂದು ಭಾವಿಸದ ಈ ಸೂಳೇಮಕ್ಕಳು ಓಣಿಗೆ ಬಂದು ಹೆಣಕ್ಕೆ ರೊಕ್ಕ ಕೊಡ್ತಾರ ಅಂದರ ಇದರ ಹಿಂದ ಏನೋ ಮಸಲತ್ತಿದೆ,ಏನದು?ಅವನು ಯೋಚಿಸತೊಡಗಿದ.ಮಲ್ಲನ ಸಾವಿನ ಹಿಂದೆ ಈ ಸೂಳೇಮಕ್ಕಳ ಕೈವಾಡವಿದೆಯಾ?ಅವನ ತಲೆ ಅನುಮಾನಗಳ ಹುತ್ತವಾಯಿತು.

ನಂತರ ಮಲ್ಲನ ಶವ ಸಂಸ್ಕಾರ ವಿಜೃಂಭಣೆಯಿಂದ ನಡೆದು ಹೋಯಿತು.ತಮಟೆರಾಯ ಮತ್ತು ಗೊಣಮಂತ ದಣಿ ಕೊಟ್ಟ ರೊಕ್ಕದಲ್ಲಿ ಹೆಣ ಭಲೇ ಸಿಂಗಾರಗೊಂಡಿತ್ತು.ಬಂದಂತಹ ಬಂಧು ಬಳಗ ಯಥೇಚ್ಛವಾಗಿ ಕುಡಿದರು.ಹೆಣದ ಮುಂದೆ ತರಾವರಿ ನರ್ತನ ಮಾಡಿದರು.ಭಾರೀ ಶಬ್ದ ಮಾಡುವ ಪಟಾಕಿಗಳನ್ನು ಹೊಡೆದರು.ದಣೇರು ಕೊಟ್ಟ ರೊಕ್ಕದಲ್ಲಿ ಚಂದ ಕಾಣುವ ಮಂಟಪ ಮಾಡಿ ಮಂಟಪದಲ್ಲಿ ಮಶಾಣಕ್ಕೆ ಹೆಣ ಹೊಯ್ದು ಹೆಣ ಹೂಣಿಸಿದರು.ಮಲ್ಲ ಸಮಾಧಿಯಾಗಿ ಹೋದ.

ಮಲ್ಲನ ಸಮಾಧಿಯಾದ ನಿಜ,ಮಲ್ಲನ ಹೆಣ ರಾಮನ ತಲೆಯಲ್ಲಿ ಮರು ಜೀವ ಪಡೆದು ಬೃಹದಾಕಾರವಾಗಿ ಬೆಳೆಯಿತು.ಮಲ್ಲ ಹೆಂಗ್ ಸತ್ತ?ರಾಮ ತಲೆ ಕೆಡಿಸಿಕೊಳ್ಳತೊಡಗಿದ!
◾◾◾◾◾

(೪)

ಪರಂಪರಾಗತ ದಾಸ್ಯಕ್ಕೊಳಪಟ್ಟ ಜನರ ಕಿವಿಗೆ ರಾಮನ ಮಾತುಗಳು ತಲುಪಲೇ ಇಲ್ಲ.ಅವನು ಓಣಿಯ ಪ್ರತಿಯೊಬ್ಬರ ಮನೆ ಮುಂದೆ ನಿಂತು ಧಮನಕಾರಿ ಶಕ್ತಿಗಳ ವಿರುದ್ಧ ಹೋರಾಡುವ ಕಾಲ ಬಂದಿದೆ ಎಂದು ಬೇಡಿಕೊಂಡ.ತುಳಿಯುವವರ ವಿರುದ್ಧ ತಾವು ಪ್ರತಿಭಟಿಸದರೆ ಹೋದರೆ ತಮ್ಮನ್ನು ಯಾವ ಸಂವಿಧಾನವೂ ಕಾಪಾಡುವುದಿಲ್ಲ ಎಂದನು.ಜನ ಮುಖ ಮುಖ ನೋಡಿಕೊಂಡರು.ರಾಮನಿಗೆ ಹುಚ್ಚು ಹಿಡಿದಿದೆ ಎಂದುಕೊಂಡರು.ಸಂವಿಧಾನ ಎಂದರೆ ಏನು ಅಂತ ಅವರು ತಮ್ಮ ತಮ್ಮೊಳಗೆ ಪ್ರಶ್ನಿಸಿಕೊಂಡರು.ಯಾರಿಗೂ ಉತ್ತರ ಸಿಗಲಿಲ್ಲ.
 ಬಹುಶಃ ಗುಡಿಯೊಳಗಿನ ತಾವು ಎಂದೆಂದೂ ಕಾಣದ ದೇವರಾಗಿರಬೇಕು ಎಂದು ನಿರ್ಣಯಿಸಿಕೊಂಡರು.ದೇವರನ್ನು ನಂಬಬೇಡಿ,ಅಕ್ಷರವನ್ನು ನಂಬಿ ಎಂದು ಹೇಳಿದವರನ್ನೇ ದೇವರು ಎಂದು ಪೂಜಿಸ ಹೊರಟ ಜನಗಳಿಗೆ ರಾಮನ ಮಾತುಗಳು ಅರ್ಥವಾಗಲಿಲ್ಲ.ಅವನು ಒಳ ಒಳಗೇ ರೋಧಿಸಿದನು.ತನ್ನ ಜನರನ್ನು ಇನ್ನಾರು ಇನ್ನಾವ ಕಾಲದಲ್ಲೂ ಕಾಪಾಡಲಾರರು ಎಂದು ಅವನು ಮಮ್ಮಲ ಮರುಗಿದನು.

ನಾಲ್ಕಕ್ಷರ ಬಲ್ಲವನಾಗಿದ್ದ ರಾಮ ಕೇರಿಯ ಜನಗಳಿಗೆ ಹುಚ್ಚನಂತೆ ಕಾಣಿಸುತ್ತಿದ್ದ.ಈ ಹಿಂದೆ ರಾಮ ಸಣ್ಣವನಿದ್ದಾಗ ನನ್ ಮಗನ್ನಾ ದೊಡ್ಡ ಸಾಹೇಬನ ಮಾಡ್ತೀನಿ ಎಂದು ಹೇಳುತ್ತಿದ್ದ ರಾಮನ ತಂದೆಯನ್ನೂ ಜನ ಹುಚ್ಚನೆಂದೇ ಭಾವಿಸಿದ್ದರು.ತಾವು ಅಕ್ಷರ ಅದೂ ಇದು ಅಂತ ತಿರುಗಿದರೆ ಗೌಡರ ಮನೆಯ ಯಂಡಿ ಕಸ ಯಾರು ಮಾಡಬೇಕು?ಗೌಡರು ಹಿಡಿ ಅನ್ನ ಕೊಡುತ್ತಾರಲ್ಲ ಅದು ಮುಂದೆ ಕೊಟ್ಟಾರೆಯೇ?ತಮಗೆ ಊರಿನಲ್ಲಿ ಉಳಿಗಾಲ ಉಂಟೇ ಎಂದು ಅವರು ವಾದಿಸುತ್ತಿದ್ದರು.ಕೂಳಿಗೆ ಪರದಾಡುವ ಜನ ಬಟ್ಟೆ ಬರೆಗಳನ್ನು ಕಾಣುವುದೆಂತು?ಹರಕು ವಸ್ತ್ರದಲ್ಲಿ ಮಾನವೂ ಉಳ್ಳವರ ಸ್ವತ್ತು ಎಂದು ಭಾವಿಸಿದ್ದ ಕಾಲದಲ್ಲಿ ರಾಮನ ತಂದೆ ರಾಮನಿಗೆ ನಾಲ್ಕಕ್ಷರ ಕಲಿಸಿದ್ದ.ಅದು ಊರನ್ನೇ ಎದುರು ಹಾಕಿಕೊಂಡು!

ಮಲ್ಲನ ಹೂತಿರು ಹೆಣ ಹೊರ ತೆಗೆದು ಶವ ಪರೀಕ್ಷೆ ನಡೆಸಿದರೆ ಅವನ ಸಾವಿನ ಹಿನ್ನೆಲೆ ತಿಳಿಯುತ್ತದೆ ಎನ್ನುವುದು ರಾಮನ ವಾದ.ಆದರೆ ರಾಮನ ಈ ಮಾತುಗಳು ಮಾತ್ರ ಯಾರಿಗೂ ಅರ್ಥವಾಗದೆ ಹುಚ್ಚನ ಬಡಬಡಿಕೆಯ ರೀತಿಯಲ್ಲಿ ಅವರು ಭಾವಿಸಿದ್ದರು.ಅವರ ದೈನಂದಿನ ಬದುಕು ಹಾಗೆ ಭಾವಿಸುವಂತೆ ಮಾಡಿತ್ತೂ ಕೂಡಾ.ಒಂದು ವೇಳೆ ರಾಮ ಯಾರದೋ ದಾರ್ಷ್ಟ್ಯಕ್ಕೆ ಬಲಿಯಾಗಿ ಸತ್ತರೂ ತಾವೇನು ಕಿತ್ತುಕೊಳ್ಳಬಲ್ಲರು ಎನ್ನುವುದು ಓಣಿಯ ಮುಖ್ಯಸ್ಥರ ಅಭಿಮತ.ಊರಿನ ಹಿರಿಯರು ತಮ್ಮ ಕೇರಿಯ ಮೇಲಿಟ್ಟ ಅನುಕಂಪಕ್ಕೆ ಸಂ ಕಾರ ತಂದುಕೊಳ್ಳುವುದಾದರೂ ಏಕೆ ಎಂದು ಅವರೆಲ್ಲಾ ಯೋಚಿಸಿದರು.
◾◾◾◾◾


(೩)

“ಮಲ್ಲ ನಮ್ ಮನಿ ಮಗ ಇದ್ದಂಗಿದ್ದ.ಅಂವ ಸತ್ತ ಸುದ್ದಿ ಕೇಳಿ ಬಾಳ್ ದುಃಖ ಆಯ್ತು,ಈ ಸಾವು ಅನ್ನೋದು ಹೇಳಿಕೇಳಿ ಬರೋದಿಲ್ಲ.ದೇವರು ಯವಾಗ ಕರ್ಕೊಂತಾನೋ ಅವಾಗ ಹೋಗೋದೆ!ತಂಗಿ ಕೆಂಚವ್ವಾ,ದುಃಖ ತಾಳಿಕೋ,ನಾವೆಲ್ಲಾ ನಿನ್ ಜತಿ ಇರ್ತೀವಿ.ನೀನೇನು ಚಿಂತಿ ಮಾಡಬ್ಯಾಡ!”ಅಂದ ಗೊಣಮಂತದಣಿ ಹಿಂದ ಬಂದ ತಮಟೆರಾಯ.ತಮಟೆರಾಯ ಸಮಾಧಾನ ಹೇಳೋದಿಕ್ಕೆ ಬಾಳ್ ಚಾಣಾಕ್ಷ ಮನುಷ್ಯ.ಯಾವ ನ್ಯಾಯವನ್ನೂ ಸಲೀಸಾಗಿ ಬಗೆಹರಿಸುವ ಅವನ ಗುಣ ಊರಿಗೆ ಮೆಚ್ಚಿಗೆಯಾಗಿತ್ತು.ಹಂಗಂತಾನೆ ಅವನು ಊರಿನ ಪ್ರತಿ ಕದಲಿಕೆಗಳ ಸೂತ್ರದಾರನಾಗಿದ್ದ.ಇಡೀ ಊರು ನೊಣಗಳ ಹಾಗೆ ಅವನ ಸುತ್ತಾ ಸುತ್ತುತ್ತಿತ್ತು.ಅಂವ ನೊಣ ಸುತ್ತುಗನ ಗಿಡವಾಗಿದ್ದ.

ಕೆಂಚಿ ಕೈಯಾಗ ಐದು ಸಾವಿರ ರೂಪಾಯಿ ಕೊಟ್ಟರು.ಸತ್ತವ ತಿರುಗಿ ಬರಂಗಿಲ್ಲ.ಇದ್ದವರು ಮುಂದ ನೋಡಿ ಬದುಕಬೇಕು ಎಂದು ಸೂಚ್ಯವಾಗಿ ಹೇಳಿದ.ಕೆಂಚವ್ವ ಬಾಯಾಗ ಸೆರಗಿಟ್ಟುಕೊಂಡು ದುಃಖದಿಂದಲೇ ತಲೆ ಅಲ್ಲಾಡಿಸಿದಳು.ಕೆಳಗೇರಿಯೊಳಗೆ ಯಾರೂ ಸತ್ತರೂ ಮೇಲ್ಜಾತಿಯ ಜನ ತಿರುಗಿಯೂ ನೋಡುವುದಿಲ್ಲ.ಮಲ್ಲನ ಹೆಣಕ್ಕೆ ಊರ ಪ್ರಮುಖರು ಬಂದು ಭೇಟಿಕೊಟ್ಟಿದ್ದು ತುಂಬಾ ಅಚ್ಚರಿಯ ಸಂಗತಿಯಾಗಿತ್ತು.ದೊಡ್ಡೋರು ಹೇಳಿದಂಗ ಕೇಳಲೇಬೇಕಲ್ಲ.ಕೆಂಚಿ ಹಣ ಇಸಗೊಂಡು ಸುಮ್ಮನಾದಳು.

ಊರಿನ ಹಿರಿಯ ಮನುಷ್ಯರು ಅಲ್ಲಿಂದ ಹೋದ ಮೇಲೆ ಕೆಳಗೇರಿಯ ಜನ ಚರ್ಚೆಯಲ್ಲಿ ಮುಳುಗಿದರು.ಕೆಲವರು ತಮಟೆರಾಯ ಗೊಣಮಂತ ದಣಿಯ ಗುಣಗಳನ್ನು ಕೊಂಡಾಡಿದರು.ಅವರು ಬಾಳ್ ದೊಡ್ ಮನುಷ್ಯರಪ್ಪ.ಮೇಲ್ಜಾತಿಯ ನಾಯಿಗಳೂ ನಮ್ಮ ಓಣ್ಯಾಗ ಬರೋಂಗಿಲ್ಲ,ಅಂತಾದ್ರಲ್ಲಿ ದಣೇರಾ ಮಲ್ಲನ ಗುಡಿಸಿಲಿಗೆ ಬಂದಾರ ಅಂದ್ರ ಮಲ್ಲನ ಜನ್ಮ ಪಾವನವಾಯಿತು ಎಂದು ಓಣಿಯ ಕೆಲವರು ಬಹಿರಂಗವಾಗಿ ಅಂದರು.ತುಂಬಾ ಜನ ಹೌದೌದು ಎಂದರು.

ಈ ಎಲ್ಲಾ ಚರ್ಚೆಗಳ ಮಧ್ಯೆ ಅಲ್ಲೊಬ್ಬನಿದ್ದ:ರಾಮ!ರಾಮ ಅನುಮಾನಗೊಂಡ.ಕೆಳಗೇರಿ ಜನರನ್ನು ಮನುಷ್ಯರು ಎಂದು ಭಾವಿಸದ ಈ ಸೂಳೇಮಕ್ಕಳು ಓಣಿಗೆ ಬಂದು ಹೆಣಕ್ಕೆ ರೊಕ್ಕ ಕೊಡ್ತಾರ ಅಂದರ ಇದರ ಹಿಂದ ಏನೋ ಮಸಲತ್ತಿದೆ,ಏನದು?ಅವನು ಯೋಚಿಸತೊಡಗಿದ.ಮಲ್ಲನ ಸಾವಿನ ಹಿಂದೆ ಈ ಸೂಳೇಮಕ್ಕಳ ಕೈವಾಡವಿದೆಯಾ?ಅವನ ತಲೆ ಅನುಮಾನಗಳ ಹುತ್ತವಾಯಿತು.

ನಂತರ ಮಲ್ಲನ ಶವ ಸಂಸ್ಕಾರ ವಿಜೃಂಭಣೆಯಿಂದ ನಡೆದು ಹೋಯಿತು.ತಮಟೆರಾಯ ಮತ್ತು ಗೊಣಮಂತ ದಣಿ ಕೊಟ್ಟ ರೊಕ್ಕದಲ್ಲಿ ಹೆಣ ಭಲೇ ಸಿಂಗಾರಗೊಂಡಿತ್ತು.ಬಂದಂತಹ ಬಂಧು ಬಳಗ ಯಥೇಚ್ಛವಾಗಿ ಕುಡಿದರು.ಹೆಣದ ಮುಂದೆ ತರಾವರಿ ನರ್ತನ ಮಾಡಿದರು.ಭಾರೀ ಶಬ್ದ ಮಾಡುವ ಪಟಾಕಿಗಳನ್ನು ಹೊಡೆದರು.ದಣೇರು ಕೊಟ್ಟ ರೊಕ್ಕದಲ್ಲಿ ಚಂದ ಕಾಣುವ ಮಂಟಪ ಮಾಡಿ ಮಂಟಪದಲ್ಲಿ ಮಶಾಣಕ್ಕೆ ಹೆಣ ಹೊಯ್ದು ಹೆಣ ಹೂಣಿಸಿದರು.ಮಲ್ಲ ಸಮಾಧಿಯಾಗಿ ಹೋದ.

ಮಲ್ಲನ ಸಮಾಧಿಯಾದ ನಿಜ,ಮಲ್ಲನ ಹೆಣ ರಾಮನ ತಲೆಯಲ್ಲಿ ಮರು ಜೀವ ಪಡೆದು ಬೃಹದಾಕಾರವಾಗಿ ಬೆಳೆಯಿತು.ಮಲ್ಲ ಹೆಂಗ್ ಸತ್ತ?ರಾಮ ತಲೆ ಕೆಡಿಸಿಕೊಳ್ಳತೊಡಗಿದ!(ಮುಂದುವರೆಯುವುದು)



*ಊರ ಉಸಾಬರಿಯಲ್ಲಿ ಮುಲ್ಲಾನ ಪರಿಸ್ಥಿತಿ*

ಪುರಾತನ ಭಾರತ ಕೆಲವು ಚೌಕಟ್ಟುಗಳಲ್ಲಿ ಸಮಾಜವನ್ನು ರೂಪಿಸಿಕೊಂಡಿತ್ತು.ಅದೆಂದರೆ ಭೂ ಒಡೆತನದ ಕೇಂದ್ರೀಕೃತ ವ್ಯವಸ್ಥೆ.ಭೂ ಮಾಲೀಕ ಸಾರ್ವಭೌಮನಂತಿರುತ್ತಿದ್ದ.ಈ ಭೂಮಾಲೀಕ ರೈತನಲ್ಲ.ಗಳೆ ಹೊಡೆಯುವವನು ರೈತನಾದರೂ ಭೂಮಾಲೀಕ ರೈತನೋ,ಭೂಮಿ ಊಳುವವನು ರೈತನೋ ಎನ್ನುವ ಒಂದು ಸಂದಿಗ್ಧತೆ ಹಾಗೆಯೇ ಇದೆ.ರೈತಾಪಿ ಕೆಲಸಗಳನ್ನು ಮಾಡುವವರನ್ನು ಕೃಷಿ ಕಾರ್ಮಿಕರು ಎಂದು ಕರೆಯಲಾಗುತ್ತದೆ. ಯಾರು ರೈತರು ಎನ್ನುವ ಪ್ರಶ್ನೆ ಹುಟ್ಟುತ್ತದೆ.

ಈ ಭೂಮಾಲೀಕ ಅಥವಾ ರೈತನನ್ನು ಅವಲಂಬಿಸಿ ಗ್ರಾಮೀಣ ಪ್ರದೇಶಗಳು ಮತ್ತು ಹಳ್ಳಿಗಳಲ್ಲಿ ಅನೇಕ ಕುಟುಂಬಗಳು ಜೀವಿಸುತ್ತಿದ್ದವು;ಆ ಪೈಕಿ ಗುಡಿ ಪೂಜೆ ಮಾಡಲಿಕ್ಕೆ ಪೂಜಾರಿ,ಸಭೆ ಸಮಾರಂಭಗಳ ಪೂಜೆ ಮಾಡಲಿಕ್ಕೆ ಜಂಗಮರು,ಕೃಷಿ ಪರಿಕರಗಳ ರಿಪೇರಿಗೆ ಬಡಿಗರು,ಕಬ್ಬಿಣದ ಕೆಲಸಗಳನ್ನು ಮಾಡಲಿಕ್ಕೆ ಕಮ್ಮಾರರು,ಮಡಿವಾಳರು,ಚಮ್ಮಾರರು,ನಾರಂದಿಗರು,ಹೆಣ ಹೂಳಲಿಕ್ಕೊಬ್ಬರು,ತಮಟೆ ಭಾರಿಸಲಿಕ್ಕೊಬ್ಬರು-ಹೀಗೆ ಹಲವಾರು ಕುಶಲ ಕರ್ಮಿಗಳು ಅವರನ್ನು ಆಶ್ರಯಿಸಿ ಜೀವಿಸುತ್ತಿದ್ದರು.

ಸುಗ್ಗಿಯ ಕಾಲದಲ್ಲಿ ದವಸ ಧಾನ್ಯಗಳನ್ನು ಯಥೇಚ್ಛವಾಗಿ ನೀಡುತ್ತಾ ಇವರ ವಾರ್ಷಿಕ ಜೀವನ ನಿರ್ವಹಣೆಗೆ ಅನುಕೂಲ ಮಾಡಿಕೊಡುತ್ತಿದ್ದರು.ಕಣದಲ್ಲಿಯೇ ಯಾರ ಯಾರ ಪಾಲಿನ ಧಾನ್ಯಗಳು ಇತ್ಯಾದಿಗಳನ್ನು ನೀಡಲಾಗುತ್ತಿತ್ತು.ಈ ಅವಲಂಬಿತ ಸಮುದಾಯಗಳಿಗೆ ಆರ್ಥಿಕ ಸಂಕಷ್ಟಗಳು ಕಾಡುತ್ತಿರಲಿಲ್ಲ.ಅವರೊಂದು ನೆಮ್ಮದಿಯ ಬದುಕನ್ನು ಬದುಕುತ್ತಿದ್ದರು.ಇದನ್ನು ಬಾಬಾ ಸಾಹೇಬರು ಚೆನ್ನಾಗಿ ಅರಿತಿದ್ದ ಕಾರಣಕ್ಕೆ ತುಳಿತಕ್ಕೊಳಗಾಗಿರುವ ಜನಾಂಗಗಳಿಗೆ ಮೀಸಲಾತಿ ತಂದರು,ಅದಕ್ಕಾಗಿ ಜೀವನವನ್ನೇ ತ್ಯಾಗ ಮಾಡಿದರು.ತನ್ನವರ ಸುಖವೇ ತಮ್ಮ ಸುಖವೆಂದು ಭಾವಿಸಿ ನಿರಂತರವಾಗಿ ಅದಕ್ಕಾಗಿ ಹೋರಾಡುತ್ತಾ ಜೀವನ ಶ್ರವಿಸಿದರು,ಅವರ ಸಾವೂ ಇತಿಹಾಸದಲ್ಲಿ ಅನುಮಾನಸ್ಪದವಾಗಿ ಉಳಿದು ಹೋಯಿತು;ಆ ವಿಷಯ ಬೇರೆ.

ಎಕ್ಕಡದಯ್ಯನ ನಗ್ನ ಸತ್ಯಗಳು ವಾಲಿನಿಂದ ಎತ್ತಿಕೊಂಡು ಬಂದಿರುವ ಈ ಬರಹ ವಿಶ್ಮಯನಾಥ ಎನ್ನುವವರು ಬರೆದಿದ್ದು,ಏನ್ನನ್ನು ಇದು ಧ್ವನಿಸುತ್ತದೋ ಅದು ಗೊಂದಲವಾಗಿದೆಯಾದರೂ ಅವಲಂಬಿತ ಸಮುದಾಯಗಳು ಪುರಾತನ ಕಾಲದಲ್ಲಿ ಕಣ್ಣು ಕಾಲು ಕೈಗಳಿಲ್ಲದಿದ್ದರೂ ಬದುಕಬಹುದಿತ್ತು ಎಂದು ಅಂತಿಮವಾಗಿ ಹೇಳುತ್ತದೆ.ಓದಿ ನೋಡಿ,ಆಸಕ್ತಿಕರವಾಗಿದೆ:

*ಊರ ಉಸಾಬರಿಯಲ್ಲಿ ಮುಲ್ಲಾನ ಪರಿಸ್ಥಿತಿ*

"ಭವತಿ ಭಿಕ್ಷಾಂ ಧೇ" ಅಂತ ಮನೆಯ ಒರಗೆ ಘಂಟೆಯ ಸದ್ದಿನೊಂದಿಗೆ ಧ್ವನಿ ಬಂದಾಗ ಭಾಗಮ್ಮ ಒಲೆಯ ಮೇಲೆ ಹಂಚಿಟ್ಟಿದ್ದಳು,ಗಂಡನ ಭಕಾಸುರನಂಥಹ ಹೊಟ್ಟೆಗೆ ಬಿಸಿ ಬಿಸಿ ರೊಟ್ಟಿ ಸುಟ್ಟು ಕೊಡುವುದೊಂದು ಆಕೆಯ ಖುಷಿ.ಆ ಅವಸರದಲ್ಲಿ ಹಿಟ್ಟು ನಾದುತ್ತಿದ್ದಳು.ಭಾಗಮ್ಮನ ಪತಿ ರಾಮಣ್ಣನೂ ಹಾಗೆ,ಮೈ ಮೇಲೆ ಬಿಸಿ ನೀರು ಬಿದ್ದ ತಕ್ಷಣ ಆತ ಹಸಿವನ್ನು ತಡೆದುಕೊಳ್ಳಲಾರ;ಬಚ್ಚಲ ಮನೆಯ ಕದ ಹಾಕಿಕೊಂಡಿದ್ದ ರಾಮಣ್ಣನ ಸ್ನಾನ ಮುಗಿಯುವ ಹಂತದಲ್ಲಿತ್ತು,ಅದಕ್ಕೆ ಪೂರಕವೆಂಬತೆ,"ಏನಾ,ಟವೆಲ್ಲು ಮರ್ತೀನಿ ನೋಡು!"ಅಂತ ಕೂಗಿದ್ದ.ಬಂದೆ ತಡಿ ಎನ್ನುತ್ತಾ ಭಾಗಮ್ಮ ಅಡುಗೆ ಮನೆಯಿಂದ ಕೂಗಿದಳು.

ಸರಿಯಾಗಿ ಅದೇ ಹೊತ್ತಿಗೆ ಮನೆಯ ಮುಂದೆ ಭವತಿ ಭಿಕ್ಷಾಂ ಧೇ ಎನ್ನುವ ಸದ್ದು ಕೇಳಿತ್ತು.ಈ ಬೆಳಗಿನ ಸಮಯ ಆರರಿಂದ ಒಂಬತ್ತು ಗಂಟೆಯವರೆಗೆ ಗೃಹಿಣಿಯರಿಗೆ ತುಂಬಾ ಅವಸರ ಮತ್ತು ಟೆನ್ಸನ್ ಉಂಟು ಮಾಡುವ ಕಾಲ.ಮಕ್ಕಳನ್ನು ಶಾಲೆಗೆ ಸಿದ್ದಗೊಳಿಸಬೇಕು,ಅಡವಿಗೆ ಹೋದವರಿಗೆ ಬುತ್ತಿ ರೆಡಿ ಮಾಡಬೇಕು,ಅತ್ತೆ ಮಾವಂದಿರ ಸೇವೆ ಮಾಡಬೇಕು,ಗಂಡನಿಗೆ ಬಿಸಿ ರೊಟ್ಟಿ ಮಾಡಬೇಕು.ಪುಣ್ಯಕ್ಕೆ ಹಳ್ಳಿಗಾಡಿನ ರೈತಾಪಿ ಮನೆಗಳಿಗೆ ಬೆಳಗಿನ ತುಂಡಿಯ ಸಂಸ್ಕೃತಿ ಬಂದಿಲ್ಲ.ಬೆಳಗೆದ್ದು ಗಳೆ ಗಾಡಿಗೆ ಹೋಗಬೇಕಿರುವ ಜನಕ್ಕೆ ನಾಲ್ಕು ನಾಲ್ಕು ಬಿಸಿ ರೊಟ್ಟಿಯೇಬೇಕು;ಪಲ್ಯ ಇಂಥದ್ದೆ ಇರಬೇಕು ಎನ್ನುವ ನಿಯಮವಿಲ್ಲ.ರಾತ್ರಿ ಹೆಪ್ಪಿಟ್ಟ ಕೆನೆ ಮೊಸರು ಬೊಳ್ಳಳ್ಳಿ ಕಾರ,ಹಸಿ ಮೆಣಸಿನ ಕಾರವಿದ್ದರೂ ನಡೆಯುತ್ತದೆ.ಅದಕ್ಕೆಂದೇ ಪೂರ್ವ ಸಿದ್ದತೆ ಎಂಬಂತೆ ಹಳ್ಳಿಯ ರೈತಾಪಿ ಕುಟುಂಬಗಳ ಗೃಹಿಣಿಯರು ಶೇಂಗಾದ ಹಿಂಡಿ,ಬೊಳ್ಳಳ್ಳಿ ಕಾರ,ಹುಣಸೆಕಾರ,ನಿಂಬೆಕಾರಗಳನ್ನು ತಯಾರಿಸಿಟ್ಟುಕೊಂಡಿರುತ್ತಾರೆ.ಆ ಉಪ ಪದಾರ್ಥಗಳು ಗೃಹಿಣಿಯರ ಕೊಂಚ ಮಟ್ಟಿಗಿನ ಒತ್ತಡವನ್ನು ಕಡಿಮೆ ಮಾಡುತ್ತವೆ.

ಸಮಯ ಎಂಟಾಗಿತ್ತು,ಮಕ್ಕಳು ತಮ್ಮ ಪಾಡಿಗೆ ತಾವು ಶಾಲೆಗೆ ಹೋಗುವ ಸಿದ್ದತೆಯಲ್ಲಿದ್ದರು.ಹೈಸ್ಕೂಲಿನಲ್ಲಿ ಓದುವ ಮಕ್ಕಳಿಗೆ ಸದ್ಯ ತಾಯಿಯ ಯಾವ ಸೇವೆಯೂ ಬೇಕಿಲ್ಲ.ಒಂಬತ್ತು ಗಂಟೆಯ ಹೊತ್ತಿಗೆ ಹೊಲಕ್ಕೆ ಹೊರಡಬೇಕಿರುವ ಗಂಡನಿಗಿಷ್ಟು ಬಿಸಿ ರೊಟ್ಟಿ ಮಾಡಿದರೆ ಆಕೆಯ ಬೆಳಗಿನ ಒತ್ತಡ ಮುಗಿದಂತೆಯೇ!

"ಯಪ್ಪಾ ಅಯ್ಯನೇರಾ,ನಿನಗ ಹೊತ್ತು ಗೊತ್ತು ಗೊತ್ತಿಲ್ಲ ನೋಡು,ಸ್ವಲ್ಪ ತಡಾ ಮಾಡಿ ಬರಬಾರದಾ" ಎಂದು ಭಿಕ್ಷೆಗೆ ಬಂದಾತನ ಕೂಗಿಗೆ ಪ್ರತಿಕ್ರಿಯಿಸಿದಳು ಭಾಗಮ್ಮ,ಭಿಕ್ಷೆಗೆ ಬಂದಾತ "ಹೀ ಹೀ ಹೀ" ಅಂತ ಹಲ್ಲು ಕಿಸಿದ.ಹಣೆಯ ತುಂಬಾ ವಿಭೂತಿ ಬರೆದುಕೊಂಡಿದ್ದ ಆತ ಒಂದು ವಿಕೃತ ಹೊಟ್ಟೆ ಬೆನ್ನಿಗತ್ತಿದ ಹಸಿದ ಬೆಕ್ಕಿನಂತಿದ್ದ.ತಮಾಷೆಯಂತಿದ್ದ.

ರಾಮಣ್ಣ ಬಚ್ಚಲು ಮನೆಯಿಂದ ಹೊರ ಬರುತ್ತಾ, "ಹತ್ತು ಮನೆ ಊಟ ಮಾಡಿ ಹನ್ನೊಂದು ಮನೆ ಊಟ ಮಾಡುವ ನಿಮ್ಮಂಥವರಿಗೆ ದೇವರು ಇನ್ನೆಂಥಾ ಹೊಟ್ಟೆ ಕೊಟ್ಟಿರಬೇಕು,ಅಯ್ನೇರು,ಯಾಕಿಂಗ್ ಹಲ್ಲಿ ಒಣಗಿದಂಗ ಒಣಗಿದಿ!" ಎಂದ.ಅದಕ್ಕೆ ಹಿಟ್ಟಿಗೆ ಭಿಕ್ಷೆಗೆ ಬಂದಾತ "ಯಪ್ಪಾ ಕಾಲ ಬದಲಾಗೇತಿ,ಈಗ ಒಕ್ಕಲುತನದ ಮನಿಗಳು ಉಳಿದಿಲ್ಲ.ಜ್ವಾಳ ಜಂಪಿ ಬಿತ್ತೋದೆ ಕಡಿಮೆ ಆಗೇತಿ,ಒಂದು ಕಾಳು ಕಡಿ ಮನಿಗಿ ಬರವಲ್ಲದು.ನಾವು ಊರ ರೈತರ ಮನೆಗಳನ್ನು ಅವರ ಕಣಗಳನ್ನು ನಂಬಿ ಬದುಕವವರು,ಹೊಲಗಳೆಲ್ಲಾ ಆಂದ್ರದವರ ಪಾಲಾಗಿ ಬರೀ ಭತ್ತದ ಗದ್ದೆಗಳಾಗಿ ಬದಲಾದ ಮೇಲೆ ನಮಗ ಬರೋ ದವಸ ಧಾನ್ಯಗಳು ನಿಂತು ಹೋಗ್ಯಾವ,ಈ ಹಿಟ್ಟೊಂದೆ ನಮ್ಮ ಹೊಟ್ಟೆಯ ದಾರಿ!" ಎಂದು‌ ಆತ ಸದ್ಯದ ವಾಸ್ತವ ಚಿತ್ರಣ ಬಿಚ್ಚಿಟ್ಟ.ರಾಮಣ್ಣ "ಅದೂನು ಖರೇ ಆದ!" ಎನ್ನುವಲ್ಲಿಗೆ ಎರಡೂ ಬೊಗಸೆಗಳ ತುಂಬಾ ಹಿಟ್ಟು ತುಂಬಿಕೊಂಡು ಬಂದು ಭಿಕ್ಷೆಗೆ ಬಂದಾತನ ಜೋಳಿಗೆಗೆ ಹಾಕಿ ಕಾಲಿಗೆ ಬಿದ್ದಳು.

"ನೀ ಯಾರ ಮಗ ಅಯ್ನೇರು?" ಎಂದು ರಾಮಣ್ಣ ಕೇಳಿದಾಗ,
"ಹಿಟ್ಟಯ್ಯ ಅಂತ ನನ್ನ ಹೆಸರರಿ,ಬೊಟ್ಟಯ್ಯನ ಮಗ,ನಮ್ಮ ಅಡ್ಡ ಹೆಸರು ಗಿರಿಮಟ್ಟ ಅಂತಾರಿ!" ಎಂದ.

ಅಲ್ಲಿಗೆ ಬೆಳಗು ಮುಗಿಯುತ್ತಾ ಬಂದಿತ್ತು!
*****

"ನೋಡ್ತಾ ಇರಿ,ಈ ವರ್ಷ ಕಪ್ ನಮ್ದೆ.ನಮ್ಮ ಕಬ್ಬಡ್ಡಿ ಟೀಂನ್ನು ಹೇಗೆ ಕಟ್ತೀನಿ ಎಂದರೆ ನಮ್ ಟೀಂ ಹೆಸರು ಕೇಳಿದರೆ ಇಡೀ ಕರ್ನಾಟಕ ಗಡಗಡ ನಡುಗಿರಬೇಕು!ಇನ್ನಾ ಆರು ತಿಂಗಳು ಟೈಂ ಸಾಕುರಿ ನಂಗೆ,ಇಡೀ ರಾಜ್ಯದಲ್ಲಿ ಒಂದು ಘನತೆ,ಹೆಸರು ಬಂದಿರಬೇಕು ನಮ್ ಟೀಂಗೆ,ಹಂಗ್ ಮಾಡ್ತೀನಿ" ಎಂದ ಹಿಟ್ಟಯ್ಯ ಗಿರಿಮಟ್ಟ.ಆ ಕಡೆ ಫೋನಿನಲ್ಲಿ ಯಾರು ಲೈನಿನಲ್ಲಿ ಇದ್ದರೋ ಗೊತ್ತಿಲ್ಲ,ಬಹುಶಃ ಅವರು ಹೌದೌದು ಎಂದಿರಬೇಕು;ಭೇಷ್ ಹಿಟ್ಟಯ್ಯ ಗಿರಿಮಟ್ಟ,ನೀನಂದ್ರೆ ನೀನೆ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡ.

ಮಧ್ಯಾಹ್ನದ ಹೊತ್ತು,ಬಿಸಿಲು ರಣಗುಟ್ಟುತ್ತಿತ್ತು.ವ್ಯಾಪಾರ ವಹಿವಾಟುಗಳೆಲ್ಲಾ ಬಂದಾಗಿ ಆ ಬೀದಿ ಬಿಕೋ ಅನ್ನುತ್ತಿತ್ತು.ಮೋದಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಡಿಜಿಟಲ್ ಇಂಡಿಯಾ ಎನ್ನುವ ಅರ್ಥಹೀನ ಯೋಜನೆಗೆ ಬೆನ್ನು ಹತ್ತಿದ ಪರಿಣಾಮ ಸಣ್ಣ ಸಣ್ಣ ವ್ಯಾಪಾರಗಳು ಮುಚ್ಚಿ ಹೋಗಿದ್ದವು.ಆನ್ಲೈನ್ ಮಾರುಕಟ್ಟೆ ಈ ಮುಕ್ತ ಮಾರುಕಟ್ಟೆ ನಿಯಮಕ್ಕೆ ಒಳಪಟ್ಟು ವ್ಯಾಪಾರ ವಹಿವಾಟುಗಳಿಗೆ ಸೀಮೆ ಇಲ್ಲದಂತಾದ ಮೇಲೆ ಪ್ರತಿಯೊಬ್ಬರು ಪ್ರತಿಯೊಂದು ವಸ್ತುಗಳನ್ನು ಮನೆಯಿಂದಲೇ ಬುಕ್ ಮಾಡಿ ತರಿಸಿಕೊಳ್ಳತೊಡಗಿದ್ದರು,ಇದರ ಪರಿಣಾಮ ಸಣ್ಣ ಪುಟ್ಟ ಅಂಗಡಿ ಮತ್ತು ವ್ಯಾಪಾರಿಗಳ ಬದುಕು ಬೀದಿ ಪಾಲಾಗಿತ್ತು.ತನ್ನ ಬದುಕೂ ಬೀದಿ ಪಾಲಾಯ್ತಲ್ಲಾ ಎಂದು ಆರು ತಿಂಗಳಿನಿಂದ ಮನೆ ಬಾಡಿಗೆ ಕಟ್ಟದ ತನ್ನ ಅಸಹಾಕತೆಯನ್ನು ನೆನೆದು ನಿಟ್ಟುಸಿರಿಟ್ಟ ಗಿರಿಮಟ್ಟ!

ಹೌದು,ಬದುಕು ಬೀದಿ ಪಾಲಾಗಿದ್ದದ್ದು ನಿಜ.ದೇಶದ ಆರ್ಥಿಕ ಸ್ಥಿತಿ ಅಧೋಗತಿಗಿಳಿದು ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಉದ್ದೋಗಗಳು ನಾಶವಾದದ್ದು ದಿನಂಪ್ರತಿ ವರ್ತಮಾನ ಪತ್ರಿಕೆಗಳಲ್ಲಿ ಬರುತ್ತಿತ್ತು.ಆರ್ಥಿಕ ನೀತಿಗಳ,ಭಾವನಾತ್ಮಕ ಸಂಗತಿಗಳಿಗೆ ಅತಿ ಮಹತ್ವ ನೀಡುವಿಕೆ,ಯುದ್ಧದ ಹಪಾಹಪಿ,ನೋಟು ಅಮಾನ್ಯೀಕರಣ ಇವೆಲ್ಲವೂ ಈ ದೇಶವನ್ನು ನಾಶದ ಅಂಚಿಗೆ ತಂದು ನಿಲ್ಲಿಸಿದ್ದವು;ಇದರೊಂದಿಗೆ ತನ್ನದೂ ಬದುಕು ನಾಶವಾಗಿ ಹೋಯಿತಲ್ಲ ಎಂದು ಬೀಡಿಗೆ ಬೆಂಕಿ ಹಚ್ಚಿದ ಗಿರಮಟ್ಟ.ಬೀಡಿ ನಿಧಾನವಾಗಿ ಸುಡತೊಡಗಿತು.

ಹೌದು,ರಾಜ್ಯಾದ್ಯಂತ ತಾನು ಕಬ್ಬಡ್ಡಿ ತಂಡದ ಕಟ್ಟುವಿಕೆ ಮತ್ತದರ ಯಶಸ್ಸಿನ ಬಗ್ಗೆ ಮಾತಾಡುತ್ತಿದ್ದೇನೆ,ತಾನೀಗ ತನ್ನದೇ ಊರಿನಲ್ಲಿ,ತನ್ನದೇ ಜಿಲ್ಲೆಯಲ್ಲಿ ಎಷ್ಟೆ ಸಂಖ್ಯೆಯಲ್ಲಿ ಯುವಕರನ್ನು ಸಂಘಟಿಸಿದ್ದೇನೆ?ತನ್ನದು ಒಣ ಬೊಗಳೆಯೇ?ಇಷ್ಟಕ್ಕೂ ಈ ಕಬಡ್ಡಿ ತಂಡದ ಪರಿಕಲ್ಪನೆ ಮೂಡಿದ ಮೇಲೆ ತನ್ನಿಂದಾದ ಸಾಧನೆ ಏನು?ತಾನು ಒಂದೇ ಒಂದು ಕಪ್ ಗೆದ್ದಿದ್ದೇನಾ?ಕಬ್ಬಡ್ಡಿಯ ಬೆನ್ನು ಹತ್ತಿ ತನ್ನ ಬದುಕು ಮೂರು ಪಾಲು ಮಾಡಿಕೊಂಡೆನೆ?ಯೋಚಿಸತೊಡಗಿದ ಹಿಟ್ಟಯ್ಯ.ಬೀಡಿ ನಿಧಾನವಾಗಿ ಸುಡತೊಡಗಿತ್ತು.

ಒಂದಿಷ್ಟು ದಿನಗಳಿಂದ ಹಿಟ್ಟಯ್ಯನನ್ನು ಕೆಲವು ಜನ ಗಮನಿಸತೊಡಗಿದ್ದರು.ಹಿಟ್ಟಯ್ಯನಿಗೆ ತಲೆ ಸರಿ ಇಲ್ಲ ಎನ್ನುವ ಸುದ್ಧಿ ಸದ್ಯಕ್ಕೆ ಆ ಗಲ್ಲಿಯಲ್ಲಿ ಪ್ರಚುರ ಪಡೆದಿತ್ತು.ತಿಕ್ಕಲು ತಿಕ್ಕಲು ಬಡಬಡಿಸುವುದು,ಮೊಬೈಲು ಫೋನಿನ ಸ್ಕ್ರೀನಿನ ಮೇಲೆ ಮಲ ವಿಸರ್ಜನೆ ಮಾಡುವುದು,ಮೂತ್ರ ವಿಸರ್ಜನೆ ಮಾಡುವುದು ಇತ್ಯಾದಿಗಳನ್ನು ಮಾಡುತ್ತಾ ತಿಕ್ಕಲುತನಗಳನ್ನು ತೋರಿಸತೊಡಗಿದ್ದ.ಸರ್ವೇ ಜನೋ ಸುಖಿನೋ ಭವತಿ ಎಂದೇನೋ ಹೇಳುತ್ತಾ ಅಳುತ್ತಿದ್ದ.ಎಸ್ಸಿ ಎಸ್ಟಿಗಳು ತನ್ನ   ವೈರಿಗಳು ಎಂದು ಹೂಸಿನ ವಾಸನೆಯೋಪಾದಿಯಲ್ಲಿ ಪರಿಮಳ ಬೀರುತ್ತಿದ್ದ.ಮೋದಿ ಎಂಬಾತನೆ ತನ್ನ ಮನೆ ದೇವರಾಗಿ ತಾನು ಆತನ ಉದರ ಸಂಜಾತ ಎಂದು ಬಡಬಡಿಸುತ್ತಿದ್ದ.ಇಂತಿಪ್ಪ ಹಿಟ್ಟಯ್ಯನಿಗೆ ವಿಚಿತ್ರ ರೋಗ ಪ್ರಾರಂಭವಾಗಿತ್ತು;ಆ ರೋಗವೆಂದರೆ,

ಗುದನಾಳದಿಂದ ಮಲ ವಿಸರ್ಜನೆಯಾಗದೆ ಬಾಯಿಯಿಂದ ಆಗತೊಡಗಿತ್ತು!

ಒಕ್ಕಲು ಮನೆಗಳ ದವಸ ಧಾನ್ಯಗಳ ದಕ್ಷಿಣೆ ಇತ್ಯಾದಿ ಸಂಭಾವನೆಗಳು ಕೈ ತಪ್ಪಿದ ಪರಿಣಾಮ ಆತ ಸಂವಿಧಾನಕ್ಕೆ ಇಡಿ ಶಾಪ ಹಾಕುತ್ತಿದ್ದ!ಆತನ ವರ್ತನೆ ವಿಚಿತ್ರವಾಗಿತ್ತು,ಆತ ಬೇದಿಯನ್ನು ನಿಗ್ರಹಿಸದ ಸ್ಥಿತಿಗೆ ತಲುಪಿದ್ದ!

ಇಂತಿರುವ ಹಿಟ್ಟಯ್ಯನಿಗೆ ಜೀವನವೊಂದು ದೊಡ್ಡ ಸಮಸ್ಯೆಯಾಗಿರುವಂತೆ....
*****

"ಈ ಜನ್ಮದ ನನ್ನ ಪರಮಗುರಿ ಮತ್ತು ಧ್ಯೇಯ ಎಂದರೆ ಆ ಸೂಳಿಮಗನ್ನ ಸಣ್ಣ ಕಡಿಯುವುದು,ಅವನನ್ನು ಹೇಗೆ ಕಡಿಯಬೇಕು ಎಂದರೆ ಮೊದಲು ಉಗುರುಗಳು,ನಂತರ ಕೈಗಳು,ಕಾಲು ಬೆರಳುಗಳು,ನಂತರ ಕಾಲುಗಳು,ಕಣ್ಣುಗಳನ್ನು ಜೀವಂತವಾಗಿರುವಂತೆ ಕಿತ್ತಬೇಕು,ಮೂಗನ್ನು ಕತ್ತರಿಸಬೇಕು,ಕಿವಿಗಳನ್ನು ಕೈಯಿಂದ ಕಿತ್ತಬೇಕು,ಜೀವಂತ ಇರುವಂತೆ ಹೃದಯ ಹೊರಗೆ ತೆಗೆಯಬೇಕು!ನಮ್ಮ ಜೀವನವನ್ನು ನರಕ ಮಾಡಿರುವ,ನಮ್ಮನ್ನು ಕ್ಷಣ ಕ್ಷಣವೂ ಕಾಡಿದ ಆ ಭೋಸಿಡಿಕೆಯನ್ನು ಸುಮ್ಮನೆ ಬಿಡಬಾರದು!" ಎಂದ ಪಟ್ಟಭದ್ರಯ್ಯ.ಅದೊಂದು ಸಂಜೆ ಬಾರೊಂದರ ಮೂಲೆಯಲ್ಲಿ ಮಬ್ಬುಗತ್ತಲಿನ ಟೇಬಲ್ಲಿನ ಹತ್ತಿರ ಹಾಕಿದ ಕುರ್ಚಿಗಳ ಮೇಲೆ ಮದ್ಯದ ಬಾಟಲಿಗಳನ್ನು ಮುಂದಿಟ್ಟುಕೊಂಡು ಎದುರಾಬದರು ಕುಳಿತು ರುದ್ರಯ್ಯನಿಗೆ ಹೇಳತೊಡಗಿದ್ದ.ನಿಜಕ್ಕೂ ಸಮಸ್ಯೆಯನ್ನು ದಾರುವಾಗುವಂತೆ ಮಾಡಿದ್ದ ಒಬ್ಬ ವ್ಯಕ್ತಿ.ಕಬಡ್ಡಿ ಪಂದ್ಯವನ್ನೇ ತನ್ನ ಪ್ರಬಲ ಅಸ್ತ್ರ ಎಂದು ಭಾವಿಸಿ ಅದರಿಂದ ಇಲ್ಲಸಲ್ಲದ ಸಮಸ್ಯೆಗಳನ್ನು ಸೃಷ್ಟಿಸಿದ್ದ.ಹಾಗೆ ಸಮಸ್ಯೆ ಸೃಷ್ಟಿಸಿ ತುಂಬಾ ತೊಂದರೆಯನ್ನು ಉಂಟು ಮಾಡಿದ್ದ ಆ ಕಬಡ್ಡಿ ಆಟಗಾರನನ್ನು ಏನು ಮಾಡಬೇಕು ಎನ್ನುವುದರ ಚರ್ಚೆ ಅವರಿಬ್ಬರೂ ಮಾಡತೊಡಗಿದ್ದರು.ಇಬ್ಬರೂ ಕಟಕಟನೆ ಹಲ್ಲು ಕಡೆಯೊಡಗಿದ್ದರು.ಅವರ ಆಕ್ರೋಶಕ್ಕೆ ಮದ್ಯದ ಬಾಟಲಿಗಳು ಪದೇಪದೇ ಖಾಲಿಯಾಗುತ್ತಿದ್ದವು.ಜನ್ಮಾಂತರಗಳ ಸೇಡಿಗೆ ಗುರಿಯಾಗಿರುವಂತೆ ಸಿಗರೇಟುಗಳು ಸುಡುತ್ತಿದ್ದವು,ಟೇಬಲ್ಲಿಗೆ ತಿಕ್ಕಲ್ಪಡುತ್ತಿದ್ದವು,ಆಷ್ ಟ್ರೇ ಎನ್ನುವ ಸಮಾಧಿಯೊಳಗೆ ಲೀನವಾಗಲ್ಪಡುತ್ತಿದ್ದವು!

ಏನ್ ಮಾಡಬೇಕು ಆ ಕಬ್ಬಡ್ಡಿ ಆಟಗಾರನನ್ನು?

ಅವರ ಮುಂದೆ ಪದೇಪದೇ ಅದೇ ಪ್ರಶ್ನೆ ಕೆಟ್ಟ ಹುಳುವಾದ ನಾಗರ ಹಾವಿನ ಸೆಡೆತದ ರೀತಿಯಲ್ಲಿ ಉದ್ಭವವಾಗುತ್ತಿತ್ತು.

"ಏನೋ ಒಂದು ಮಾಡಬೇಕು ನಿಜ,ಏನೋ ಒಂದು ಮಾಡಲಿಕ್ಕೆ ಇದು ಸೂಕ್ತ ಸಮಯವಲ್ಲ.ಅದೇನು ನಮ್ಮ ಮಟ್ಟಿಗೆ ದೊಡ್ಡ ಪ್ರಾಣಿಯೂ ಅಲ್ಲ.ಅದೊಂದು ಕೆಟ್ಟ ಹುಳು,ಎಡಗಾಕ ಎಕ್ಕಡದಿಂದ ಹೊಸಕಿ ಹಾಕಬಹುದಾದ ಕೆಟ್ಟ ಹುಳು!ಅದನ್ನೀಗ ಏನಾದರೂ ಮಾಡಿದರೆ ನಮ್ಮ ತಲೆಗೇ ಸುತ್ತುತ್ತದೆ.ಕೊಂಚ ಸಮಯ ಕಾಯೋಣ.ಅದೀಗ ನರಕಮಯ ಜೀವನ ಸಾಗಿಸುತ್ತಿದೆಯಂತೆ;ಕಬಡ್ಡಿ ಆಟ ಎನ್ನುವುದು ಅದರ ಬಾಯಿ ಚಪಲವಂತೆ.ಅದರ ಹಿಂದೆ ಯಾರೂ ಇಲ್ಲ.ಎಲ್ಲೋ ಬೆಂಗಳೂರು,ಬೊಂಬಾಯಿಯಲ್ಲಿರುವವರು ತಮ್ಮದೆ ಸಂಸಾರದ ಹೈರಾಣನ್ನು ಬಿಟ್ಟು ಇದರ ನೆರವಿಗೆ ಬರುತ್ತಾರೆಯೇ?ಅದರ ಬಗ್ಗೆ ಯೋಚಿಸಿದಿರು,ಇವೆಲ್ಲಾ ಮುಗಿಯಲಿ.ನಂತರ ನೋಡೋಣ!" ಎಂದ ರುದ್ರಯ್ಯ.ಅವರಿಬ್ಬರ ಮದ್ಯ ಸೇವನಾ ಸಮಾರಾಧನೆ ಮುಗಿಯುವ ಹೊತ್ತಿಗೆ ನೆಶೆ ಅವರಿಬ್ಬರನ್ನೂ ಆಕ್ರಮಿಸಿಕೊಂಡು ಮೆದುಳಿನ ನ್ಯೂರಾನುಗಳನ್ನು ದಾರಿ ತಪ್ಪಿಸಿ ಬಿಟ್ಟಿತ್ತು!
****

ಇದಾಗಿ ಎರಡು ವರ್ಷಗಳ ನಂತರ...

"ಭವತಿ ಭಿಕ್ಷಾಂ ಧೇ!"

ಎನ್ನುವ ಘಂಟೆಯ ಶಬ್ದ ಮಿಶ್ರಿತ ವಾಕ್ಯ ಕೇಳಿಸಿತು.ಈ ಸಲ ರಾಮಣ್ಣ ಮನೆಯ ಅಂಗಳದಲ್ಲಿ ಕುಳಿತಿದ್ದ.ದಿವ್ಯಾಂಗರ ಮೂರು ಚಕ್ರದ ವಾಹನದ ಮೇಲೆ ಬಂದಿದ್ದ ಹಿಟ್ಟಿಗೆ ಬರುವಾತ.

"ಯಾಕೋ ತಮ್ಮಾ,ಅದೆಲ್ಲಾ ಯಾಕೆ ಬೇಕಾಗಿತ್ತು?ನೀನಾಯ್ತು,ನಿನ್ನ ಭಿಕ್ಷಾಟನೆಯಾಯಿತು,ನಿನ್ನ ಹಿಟ್ಟಾಯ್ತು ಎನ್ನುವಂತೆ ಇದ್ದು ಬಿಡೋದಲ್ವಾ?ದೊಡ್ಡವರ ತಂಟೆ ಯಾಕೆ?ಈಗ ಕಬ್ಬಡ್ಡಿ ಆಡಬಲ್ಲೆಯಾ?ಕಬಡ್ಡಿ ಆಟ ಒಂದು ಸೊಕ್ಕಿನ ಆಟವಲ್ಲ.ನೋಡೀಗ,ಕಾಲು,ಕಣ್ಣು ಕಳೆದುಕೊಂಡಿದ್ದೀಯ.ಹೆಂಡ್ತಿ ಮಕ್ಕಳಿಗೆ ಹೊರೆಯಾಗಿದ್ದೀಯ.ಬಡವ ನೀ ಮಡಗಿದಂಗಿರು ಎನ್ನುವುದನ್ನು ಬಿಟ್ಟು ಇಲ್ಲದ ಉಸಾಬರಿಗೆ ಹೋಗಿ ಏನಾಯಿತು?ಕಣ್ಣು ಹೋದವು,ಕಾಲು ಹೋದವು,ತಿಕಾ ತೊಳೆಯಲು ಕೈ ಇಲ್ಲ.ಊರ ಉಸಾಬರಿ ಮಾಡಿ ಮುಲ್ಲಾ ಬಡವಾಗಿದ್ದನಂತೆ!" ಎಂದು ಅನ್ನುವಷ್ಟರಲ್ಲಿ ಭಾಗಮ್ಮ ಈ ಸಲ ಹಿಟ್ಟನ್ನು ಮೊರದಲ್ಲಿ ತುಂಬಿಕೊಂಡು ಬಂದಿದ್ದಳು.ಜೋಳಿಗೆಗೆ ಹಿಟ್ಟು ಸುರಿದು ಜಂಗಮನ ಪಾದ ಮುಟ್ಟಬೇಕು ಎಂದರೆ ಪಾದವೇ ಇರಲಿಲ್ಲ!

ಪಾದ,ಕೈ,ಕಣ್ಣು ಇರದಿದ್ದರೂ ಕೆಲವು ಜನಾಂಗಗಳು ಬದುಕಬಹುದು ಎಂದೇ ಮೀಸಲಾತಿಯಿಂದ ವಂಚಿತವಾದವು,ಕೈ ಇದ್ದು,ಕಾಲಿದ್ದೂ,ಕಣ್ಣುಗಳಿದ್ದು,ಸದೃಡ ದೇಹವಿದ್ದು ದಲಿತ ಶೂದ್ರ ವರ್ಗಗಳು ಸಂವಿಧಾನದ ಸವಲತ್ತುಗಳಿದ್ದೂ ಬದಲಿಕ್ಕೆ ದುಸ್ತರವಾದ ಸನ್ನಿವೇಶದ ಅರಿವಾಗಿ ಭಾಗಮ್ಮ...

"ಪಾಪ,ಹಿಂಗಾಗಬಾರದಿತ್ತು!" ಎಂದಳು.

                           *ವಿಶ್ಮಯನಾಥ*

ಮಧುರ ಆ ದಿನಗಳು...!

          ೧೯೮೦ರ ಇಸವಿಯಲ್ಲಿ ಹುಟ್ಟಿದ 'ಮಹಾಪುರುಷರ' ಪ್ರೇಮ ಜೀವನದ ಕುರಿತು ಮಾತಾಡ ಹೊರಟರೆ ಅತ್ಯಂತ ರೊಮಾಂಚಕ ಕಥನಗಳು ಮತ್ತು ಅನುಭವಗಳು ಬಯಲಾಗುತ್ತವೆ. ಪ್ರೇಮ ನಿವೇದನೆ ಮತ್ತು ಹುಡುಗಿಯೊಬ್ಬಳನ್ನು ತೀರ 'ಉಸಿರು ತಾಕುವಷ್ಟು' ಹತ್ತಿರ ತಂದುಕೊಳ್ಳಬೇಕಾದ ಮಹತ್ತರ ಆ ಕ್ಷಣ,ಐತಿಹಾಸಿಕ ಘಟನೆ ಸಂಭವಿಸುವ ರೋಚಕ ಕ್ಷಣದಂತಿರುತ್ತಿತ್ತು. ಮತ್ತು ಅದರ ಮಾಹಾ ಪರ್ವದ ಆರಂಭ ಬಲು ಆಸಕ್ತಿದಾಯಕ ಕಥೆ ಅನ್ನಿಸುತ್ತದೆ. Technology improve ಆಗದ ಆ ದಿನಗಳ ಪ್ರೇಮ ಕಥೆಗಳು ನಿಜಕ್ಕೂ interesting ಆಗಿರುವಂತಹವು.ಪ್ರೇಮ ನಿವೇದನೆ ಎನ್ನುವುದು ಅಣು ಬಾಂಬು ಸ್ಪೋಟದ ಭಯಾನಕತೆಗಿಂತ ಘೋರವಾಗಿತ್ತು ಎನ್ನುವುದು ನೆನೆಸಿಕೊಂಡರೆ ಬಲು ವಿಚಿತ್ರ ಅನ್ನಿಸುತ್ತದೆ. ಅವಳನ್ನು ಕಾಣುವ ಘಳಿಗೆಯ ರೋಮಾಂಚನೆಯನ್ನು ನೆನಪು ಮಾಡಿಕೊಂಡರೆ ಎಂತಹ golden ದಿನಗಳು ಅವು ಎನ್ನಿಸುತ್ತವೆ.ಮಧುರ ನೆನಪುಗಳಿಗೆ ನಿಜಕ್ಕೂ ಉತ್ಸಾಹವನ್ನು ಪುಟಿದೇಳಿಸುವ ಶಕ್ತಿ ಇದೆ ಎನ್ನುವುದು ಪ್ರಜ್ಞೆಗೆ ಬರುತ್ತದೆ.ಪ್ರೀತಿಯ ಆ ದಿನಗಳ ಮಧುರ ನೆನಪುಗಳ ಒಳಗಿನ ಕಹಿ ಕೂಡಾ ಈ ಸಂದರ್ಭದಲ್ಲಿ ಸಿಹಿ ಎನ್ನಿಸುತ್ತದೆ.ಅವಳ ಸಂಭ್ರಮಕ್ಕೆ ಕಾಯುವ,ಅವಳ ಹಿತವಾದ ನಗುವಿಗೆ ಕಾಯುವ,ಅವಳ ನೋಟಕ್ಕೆ ಹಪಾಹಪಿಸುವ ವಿರಹದ ಆ ನೋವು ಬಲು ಹಿತವೆನ್ನಿಸುತ್ತದೆ.ಅವಳು ಮೊಟ್ಟ ಮೊದಲ ಸಲ ಸೀರೆ ಉಟ್ಟು ನಮ್ಮೆಡೆಗೆ ನೋಡಿದ ಆ ನೋಟ ಒಂದಿಡೀ ಜೀವನದ ಮರೆಯದ ಕ್ಷಣವಾಗಿ ಮನಸ್ಸಿನಲ್ಲಿ ದಾಖಲೆಯಾದ ಸಂಗತಿಯನ್ನು ಮರೆಯುವುದೆಂತು?ದೇವರಲ್ಲಿ ಮತ್ತೆ ಆ ಕಾಲ ನೀಡೆಂದು ಬೇಡಿಕೊಳ್ಳುವ ತವಕ.ಕಾಲವನ್ನು ಮತ್ತೆ ಮರುಕಳಿಸುವ ಶಕ್ತಿ ಇದ್ದರೆ ಹೇಗೆ ಎನ್ನುವ ಒಂದು ವಿಲಕ್ಷಣ ಪ್ರಶ್ನೆ ಹುಟ್ಟುತ್ತದೆ.ಎಷ್ಟೊಂದು ಅವಿಷ್ಕಾರಗಳಾದವು ಭೂಮಿಯ ಮೇಲೆ?ಆದರೆ ಕಾಲವನ್ನು ಒಂದು ನಿಮಿಷ ಹಿಂದಕ್ಕೆ ಕೊಂಡೊಯ್ಯುವ ಶಕ್ತಿ ವಿಜ್ಞಾನಿ ಈ ಭೂಮಿಯ ಮೇಲೆ ಜನಿಸಲಿಲ್ಲ.ಜಗತ್ತನ್ನೆ ನಾಶ ಮಾಡುವ ಶಸ್ತ್ರಗಳನ್ನು ಕಂಡು ಹಿಡಿಯಲಾಯಿತು.ಆದರೆ ಮನುಷ್ಯನನ್ನು ತನ್ನ ಜೀವಿತ ಕಾಲದ ಅವದಿಯಿಂದ ಒಂದು ನಿಮಿಷ ಹಿಂದಕ್ಕೆ ಕೊಂಡುಯ್ಯುವ ಆ ಅದ್ಬುತ ಅವಿಷ್ಕಾರವಾಗಲಿಲ್ಲ.ಹಾಗೊಂದು ಆವಿಷ್ಕಾರವಾಗಿದ್ದರೆ ಎಷ್ಟೊಂದು ಚೆನ್ನ ಎಂದೆನಿಸುತ್ತದೆ. ಆದರೆ ಬಾಲ್ಯದ ಆ ಮಧುರ ನೆನಪುಗಳಿಗೆ ವೃದ್ಧಾಪ್ಯದಲ್ಲಿ ಯೌವನದ ಕಸಿ ಒದಗಿಸುವ ಶಕ್ತಿ ಇರುವುದು ಒಂದು ಇಂದ್ರಜಾಲದಂತಿದೆ.

          ಲವ್ ಎನ್ನುವ ಪದವನ್ನು ಯಾರೂ ಗಟ್ಟಿಯಾಗಿ ಉಚ್ಚರಿಸುತ್ತಿರಲಿಲ್ಲ.ಲವ್ ಎನ್ನಲು ಏನೋ ಸಂಕೋಚ;ಎಂಥದ್ದೋ ನಾಚಿಕೆ.ಆ ಕಾಲದಲ್ಲಿ ಗಟ್ಟಿಯಾಗಿ ಐಲವ್ ಯೂ ಎಂದವನೆ ನಿಜವಾದ ಅಲೆಕ್ಸಾಂಡರ್!!

          ನಿಜವೆ!

          ಒಂದು ಸಲ ಮನೆಯ ಮುಂದಿನ ಹಜಾರಿನಲ್ಲಿ ಇಳಿಸಂಜೆ ಸೂರ್ಯ ಕಂದುವ ಹೊತ್ತಿನಲ್ಲಿ ಒಂದು ಬೆತ್ತದ ಖುರ್ಚಿ ಹಾಕಿಕೊಂಡು ನಿಡಿದಾಗಿ ಕಾಲು ಚಾಚಿಕೊಂಡು ಕುಳಿತುಕೊಳ್ಳಿ.ಹಾಗಷ್ಟೆ ಕರುವ ಹಂಬಲಿಸಿ ದನಗಾಹಿಯ ಜೊತೆಯಲ್ಲಿ ದೊಡ್ಡಿಗೆ ಮರಳುವ ಹಸುವಿನ "ಅಂಬಾ" ಎನ್ನುವ ಕೂಗು, ಮನೆಯ ಮುಂದಿನ ಮರದಲ್ಲಿ ಗೂಡಿಗೆ ಮರಳಿದ ಹಕ್ಕಿಗಳ ಕಲರವ ಇರುವ ಆ ಹೊತ್ತಿನಲ್ಲಿ ಒಂದು ಸಲ ಹೃದಯಾಂತರಾಳದಿಂದ ನಿಟ್ಟುಸಿರೊಂದನ್ನು ಹೊರ ಹಾಕಿ ಹಗುರವಾಗುತ್ತಾ ಕಣ್ಣು ಮುಚ್ಚಿಕೊಳ್ಳಿ.ಈಗ ಕಣ್ಣ ಪಾಪೆಗಳ ಮೇಲೆ ಬಾಲ್ಯದ ಆ ಕಾಲವನ್ನು ಹಂತ ಹಂತವಾಗಿ ಜ್ಞಾಪಿಸಿಕೊಳ್ಳತೊಡಗಿ.ಓಹ್!ನಿಜಕ್ಕೂ ಹೃದಯದಲ್ಲಿ ಸಂತೋಷದ ಕಂಪನಗಳು ಹುಟ್ಟತೊಡಗುತ್ತವೆ.ತಿಂದು ಹಾಕಿದ ಕಾಲರಿನ ಅಂಗಿ ಕುಂಡಿ ಸೀಳಿದ ಚಡ್ಡಿಯೊಂದಿಗೆ ಶಾಲೆಗೆ ಹೋಗುವ ಆ ಕಷ್ಟದಾಯಕ ಸಂಭ್ರಮ!ಎರಡು ಜಡೆಯ ಹುಡುಗಿಯರ ಹಿಂಡು.ಮುಗ್ದತೆ ಮೇಳೈಸಿದ ಆ ಕ್ಷಣಗಳು,ಸಡನ್ ಎದುರ್ಗೊಂಡ ಗುರುಗಳಿಗೆ ಕಂಪನದ ಧ್ವನಿಯೊಂದಿಗೆ "ನಮಸ್ತೆ ಗೂರೂಜಿ!" ಎಂದ ಆ ಹೊತ್ತು.ನೋಡ ನೋಡುತ್ತಿರುವಂತೆ ಕಳೆದು ಹೋದ ಆ ಮುಗ್ದ ಬಾಲ್ಯ!my god, ಹೇಗೆ ಸಾಗಿಬಂದೇವು ನಾವು?ಸಾಗಿದ ಪಯಣದ ಸುಂದರ ನೆನಪುಗಳಿಗೆ ಒಂದೊಂದು ಮೈಲುಗಲ್ಲು ಹಾಕದೆ ಅನ್ನಿಸುತ್ತದೆ.

         ಆಕೆಯ ಓರೆ ನೋಟದ ತೀಕ್ಷ್ಣತೆಯನ್ನು ಬಹುಶಃ ಜನ್ಮ ಜನ್ಮಾಂತರಗಳವರೆಗೆ ಮರೆಯಲು ಸಾಧ್ಯವಿಲ್ಲವೇನೋ?ಇವತ್ತಿಗೂ ರಿಂಗಣಿಸುವ ಅವಳ ಕಾಲುಗೆಜ್ಜೆಯ ನಾದ.ಹೊಸತಾಗಿ ಉಟ್ಟ ಸೀರೆಯಲ್ಲಿ ಅವಳ ದೇಹ ಎನ್ನುವುದೊಂದು ಮಲ್ಲಿಗೆಯ ಬಳ್ಳಿಯಾಗಿ ಅವಳು ಹೂವಿನಂತೆ ಲಕಲಕ ಹಿಳೆಯುತ್ತಾ ಅವಳ ಚೆಲುವು ಸೆಳೆಯುತ್ತಿತ್ತು.ಲಯವಾಗಿ ಓಲಾಡುವ ಅವಳ ಲೋಲುಕಗಳು,ಅವಳಿಗಾಗಿ ನಾವು ಕಾದಿರುತ್ತಿದ್ದೇವೋ ಅವಳೇ ನಮಗಾಗಿ ಹಾದು ಬರುತ್ತಿದ್ದಳೋ?ನೆಪಕ್ಕೆ ಹಾಲು ತರುವ, ಮೊಸರು ತರುವ, ನೀರು ತರುವ ಕೆಲಸಗಳು...ಆದರೆ ಗುಡಿ ಕಟ್ಟೆಯ ಮೇಲೆ ಹಸಿವು ಮರೆತು, ನೀರು ಮರೆತು, ಊಟ ಮರೆತು ಭೈರಾಗಿಯ ಹಾಗೆ ಪ್ರೇಮ ತಪ್ಪಿಸಿನಲ್ಲಿ ಮಗ್ನರಾದ ನಮ್ಮಲ್ಲಿ ನಮ್ಮ ಹೃದಯದಲ್ಲಿ ಮಾತ್ರ ವಿಲಕ್ಷಣವಾದ ಕಂಪನ,ವಿಲಕ್ಷಣವಾದ ನೋವು,ವಿಲಕ್ಷಣವಾದ ಸುಖ!ಕಾಯುವಿಕೆ ಮತ್ತು ವಿರಹದ ನೋವೇ ಜನ್ಮದ ಸಾರ್ಥಕ ಕ್ಷಣ ಎಂದುಕೊಳ್ಳುತ್ತಿದ್ದೇವು.

          ಇವತ್ತಿನ ದಿನಗಳಲ್ಲಿ ಪ್ರೀತಿ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ನಾಲ್ಕಾರು ಸಲ ಹುಟ್ಟಿ ನಾಲ್ಕಾರು ಸಲ ಸಾಯುತ್ತದೆ.ಪ್ರೀತಿಯ ದಿವ್ಯ ಸಾನಿಧ್ಯಕ್ಕೆ ಅರ್ಥವಿಲ್ಲವಾಗಿದೆ.ತೀರಾ ಹತ್ತಿರವಿದ್ದರೂ ಭಾವನೆಗಳನ್ನು ವಾಟ್ಸಪ್ ಮತ್ತು ಫೇಸ್‌ಬುಕ್‌‌ನಲ್ಲಿ ಹಂಚಿಕೊಳ್ಳುವುದಾಗಿದೆ.ಮೊಬೈಲೇ ಜೀವ ಜೀವಗಳ ಸಂಪರ್ಕ ಕೊಂಡಿಯಾಗಿದೆ.ಸಿಮ್ ಕಳೆದುಕೊಂಡ ತಕ್ಷಣ ಎಷ್ಟೋ ಸಂಬಂಧಗಳೂ ಸತ್ತು ಹೋಗುತ್ತಿವೆ.ಪ್ರೀತಿ ಮತ್ತು ಸ್ನೇಹ ವ್ಯವಹಾರಿಕವಾಗಿ ಇಲ್ಲಿ ನಿಶ್ಕಲ್ಮಶ ಎನ್ನುವುದು ಅರ್ಥಹೀನವಾಗಿದೆ.

          ಎಷ್ಟೊಂದು ಭಯಪಡುತ್ತಿದ್ದೇವು ನಾವಾಗ?ಹಿರಿಯರನ್ನು ತಲೆ ಎತ್ತಿ ನೋಡುತ್ತಿರಲಿಲ್ಲ ನಾವಾಗ!ಗುಡಿಯ ಗಂಟೆಯ ಸದ್ದು ಕೇಳಿದ ಕ್ಷಣ ಕೈಮುಗಿದು ನಿಂತುಬಿಡುತ್ತಿದ್ದೇವು.ಗುರುಗಳು ಎದುರಾದರೆ ದೀರ್ಘ ದಂಡ ನಮಸ್ಕಾರ!ಅಪ್ಪ ಅಮ್ಮನೆ ದೇವರು ಎಂದ ಗುರುಗಳ ಮಾತಿಗೆ ತಾಯಿ ತಂದೆಯರ ಪಾದ ನಮಸ್ಕಾರ ಮಾಡುತ್ತಿದ್ದೇವು.ಆಶಿರ್ವಾದ ಪಡೆಯುತ್ತಿದ್ದೇವು.ಹಿರಿಯರಿಂದ ನೀತಿ ಪಾಠಗಳನ್ನು ಕೇಳುತ್ತಿದ್ದೇವು.ಅಜ್ಜಿಯ ಕಥೆಗಳಲ್ಲಿ ಅಭೂತಪೂರ್ವ ವೈಭವದ ರಾಜನಿರುತ್ತಿದ್ದ.ಆತ ದಯಾಮಯನಾಗಿರುತ್ತಿದ್ದ.ಆತ ಶರಣಾಗತ ರಕ್ಷಕನಾಗಿರುತ್ತಿದ್ದ.ಸದ್ಯ ಶರಣಾಗತಿ ವಂಚನೆಯ ಒಂದು ತಂತ್ರವಾಗಿದೆ.

          ಅವಳಿಗೆ ಅಗೌರವ ಉಂಟಾಗದಿರಲೆಂದೇ ಎಷ್ಟೋ ಪ್ರೀತಿಗಳು ಸತ್ತು ಹೋಗಿವೆ.ನಮ್ಮಿಂದ ಅವಳಿಗೆ ಕಷ್ಟ ಒದಗದಿರಲಿ ಎಂದು ಪ್ರೇಮ ನಿವೇದನೆ ಮಾಡದೆ ಉಳಿದಿದ್ದೂ ಉಂಟು!ಅವಳ ನಗುವೆ ಕೊನೆಯ ನೆನಪಾಗಿ ಶಾಸ್ವತ ಕಾಡುವ ನೋವಾಗಿ ಸಿಹಿಯಾಗಿ ಇವತ್ತಿಗೂ ಉಳಿದಿದ್ದು ಒಂದು ಸೋಜಿಗವೆ!

          ವಯಸ್ಸು ನಲವತ್ತಾಗುತ್ತಿದೆ;ಪ್ರತಿಶತ ಐವತ್ತು ಭಾಗ ತಲೆ ಮೀಸೆ ಗಡ್ಡ ಬಿಳುಪಾಗಿದೆ.ಕಣ್ಣುಗಳು ಚುರುಕು ಕಳೆದುಕೊಂಡು ಕನ್ನಡಕ ಬಂದಿದೆ.ಅವಳೂ ನಾಲ್ಕು ಮಕ್ಕಳ ತಾಯಿ!ತುಸು ಬೇಗ ಮದುವೆದಾಕಿ ಈಗ ಅಜ್ಜಿ!ಎಲ್ಲೋ ಎದುರ್ಗೊಂಡಾಗ ಕಿರು ನಗುತ್ತಾ ತಮಾಷೆ ಮಾಡಲು ಪ್ರಯತ್ನಿಸುತ್ತೀರ:"ಛೀ ಹೋಗೋ ಮಾವ,ಮುದಿಯ ಆದ್ರೂನು ನಿಂಗೆ ನಾಚಿಕೆ ಇಲ್ಲ ಅಂತಾಳೆ!ನಾವು ಮುಸಿ ಮುಸಿ ನಗುತ್ತಾ:ಹುಣಸೆ ಗಿಡ ಮುಪ್ಪಾದರೆ ಹುಳಿ ಮುಪ್ಪೇನೆ ಹುಡುಗಿ!ಎನ್ನುತ್ತೇವೆ.ನಾವು ನಮ್ಮ ನಮ್ಮ ಜಂಜಡಗಳಲ್ಲಿ ಮುಳುಗಿ ಹೋಗುತ್ತೇವೆ.

          ಮಧುರ ಸೃತಿಗಳ ನೆನಪು ನಮ್ಮಲ್ಲಿ ಮತ್ತೆ ಉತ್ಸಾಹವನ್ನು ತರುತ್ತದೆ.ಯೌವ್ವನ ಆಕ್ಷಣಗಳ ನೆನಪು ನಮ್ಮನ್ನು ಯುವಕರಾಗುವಂತೆ ಪ್ರೇರೇಪಿಸುತ್ತದೆ.ಎಷ್ಟೋ ಜನ ವ್ಯಕ್ತಿತ್ವ ವಿಕಾಸದ ಶಿಬಿರ ನಡೆಸುವ ಉಪನ್ಯಾದಕರು ಕೂಡಾ ಹಳೆಯ ಸುಂದರ ಮಧುರ ಕ್ಷಣಗಳನ್ನು ನೆನಪಿಸಿಕೊಳ್ಳುವಂತೆ ಹೇಳುತ್ತಾರೆ.ನಿಜಕ್ಕೂ ಹಾಗೆ ಸಿಹಿ ಮತ್ತು ಕಳೆದ ಚೇತೋಹಾರಿ ಜೀವನ ನಮ್ಮಲ್ಲಿ ಉತ್ಸಾಹವನ್ನು ಹೆಚ್ಚು ಮಾಡುತ್ತದೆ.ಮನೋವೈದ್ಯರ ಅಭಿಪ್ರಾಯ ಕೂಡಾ ಅದುವೆ ಆಗಿದೆ.ಸಕಾರಾತ್ಮಕ ಚಿಂತನೆಯೂ ನಮ್ಮಲ್ಲಿ ಮೈಗೂಡಲು ಯಾವತ್ತಿಗೂ ಸುಂದರ ಕಲ್ಪನೆಗಳಲ್ಲಿ ತೇಲಾಡುತ್ತಿರಬೇಕು.

          ನೆನಪಿರಲಿ;ಚಿಂತೆ ಎಂದರೆ ಜೀವಂತ ದೇಹದ ಶವಕ್ಕೆ ಪೇರಿಸಲ್ಪಟ್ಟ ಚಿತೆ.ಚಿಂತೆಯಲ್ಲಿರುವ ವ್ಯಕ್ತಿ ವಯಸ್ಸಿರುವಂತೆ ವೃದ್ಧನಾಗಿ ಹೋಗುತ್ತಾನೆ.ದೇಹ ದಹಿಸಿ ಹೋಗುತ್ತದೆ.

          ಹೌದಲ್ಲವೆ?

                          #ಲಕ್ಷ್ಮೀಕಾಂತ_ನಾಯಕ

ಧಣಿಯ ಒಡಲ ಸಂಕಟವೂ ಈರನ ಕೂತೂಹಲವೂ...

ಧಣಿಯ ಒಡಲ ಸಂಕಟವೂ ಈರನ ಕೂತೂಹಲವೂ...

‘ಅಲೆಲೆ ಇವ್ನೌನ್’ ಅಂತ ಧಣಿ ಅನ್ನುವಷ್ಟರಲ್ಲಿ ಈರ ಬಾಟಲಿ ಸರಾಯಿಯನ್ನು ಮೊಲ ಉದ್ದದ ಗಿಲಾಸಿಗೆ ಸುರಿದು ‘ಹೀ ಹೀ’ಅಂತ ಹಲ್ಲು ಕಿಸಿದು ಕುಳಿತುಕೊಂಡಿದ್ದ.ಧಣಿ ಅತಿಯಾಗಿ ಕುಡುದು ಪರಮಾತ್ಮನ ಹತ್ ಹತ್ತಿರಕ್ಕೆ ಹೋಗಿ ಬಂದರೆ ಮಾತ್ರ ಆತನಿಗೆ ಲಾಭವಾಗುತ್ತಿತ್ತು;ಧಣಿಗೆ ಸರಾಯಿ ಸುರಿಯುವುದರಲ್ಲಿನ ಸುಖ ಅವನೊಬ್ಬನೆ ಬಲ್ಲ. ‘ಮೂರೊತ್ತು ಆ ಲ್ವಾಳೆನ ತಕಾ ಕುಂತು ರ‍್ತಿಯಲ್ಲಾ,ಹಿಂಗಾದ್ರ ಸಂಸಾರ ಹೆಂಗ್ ಮಾಡಬೇಕು ನಾನು’ಅಂತ ಮನೆಯಲ್ಲಿ ಹೆಂಡತಿ ಸ್ವಾಟಿಗೆ ತಿವಿದು ಹೇಳುವಾಗಲೂ ಅವನು ‘ಹೀ ಹೀ ಹೀ’ಅಂತ ಮುಸಿನೊಳಗೆ ನಕ್ಕು ಕೌದಿಯೊಳಗೆ ಜಾರಿಕೊಳ್ಳುತ್ತಿದ್ದ.ಧಣಿಗೆ ಸರಾಯಿ ಸುರಿಯುವುದರಲ್ಲಿ ದೊರೆಯುವ ಸುಖ ಲೋಕಕ್ಕೆ ಹೇಳಿದರೆಲ್ಲಿ ತಾನು ಸುಖ ವಂಚಿತನಾಗಿ ಬದುಕಬೇಕಾದೀತು ಎನ್ನುವ ದಿಗಿಲಿನಲ್ಲಿ ಆ ರಹಸ್ಯವನ್ನು ಪರಮ ಪುಣ್ಯವೆನ್ನುವಂತೆ ಕಾಪಾಡಿಕೊಂಡಿದ್ದ.ಮನೆಯೊಳಗೆ ಹೆಂಡಿರು ಮಕ್ಕಳು ಹಸಿದು ಕುಳಿತಿದ್ದಾರೆ ಒಂದ್‌ಹತ್ತು ರೂಪಯಿ ಕೊಡು ಗೌಡಾ ಎನ್ನುವ ಅವನ ಶತಮಾನದ ಬೇಡಿಕೆಯನ್ನು ಈಡೇರಿಸದ ಧಣಿ ಸರಾಯಿ ಸುರಿಯುವ ಕಾಯಕಕ್ಕೆ ಹೊಟ್ಟೆ ತುಂಬಾ ನೂರಾರು ರೂಪಾಯಿಯ ಸರಾಯಿ ಕುಡಿಸುತ್ತಿದ್ದ;ಎದೆ ತಿದಿಗಳು ತುಂಬಿ ಹೋಗುವಂತೆ ಬೀಡಿಯ ದಾನ ಮಾಡುತ್ತಿದ್ದ.ಈರನ ಮೂಲಭೂತ ಅಗತ್ಯಗಳನ್ನು ಪೂರೈಸುವವನಾದ ಧಣಿ ಈರನ ಪಾಲಿಗೆ ಕಾಮಧೇನು ಕಲ್ಪವೃಕ್ಷವಾಗಿದ್ದ.ಪರಮ ಪಾಮರಳಾದ ಹೆಂಡತಿಗೆ ಈ ರಹಸ್ಯವನ್ನು ಹೇಳಿ ತಾನು ಪರಮ ಸುಖದಿಂದ ಈ ಜನ್ಮದಲ್ಲಿ ವಂಚಿತನಾಗುವುದು ಉಂಟೆ?ಹಿಂಗಾಗಿ ಈರ ‘ಹೀ ಹೀ ಹೀ’ಎನ್ನುವ ಬಲು ಅಮೂಲ್ಯವಾದ ಉತ್ತರವನ್ನು ಕರಗತ ಮಾಡಿಕೊಂಡಿದ್ದ.
“ಅಲ್ಲೆಲೆ ನಿನ್ನೌನು,ನನ್ನ ಕುಡಿಸಿ ಕುಡಿಸಿ ಸಾಯಹೊಡೆಯಬೇಕು ಅಂದುಕೊಂಡಿಯೇನು?”ಅಂತ ಧಣಿ ಅಂದರೆ “ಯಪ್ಪಾ,ನೀ ಸತ್ತ ಮೇಲೆ ನಾನಿರ್ತೀನೇನು?”ಎನ್ನುವ ಜಾಣ್ಮೆಯ ಉತ್ತರವನು ಅವನು ನೀಡುವನು.
ಇನ್ನೂ ಸೂರ್ಯ ಮುಳಗಲಿಕ್ಕೆ ಹೆಚ್ಚೆಂದರೆ ಒಂದು ತಾಸಿತ್ತೇನೋ,ದಿನವಿಡೀ ಬೆಳಗಿದ ಶಿಶಿರದ ಸೂರ್ಯ ಪಶ್ಚಿಮದಲ್ಲಿ ಇಳಿಮುಖವಾಗಿ ಕೆಂಪಾನ್ನ ಕೆಂಪಗಾಗಿದ್ದ.ಹಕ್ಕಿಗಳು ಮರಗಳಿಗೆ ಹಿಂತಿರುಗಿ ತಮ್ಮ ತಾವನ್ನು ಹುಡುಕಿಕೊಳ್ಳುತ್ತಿರುವಂತೆ ಮೇಯಲಿಕ್ಕೋದ ದನಕರುಗಳು ತಮ್ಮ ತಮ್ಮ ಮನೆಗಳಿಗೆ ಹಿಂದುರುಗುತ್ತಿದ್ದವು’ಕೆಂಪು ಸೂರ್ಯ ತನ್ನ ಪ್ರಖರತೆಯನ್ನು ಕಳೆದುಕೊಂಡ ಪರಿಣಾಮ ಅಗೋಚರ ದಿಕ್ಕುಗಳಿಂದ ಮಬ್ಬು ನಿಧಾನವಾಗಿ ಇಳಿಯತೊಡಗಿತ್ತು.ಮಳೆ ಕಾಣದೆ,ಬೆಳೆ ಕಾಣದೆ ಹಳ್ಳಿಯ ಕೃಷಿ ಕಾರ್ಮಿಕರೆಲ್ಲಾ ಕಂಗಾಲಾಗಿ ದೇಶಾಂತರ ಹೊರಟು ಹೋಗಿ ಹಳ್ಳಿಗಳು ಬಿಕೋ ಎನ್ನುತ್ತಿರುವ ಈ ಸಂದರ್ಭದಲ್ಲಿ ‘ಬಿರುಗಾಳಿಗೆ ಮೋಟು ಮರವೆ ಮಿಂಡ’ ಎನ್ನುವಂತೆ ಊರಿನಲ್ಲಿ ಧಣಿಯಂಥವರು,ಈರನಂಥವರು ಮಾತ್ರವೇ ಉಳಿದಿದ್ದರು.
ಧಣಿ ಈರ ಮೊಳ ಉದ್ದದ ಗಿಲಾಸಿಗೆ ಸುರಿದ ಹಳದಿ ಬಣ್ಣದ ಅಗ್ಗದ ದ್ರವವನ್ನು ಶತಮಾನಗಳ ದಾಹ ತೀರಿಸಿಕೊಳ್ಳುವವನಂತೆ,ಓಲಂಪಿಕ್ಸ್ ಪಂದ್ಯಾಳಿಗೆ ಸಿದ್ದನಾಗುವ ಕ್ರೀಡಾಪಟುವಿನಂತೆ ವಿಶ್ರಾಮ ಕೊಡದೆ ಒಂದೇ ಗುಟಿಕೆಗೆ ಕುಡಿಯುವುದನ್ನು ನೋಡಿ,ಹಳೆಯ ಎಂದಿನಂತಿನ ಹೊಗಳಿಕೆ ಪದವನು ಬಳಸಿ “ಭಲೇ ಭಲೇ!!ನನ್ನಪ್ಪಾ!ಸುತ್ತೇಳು ಲೋಕದಲಿ ನಿನ್ನಂಥಹ ಶೂರಧೀರರಿಲ್ಲ!”ಎಂದನು.ಈ ಮಾತಿಗೆ ಧಣಿಯ ಕುಂಡಿಯೇನು ಉಬ್ಬುವುದಿಲ್ಲ;ಆದರೂ ಆಂತಂರ್ಯರದಲ್ಲಿ ಹೇಳಲರಿಯದ ಸುಖವನು ಧಣಿ ಅನುಭವಿಸುವನು.
ಧಣಿ ಇವತ್ತು ಮುಂಜಾನೆಯಿಂದಲೇ ತೀರ್ಥ ಸಮಾರಾಧನೆ ಪ್ರಾರಂಭಿಸಿದ್ದನು;ಹೆಚ್ಚು ಕಡಿಮೆ ಇದು ಆತನ ದಿನಂಪ್ರತಿಯ ಕಾಯಕವೇ ಆಗಿತ್ತು.ಆಗೊಮ್ಮೆ ಹೀಗೊಮ್ಮೆ ಹಬ್ಬ ಹರಿದಿನಗಳಲ್ಲಿ ಈ ಕಾಯಕಕ್ಕೆ ಮನೆಯ ಹೆಂಡಿರು ಮಕ್ಕಳು ಅಡ್ಡಿಪಡಿಸುವುದಂತೂ ಇತ್ತು.ಹೆಂಡಿರು ಮಕ್ಕಳ ಮಾತು ಕೇಳಿಕ್ಕೇನು ಆತ ಹೇಡಿಯೇ?ಮನೆಗೆ ಬಂದ ನೆಂಟರಿಗೆ ಧಣಿ ಹೆದರುವುದುಂಟು;ಅದೊಂದು ಈ ಲೋಕದ ವಿಶ್ಮಯ.ಕುಡಿಯುತ್ತಾ ಕುಡಿಯುತ್ತಾ ಪಿತ್ರಾರ್ಜಿತ ಆಸ್ತಿಯ ಕೆಲವೊಂದು ಹೊಲಗಳನ್ನು ಆತ ಕರಗಿದ್ದನು.ಅದೊಂದು ಮಹಾ ಸಾಧನೆಯಾಗಿ ಧಣಿ ಎಂಬ ಬಿರುದು ಧರಿಸಿದ್ದನು.ಕುಡಿಯದಿದ್ದರೆಲ್ಲಿ ತಾನು ಧಣಿಯ ಪಟ್ಟವನ್ನು ಕಳೆದುಕೊಂಡೇನು ಮತ್ತು ಸಣ್ಣ ವಯಸ್ಸಿನ ಹೆಂಡತಿಯ ಬಾಯಿಯಿಂದ ಬರುವ ಬ್ರಹ್ಮಾಸ್ತ್ರಗಳಿಗೆ ಬಲಿಯಾದೇನು ಎನ್ನುವ ಆತಂಕವನ್ನು ಆತ ಒಳಗೊಳಗೆ ಅನುಭವಿಸುತ್ತಿದ್ದದ್ದನ್ನು ಇವತ್ತಿನವರೆಗೂ ಈರನಿಗೂ ಹೇಳಿರಲಿಲ್ಲ.ಈರ ಪ್ರತಿದಿನವೂ ಧಣಿಯ ಕುಡಿತದ ಹಿಂದಿರುವ ರಹಸ್ಯವನ್ನು ಕಂಡುಹಿಡಿಯುವ ಹಿನ್ನೆಲೆಯಲ್ಲಿ ಪ್ರಶ್ನೆಗಳನ್ನು ಹಾಕುತ್ತಲೇ ಇದ್ದ.ಆ ರಹಸ್ಯ ಇನ್ನೇನು ಹೊರ ಬಂತು ಎನ್ನುವಷ್ಟರಲ್ಲಿ ಧಣಿ ಪರಮಾತ್ಮನ ಹತ್ತಿರಕ್ಕೆ ಹೋಗಿ ಗೊರಕೆಯ ಢಮರುಗ ನಾದ ಪ್ರಾರಂಭಿಸಿ ಬಿಡುತ್ತಿದ್ದ.ಸುಮಾರು ವರ್ಷಗಳಿಂದ ಈರ ನಿರಾಶೆಯನ್ನು ಅನುಭವಿಸುತ್ತಾ ಮನೆಯ ಕಡೆಗೆ ತೆರಳುತ್ತಿದ್ದ.ಇವತ್ತೂ ಈರ-
“ಅಲ್ಲೆಪ್ಪಾ,ನೀ ಹಿಂಗ್ಯಾಕ ಕುಡಿತಿದಿ,ಬಂಗಾರದಂತ ಹೆಂಡ್ತಿ ಆಳ;ಬಂಗಾರದಂತಹ ಮಕ್ಕಳಾರ,ಬಂಗಾರದಂತಹ ಸಂಸಾರ ಆದ,ಬಂಗಾರದಂತಹ ಆಸ್ತಿ ಆದ,ನೀವು ಯಾವ ದುಃಖ ಮರಿಲಿಕ್ಕೆ ಕುಡಿಬೇಕೆಪ್ಪೊ ಧಣಿ?” ಅಂತ ರಾಗವಾಗಿ ಕೇಳಿದನು,ಧಣಿಗಿನ್ನೂ ಅರಿವಿತ್ತು;ದಿನಂಪ್ರತಿಯ ಅಳತೆಯ ಕ್ರಮಸಂಖ್ಯೆಯಲ್ಲಿ ಧಣಿ ಕುಡಿದಿರಲಿಲ್ಲವಾದ್ದರಿಂದ-“ನಿಮ್ಮೌವ್ನ,ಅದ್ನೆಲ್ಲಾ ನೀನು ಕೇಳಬಾರದು,ನಾನು ಹೇಳಬಾರದು!ಸುಮ್ನೆ ಮುಚ್ಕೊಂಡು ಕುಡಿ!”ಎಂದು ಗದರಿದನು.
ಸೂರ್ಯ ತಾಯ ಗರ್ಭ ಸೇರಿದಂತೆ ಕತ್ತಲು ತನ್ನ ಪ್ರಾಬಲ್ಯ ತೋರಿಸುತ್ತಿರುವಂತೆ,ರೈತನ ಕಡು ಮೂರ್ಖತನ ಮತ್ತು ದುರಾಸೆಯ ಪ್ರತಿಕೂಲಕ್ಕೆ ಭೂ ತಾಯಿ ಭತ್ತದ ಗದ್ದೆಯಾಗಿ ಬದಲಾದ ಪರಿಣಾಮ ಕಲಿಯುಗದ ರಕ್ತಬೀಜಾಸುರನ ಸಂತತಿಯಂಥಹ ಸೊಳ್ಳೆಗಳ ಹಿಂಡು ಝೀಗುಟ್ಟುವ ನಿನಾದದಲಿ ಧಾವಿಸಿ ಬರುತ್ತಿರುವಂತೆ ಧಣಿಯ ಮನೆ ಆಳು ಫೀರ(ಸ್ವಜಾತಿಯವನು) “ಕಾಕ,ಇನ್ನು ಎಷ್ಟೊತ್ತಪಾ?ನಡಿ ಮನಿಗೆ”ಎಂದು ಕಂಕುಳಳೊಗೆ ಕೈ ಹಾಕಿ ಮೆಲಕ್ಕೆಬ್ಬಿಸುತ್ತಿರುವಂತೆ ಈ ಕಥೆಯ ಒಂದನೆ ಅಂಕ ಮುಕ್ತಾಯವಾಯಿತು.

“ಶತಮಾನಗಳ ಹಿಂದೆ ಅಣ್ಣ ಬಸವಣ್ಣ ಕ್ರಾಂತಿ ಮಾಡದಿದ್ದರೆ ಇವತ್ತು ಲಿಂಗಾಯತರು ಎಲ್ಲಿರುತ್ತಿದ್ದರು?ಜಾತಿ ವ್ಯವಸ್ಥೆಯ ವಿರುದ್ಧ ಅವನು ಸಿಡಿದೆದ್ದು ಇಡೀ ಸಮಾವನ್ನು ಸಮ ಸಮಾಜ ಮಾಡಬೇಕು ಎಂದು ಯೋಚಿಸಿದಾಗಲೇ ಲಿಂಗಾಯತರು ಹುಟ್ಟಿಕೊಂಡಿದ್ದು!ಲಿಂಗ ಧರಿಸಿದವರು ಮಾತ್ರ ಪರಿಶುದ್ಧರು;ಲಿಂಗವಿಲ್ಲದವರು ಅಶುದ್ಧರು,ಅಸ್ತೃಶ್ಯರು ಎನ್ನುವ ಪರಿಕಲ್ಪನೆ ಇರುವ ಆ ಕಾಲದಲ್ಲಿ ಎಲ್ಲಾ ಜಾತಿಯವರನ್ನು ಶೂದ್ರರನ್ನು ಕರೆ ಕರೆದು ಅಣ್ಣ ಲಿಂಗ ಧಾರಣೆ ಮಾಡಿದರು;ಕಮ್ಮಾರನು ಲಿಂಗಾಯತನಾದ,ಚಮ್ಮಾರನು ಲಿಂಗಾಯತನಾದ!ಸಮಾಜದ ಎಲ್ಲಾ ಕೀಳು ವರ್ಗಗಳು ಲಿಂಗ ಧಾರಣೆ ಮಾಡಿಕೊಂಡು ಲಿಂಗಾಯತರಾದರು.ಆದರೆ ದುರದೃಷ್ಟವೇನೆಂದರೆ ಇಂದಿನ ಲಿಂಗಾಯತರು ಅಸ್ಪೃಶ್ಯತೆಯನ್ನು ಆಚರಿಸುತ್ತಾ ಬಸವತತ್ವಕ್ಕೆ ದ್ರೋಹ ಬಗೆಯುತ್ತಿದ್ದಾರೆ,ಇದು ಸರಿಯಲ್ಲ!ನಾವಿದನ್ನು ತೀವ್ರವಾಗಿ ಖಂಡಿಸಬೇಕು.ಇಲ್ಯಾರೂ ಮೇಲಲ್ಲ;ಇಲ್ಯಾರೂ ಕೀಳಲ್ಲ!”ಎಂದು ಬಸವರುದ್ರ ಮಾಹಾಜ್ಞಾನಿಗಳು ಮಾತನಾಡಿ ಮಾತು ಮುಗಿಸಿದಾಗ ಅಲ್ಲಿ ಸೇರಿದಂತಹ ಕೆಳ ವರ್ಗದ ಅಸ್ಪೃಶ್ಯ ಜನ ವೇದಿಕೆ ನಡುಗಿ ಕುಸಿದು ಬೀಳುವಂತೆ ಕರಾಡತನ ಮಾಡಿದರು.ಇಷ್ಟು ಮಾತಾಡುವಷ್ಟರಲ್ಲಿ ಅವರ ಮೂತ್ರಕೋಶ ತುಂಬಿಕೊಂಡಿದ್ದು ಧೋತರದಲ್ಲಿಯೇ ಹೋಗುವ ಸ್ಥಿತಿಗೆ ಬಂದಿತ್ತು.ನೆರೆದಂತಹ ಜನಗಳು ಭೇಶ್ ಭೇಶ್ ಎನ್ನುತ್ತಿರುವಂತೆ ಅವರು ಅವಸರದಿ ವೇದಿಕೆ ಬಿಟ್ಟಿಳಿದು ಓಡಿ ಹೋದರು.ವೇದಿಕೆಯ ಮೇಲಿರುವ ಗಣ್ಯರಿಗೆ ಜ್ಞಾನಿಗಳ ಅವಸರದ ಮರ್ಮ ಅರ್ಥವಾಯಿತು.ಅನೇಕ ವೇದಿಕೆಗಳಲ್ಲಿ ಅವರು ಜ್ಞಾನಿಗಳ ಅವಸರವನ್ನು ಅರ್ಥ ಮಾಡಿಕೊಂಡಿದ್ದರು.ಜ್ಞಾನಿಗಳನ್ನು ಅರ‍್ಯಾವ ಪ್ರಶ್ನೆಯನ್ನೂ ಕೇಳಲಿಲ್ಲ.ಇದಾದ ಮೇಲೆ ಮಹಿಳಾ ಭಾಷಣಕಾರರೊಬ್ಬರಿಗೆ ಮಾತಾಡುವ ಅವಕಾಶ ಲಭ್ಯವಾಯಿತು(ವೇದಿಕೆಗಳನ್ನು ಹುಟ್ಟು ಹಾಕುವುದೇ ಆ ಯಮ್ಮ).ಆಕೆ ಮಾತನ್ನಾಡುತ್ತಾ-
“ಎಲ್ಲಿ ಹೆಣ್ಣಿಗೆ ಈ ಸಮಾಜ ಮುಕ್ತ ಸ್ವಾತಂತ್ರ್ಯವನ್ನು ಕೊಡುವುದಿಲ್ಲವೋ ಅಲ್ಲಿಯವರೆಗೆ ಈ ಸಮಾಜ ಏಳಿಗೆಯನ್ನು ಕಾಣುವುದಿಲ್ಲ.ಪುರುಷರು ಹೆಣ್ಣಿಗೆ ಸ್ವಾತಂತ್ರ್ಯ ನೀಡುವವರೆಗೆ ನಾವ್ಯಾಕೆ ಕಾಯಬೇಕು?ಇವತ್ತಿನ ಮಹಿಳೆ ಬುದ್ದಿವಂತಳಿದ್ದಾಳೆ;ಆಕೆ ಟಿವಿ ನೋಡುತ್ತಾ ಎಲ್ಲವನ್ನೂ ಕಲೆತುಕೊಂಡಿದ್ದಾಳೆ.ಈ ಬುದ್ದಿವಂತ ಮಹಿಳೆ ಗಂಡಸಿನ ದಾಸ್ಯದಿಂದ ಹೊರಬರಬೇಕು;ಸಂಪ್ರದಾಯದ ಬೇಲಿಯನ್ನು ಆಕೆ ಹಾರಬೇಕು;ಪಾತಿವ್ರತ್ಯ ಎನ್ನುವ ಸಂಕೋಲೆಯಿಂದ ಆಕೆ ಮುಕ್ತಳಾಗಬೇಕು;ಗಂಡು ಹಲವಾರು ಮಹಿಳೆಯರನ್ನು ಹೊಂದಬಹದುದಾರೆ ಹೆಣ್ಣೇಕೆ ಹೊಂದಬಾರದು?”ಎನ್ನುವ ಪ್ರಶ್ನೆಯೊಂದಿಗೆ ಆಕೆ ಮಾತು ಮುಗಿಸಿದಳು.ಅತ್ತ ಅವಸರಕ್ಕೆ ಹೊರಟು ಹೋಗಿದ್ದ ಜ್ಞಾನಿಗಳ ಅವಸರವೂ ಮುಗಿದಿತ್ತು.ಎಲ್ಲರೂ ಪರಸ್ಪರ ತಾವು ಮಾತಾಡಿರುವದರ ವಿಚಾರದ ಘನತೆಯ ಕುರಿತು ಭಲೆ ಭಲೆ ಎನ್ನುತ್ತಾ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಾ ಕಾರ್ಯಕ್ರಮವನ್ನು ಮುಗಿಸಿದರು.ಬಂದಂಥಹ ಮಂದಿ ನಾನಾ ಮಾತಾಡುತ್ತಾ ತಮ್ಮ ಮನೆಯ ಕಡೆಗೆ ಸಾಗುವುದರ ಮೂಲಕ ಈ ಕಥೆಯ ಎರಡನೇಯ ಅಂಕವೂ ಸಮಾಪ್ತಿಯಾಗುವುದು.

“ಅಂದಿಗೂ ಇಂದಿಗೂ ಹೋಲಿಸಲಾಗಿ ಇವತ್ತಿನ ಕಾಲ ತುಂಬಾ ಅದ್ಬುತವಾದದ್ದು ಜ್ಞಾನಿಗಳೆ,ಅಂದಿನ ಮಹಿಳೆಗೆ ಸ್ವಾತಂತ್ರ್ಯ ಎನ್ನುವುದೇ ಇರಲಿಲ್ಲ.ಈ ಮದುವೆಯ ವಿಷಯಕ್ಕೆ ಬಂದರೆ ಹೆಣ್ಣು ಅಪ್ಪ ನಿರ್ಧರಿಸಿದ ವರನನ್ನು ಕಣ್ಣು ಎತ್ತಿ ನೋಡುವುದೆ ತಪ್ಪಾಗುತ್ತಿತ್ತು.ಒಂದು ಮಕ್ಳು ಎರಡು ಮಕ್ಳು ಆಗುವವರೆಗೆ ಅಂದಿನ ಮಹಿಳೆ ಗಂಡನ ಮುಖವನ್ನೇ ನೋಡಿರುತ್ತಿರಲಿಲ್ಲ!ಗಂಡನ ಆಯ್ಕೆ ವಿಷಯ ಬಂದಾಗ ಹೆಣ್ಣು ಕನಿಷ್ಠ ತನಗೆ ಗಂಡನಾಗುವವನು ಹೇಗಿದ್ದಾನೆ ಎಂದು ತಿಳಿದುಕೊಳ್ಳುವುದೂ ಸಾಧ್ಯವಾಗುತ್ತಿರಲಿಲ್ಲ.ಹನ್ನೆರಡು ವರ್ಷದ ಎಳೆಮಗು ನಾನು ಮದುವೆಯಾದಾಗ!ಅಂಗಳದಲ್ಲಿ ಕುಂಟೆಬಿಲ್ಲೆ ಆಡುತ್ತಿರುವ ಮಗುವಿಗೆ ನಾಳೆ ನಿನಗೆ ಮದುವೆ ಎಂದು ಹೇಳಿದರೆ ಹೇಗಿರುತ್ತದೆ ನೀವೆ ಊಹಿಸಿ ಜ್ಞಾನಿಗಳೆ?ಜೀವ ಝಲ್ ಎಂದು ಹೋಗಿತ್ತು.ಮದುವೆ ಯಾರೊಂದಿಗೆ,ಆತ ಹೇಗಿದ್ದಾನೆ ಎನ್ನುವುದು ನನಗೂ ಸೇರಿದಂತೆ ಮನೆಯಲ್ಲಿ ಯಾರಿಗೂ ಗೊತ್ತಿರಲಿಲ್ಲ.ಅದು ಅಪ್ಪನ ಆಯ್ಕೆ;ಅಪ್ಪನ ಆಯ್ಕೆಗೆ ದುಸರಾ ಮಾತು ಆಡುವಂತಿರಲಿಲ್ಲ.ಕೊನೆಗೆ ನಾನು ಮದುವೆಯಾದದ್ದು ನನಗಿಂತಲೂ ಇಪ್ಪತ್ತು ವರ್ಷ ದೊಡ್ಡವನಿರುವ ಕುಡುಕನನ್ನು!ಅಂಗಳದಲ್ಲಿ ಆಡುತ್ತಿರುವ ಮಗುವಿಗೆ ಲೈಂಗಿಕ ಜ್ಞಾನದ ಅರಿವು, ಸಂಸಾರ ನಿರ್ವಹಣೆಯ ಯಾವ ತಿಳುವಳಿಕೆಯೂ ಇರಲಿಲ್ಲ.ಕುತ್ತಿಗೆಗೆ ಹಗ್ಗ ಬಿಗಿದ ವಾತಾವರಣ!ದೊಡ್ಡ ಸಂಸಾರ,ಗಢವನಂತಹ ಗಂಡ,ರಾತ್ರಿ ಹಿಂಸ್ರ ಪಶುವಿನಂತೆ ಬಳಸಿಕೊಳ್ಳುವ ಗಂಡ,ಹೆಣ್ಣಿನ ಮೃದು ಮನಸ್ಸಿನ ಯಾವೊಂದೂ ಭಾವವೂ ಅರಿಯದ ಆ ವಾತಾವರಣದಲ್ಲಿ ನಾನು ಬದುಕಿದ್ದೊಂದು ದೊಡ್ಡ ಸಾಧನೆ.ಅಳು ಕೇಳುವವರಿಲ್ಲ-ನಗು ಕೇಳುವವರಿಲ್ಲ.”ಎಂದು ಆಕೆ ತನ್ನ ಮನದ ಅಳಲನ್ನು ತೋಡಿಕೊಂಡಳು.ಬಸ್ಸು ನಿಧಾನವಾಗಿ ಸಾಗುತ್ತಿತ್ತು.ಹಳ್ಳಿಯ ಆ ಕೆಟ್ಟ ರಸ್ತೆಯಲ್ಲಿ ಬಸ್ಸು ಸಾಗುವ ವೇಗಕ್ಕಿಂತ ಕಾಲು ನಡಿಗೆಯ ವೇಗವೇ ಬಸ್ಸಿಗಿಂತ ಸ್ಪೀಡು ಎನ್ನುವಂತಿತ್ತು.ದಿನಂಪ್ರತಿ ವೇದಿಗಳಿಗೆ ಹೋಗುವುದು,ತಲಾ ಒಂದಿಷ್ಟು ಮಾತುಗಳನ್ನಾಡುವುದು,ಆ ಮೂಲಕ ಸಮಾಜವನ್ನು ಜನರನ್ನು ಉದ್ದರಿಸಿದ ಭಾವವನ್ನು ತಾವು ತಾವೇ ಊಹಿಸಿಕೊಂಡು ಭೇಷ್ ಎಂದುಕೊಳ್ಳುವುದು ಬಲು ಸಂತೊಷದ ವಿಷಯವಾಗಿತ್ತು.
“ಹೌದೆಮ್ಮಾ,ಹೌದು!ಕಷ್ಟದೊಳಗೆ ಈಸಿರುವುದರಿಂದಲೇ ನಿಮಗಿಂಥಹ ಧೈರ್ಯ,ಜಾಣ್ಮೆ ಬಂದಿದೆ.ನಿಮ್ಮಷ್ಟು ಜೀವನ ಅನುಭವ ಯಾರಿಗೂ ಇಲ್ಲ.ನೀವು ಈ ಶತಮಾನದ ಆದರ್ಶ ನಾರಿ.ನಿಮ್ಮ ಮಾತು,ನಿಮ್ಮ ಆ ಅನುಭವದ ಮಾತುಗಳು ಅಮೃತಕ್ಕೆ ಸಮಾನ.ನೀವು ಅಪರೂಪದ ವ್ಯಕ್ತಿತ್ವ ಇರುವ ಗಟ್ಟಿ ಹೆಣ್ಣು ಮಗಳು”ಎಂದು ಜ್ಞಾನಿಗಳು ಹೇಳುವ ಹೊತ್ತಿಗೆ ಬಸ್ಸು ಊರು ತಲುಪಿತ್ತು.

ಕಾಟಿಗರ ಡೇಗ ಹೆಂಡಿ ಕಸ ಬಳಿದು ದನದ ಕೊಟ್ಟಿಗೆಯನ್ನು ಸ್ವಚ್ಛ ಕನ್ನಡಿಯಂತೆ ಪಳಪಳ ಮಾಡುವ ಹೊತ್ತಿಗೆ ಅಮ್ಮನವರ ಮನೆಯಲ್ಲಿ ಉಪ್ಪಿಟ್ಟಿನ ವಾಸನೆ ಬರತೊಡಗಿತ್ತು.ದನದ ಕೊಟ್ಟಿಗೆಯ ಹೊರತು ಮನೆಯ ಯಾವೊಂದೂ ಕೋಣೆಗಳನ್ನು ನೋಡದ ಅವನಿಗೆ ಪಡಸಾಲೆಯ ಗೋಡೆ,ಮತ್ತದಕ್ಕೆ ತೂಗು ಹಾಕಿದ ಜಗಜ್ಯೋತಿ ಬಸವೇಶ್ವರರ ಫೋಟೋ ಮಾತ್ರವೆ ಕಾಣಿಸುತ್ತಿತ್ತು.ದನದ ಕೊಟ್ಟಿಗೆಯಲ್ಲಿ ನಿಂತೇ ಅಮ್ಮ ಕೆಲಸ ಮುಗಿತು ನೋಡ್ರಿ ಎಂದು ಇವನು ದಿನಂಪ್ರತಿ ಅನ್ನುವನು;ಅಮ್ಮನವರ ಮನೆಯ ಇತರೆ ಸದಸ್ಯರು,ಸ್ವಜಾತಿ ಆಳುಗಳು ಪಡಸಾಲೆಯ ಮೇಲಿನಿಂದ ತಗ್ಗಿನಲ್ಲಿರುವ ಕೊಟ್ಟಿಗೆಯೊಳಗೆ ನಿಂತಿರುವ ಡೇಗನಿಗೆ ಅವರು ಒಂದಿಷ್ಟು ತಂಗಳು ಹಾಕುವರು.ಆದರೆ ಡೇಗನಿಗೆ ಬಲು ವಿಚಿತ್ರ ಎನ್ನಿಸುತ್ತಿದ್ದದ್ದು ತನ್ನದೇ ಜಾತಿಯ ಪ್ಯಾಂಟು ಧರಿಸಿದ ಜನ ಬಂದಾಗ ಅಮ್ಮನವರು ಮನೆಯೊಳಕ್ಕೆ ಕರೆದುಕೊಳ್ಳುವುದು,ತನ್ನದು ಜಾತಿ ವಿರುದ್ಧದ,ಅಸ್ಪೃಶ್ಯತೆಯ ವಿರುದ್ಧದ ಹೋರಾಟ ಎನ್ನುವುದನ್ನು ಕೇಳಿದಾಗ!
ಅಮ್ಮ ದಿನಂಪ್ರತಿ ತಾಸಿಗೂ ಹೆಚ್ಚು ಪೂಜೆ ಮಾಡುತ್ತಿರುವುದನ್ನು ಡೇಗ ಘಂಟೆಯ ಸದ್ದಿನ ಮೂಲಕ ಕಾಣುವನು,ತಿಂಗಳಲ್ಲಿ ಒಂದೆರುಡು ಬಾರಿ ಶ್ರೀಶೈಲ ಮಲ್ಲಿಕಾರ್ಜುನ,ತಿರುಪತಿಯ ಎಂಕಟರಮಣ ಯಾತ್ರೆಗಳನ್ನು ಹೊರಡುವಳು.ಆಗ ಮನೆ ಬಿಕೋ ಎನ್ನುವುದು.ತಾನು ದನದ ಕೊಟ್ಟಿಗೆಯನ್ನು ಬಳೆದು ಸ್ವಚ್ಛ ಮಾಡಿ ಮನೆಗೆ ಹೋಗುವನು.
ಅಮ್ಮ ತುಂಬಾ ಸಲ ಹೇಳುತ್ತಿದ್ದರು:ಮನೆ ಸ್ವಚ್ಛವಾಗಿರದಿದ್ದರೆ ನಡೆಯುತ್ತದೆ,ಕೊಟ್ಟಿಗೆ ಸ್ವಚ್ಛವಾಗಿರಬೇಕು;ಅದು ಮುಖ್ಯವಾದದ್ದು! ಎಂದು ಅವರು ಅನ್ನುತ್ತಿದ್ದರು.ತಮ್ಮ ಮನೆಗಳೆ ಸ್ವಚ್ಛವಾಗಿರದ ಹೊತ್ತಲ್ಲಿ ದನದ ಕೊಟ್ಟಿಗೆಗಳು ಸ್ವಚ್ಛವಾಗಿರಬೇಕು ಎನ್ನುವ ಅಮ್ಮನವರ ಮಾತು ಅವನಿಗೆ ಸೋಜಿಗವನು ಉಂಟು ಮಾಡುತ್ತಿತ್ತು!
ಆ ಸೋಜಿಗ ನಿವಾರಣೆಯಾದದ್ದು ಮುಂದೊಂದು ದಿನ,ಮಟಮಟ ಮಧ್ಯಾಹ್ನದಲಿ.
ಅವತ್ತು ಹೊಲಕ್ಕೆ ನೀರು ಬಿಡುವ ಕೆಲಸ ಬೇಗ ಮುಗಿದಿತ್ತು.ಧಣಿಗಳು ಹೊಲದ ಬದುವಿಗಿರುವ ಬೇವಿನ ಮರದ ಕೆಳಗೆ ಪಟ್ಟಾಂಗ ಹೂಡಿದ್ದರು.ಅವರ ಮುಂದೆ ಈರ ಇದ್ದ.ಈರ ಇದ್ದನೆಂದರೆ ಅವರ ಸಮಾರಾಧನೆ ನಡೆದಿರುತ್ತದೆಂದೇ ಅರ್ಥ!ಹಾಗೆ ನಡೆದಿತ್ತೂ ಕೂಡಾ!ಡೇಗ ನೀರು ಬಿಡುವುದು ಮುಗಿಯಿತು ಧಣಿ ಎಂದಾಗ ಧಣಿ ಅಮಲಿನಲ್ಲಿಯೇ ಮನೆಗೆ ಹೋಗು ಎಂದಿದ್ದರು.ಡೇಗ ಮನೆಯ ಕಡೆಗೆ ಹೊರಟಿದ್ದ.
ಶಿಶಿರದ ಬಿಸಿಲಿನ ಬಗ್ಗೆ ಹೇಳುವುದೇನಿದೆ?ಸೂರ್ಯ ನಡು ನೆತ್ತಿಯ ಮೇಲೆ ನಿಂತು ಬೆಂಕಿ ಕಾರುತ್ತಿದ್ದ.ಉಗಾದಿಯ ಆರಂಭದ ದಿನಗಳಲ್ಲಿ ಎಲ್ಲಾ ವರ್ಗದ ಜನಗಳೂ ವಿಶ್ರಮಿಸಬೇಕಿರುವ ಕಾಲವದು.ಉಗಾದಿಗೆ ಆಡಲಿರುವ ಬಯಲಾಟದಲ್ಲಿ ತಾನೊಂದು ಪಾತ್ರ ಮಾಡಲಿರುವ ಡೇಗ ಮಾಸ್ತರರು ಹೇಳಿಕೊಟ್ಟ ಡೈಲಾಗನ್ನು ತಾರಕ ಸ್ವರದಲ್ಲಿ ಪ್ರಾಕ್ಟಿಸು ಮಾಡುತ್ತಾ ಮನೆಯ ಕಡೆಗೆ ಹೊರಟ;ಬಲೆಲೇ ಸಾರಥಿ,ನಾನುದಾರೆಂದರೆ,ಅಥಳ ಸುಥಳ ಪಾತಾಳಗಳ ಏಳು ಲೋಕದ ಒಡೆಯನಾದ ನಾನು....
ಊರು ಹತ್ತಿರ ಬರುವಂತೆ ಮಾತು ನಿಲ್ಲಿಸಿದ;ಮೌನದ ಹೆಜ್ಜೆಗಳನು ಧಣಿಯ ಮನೆಯ ಕಡೆಗೆ ಹಾಕುತ್ತಿರುವಂತೆ ದನದ ಕೊಟ್ಟಿಗೆಯಲಿ ಗುಸುಗುಸು ಪಿಸುಪಿಸು ಮಾತುಗಳು ಕೇಳಿದವು;ಕೂತೂಹಲಗೊಂಡು ಇಣಿಕಿ ನೋಡಲಾಗಿ...
*****

ಧಣಿ ಚಿತ್ತಾಗುವಂತೆ ಅವತ್ತಿನ ಕೋಟಾ ಮುಗಿಸಿದ್ದರು;ಯಾಕೋ ಪರಮಾತ್ಮ ದರ್ಶನವಾಗಲಿಲ್ಲ.ಬ್ರಹ್ಮ ರಹಸ್ಯಕ್ಕಾಗಿ ಹಾತೊರೆಯುತ್ತಿದ್ದ ಈರ ಎಂದಿನಂತೆ ಅದೇ ಪ್ರಶ್ನೆ ಹಾಕಿದ;ಈ ಸಲ ಧಣಿಯ ಬಾಯಿಯಲ್ಲಿ ಮಾತು ನಿಲ್ಲಲಿಲ್ಲ:ನಿಮ್ ಗೌಡ್ತಿಗೆ ಗಂಡ ನಾನಲ್ಲಲೆ,ಆ ಫಕೀರ ಎಂದುಬಿಟ್ಟ!
ಡೇಗನು,ಈರನು ಈವತ್ತಿಗೂ ಈ ಸತ್ಯದ ಅಜೀರ್ಣಕ್ಕೆ ಒಳಗಾಗಿ ನಾನಾ ಸಂಕಟಗಳಿಂದ ಬಳಲುತ್ತಿದ್ದಾರೆ!

                                              ಲಕ್ಷ್ಮೀಕಾಂತ ನಾಯಕ

ಭ್ರಮೆಯೊಳಗಿನ ತೊಲಳಾಟ

ಭ್ರಮೆಯೊಳಗಿನ ತೊಲಳಾಟ

ಬದುಕು ಸುಂಟರಗಾಳಿಯೋ,ಸುಂಟರಗಾಳಿಯಲ್ಲಿ ತಾನಿದ್ದೇನೆಯೋ ಎಂದು ಅರಿವಾಗುವಷ್ಟರಲ್ಲಿ ಸುಮತಿಗೆ ಕತ್ತಲ ತೆರೆ ಸರಿಯತೊಡಗಿತ್ತು.ಎಲ್ಲವೂ ಮಾಯೆಯ ಹಾಗೆ,ಎಲ್ಲವೂ ನಶ್ವರದ ಹಾಗೆ,ಎಲ್ಲವೂ ಒಂದು ಭ್ರಾಮಕ ಲೋಕದ ಹಾಗೆ ಕಾಣಿಸತೊಡಗಿತ್ತು.ವಂಚನೆಯ ಇನ್ನೊಂದು ಹೆಸರೇ ಗಂಡಸು ಎನ್ನುವ ಹುಚ್ಚು ಯೋಚನೆ ಆಕೆಗೆ ತುಂಬಾ ಸಲ ಕಾಡಿತ್ತು.ತಾನು ತಪ್ಪು ಮಾಡಿದ್ದೆÃನೆ ಎಂದು ಕೂಡಾ ಆಕೆಗೆ ಅನ್ನಿಸಿತ್ತು.ಪೂಜಾರಿ ತನ್ನ ಅವಶ್ಯಕತೆಯನ್ನು ಅರಿತಿದ್ದ ಎಂದು ಕೂಡಾ ಆಕೆ ಅರಿತಿದ್ದ.ಪೂಜಾರಿ ಅನ್ವೆÃಷಣೆಯಲ್ಲಿ ನಿರತನಾಗುತ್ತಾ ಆಗುತ್ತಾ ಆತ ನಿಶ್ಚಳನಾಗಿದ್ದ.ಆತ ಮಾಯಯ ಪರದೆ ಸರಿಸಿದ್ದ.ಹುಚ್ಚರ ಜಗತ್ತಿನಲ್ಲಿ ಜ್ಞಾನಿಯೇ ಹುಚ್ಚನಾಗುತ್ತಾನೆ.ಎಲ್ಲಾ ಭ್ರಮೆಗಳನ್ನು ತೊರೆದಾದ ಮೇಲೆಯ ಪೂಜಾರಿ ದೂರ ತೀರದ ಯಾನ ಕೈಗೊಂಡಿದ್ದ.ಪೂಜಾರಿ ಸತ್ಯ;ಪೂಜಾರಿ ಅರಿವು,ಪೂಜಾರಿ ಬೆಳಕು....

ಸುಮತಿ ತನ್ನ ಗತಕಾಲದ ಜೀವನದಲ್ಲಿ ತೇಲಿ ಹೋದಳು:

ತನ್ನೆಲ್ಲಾ ಕೆಲಸಗಳ ಮಧ್ಯೆ ಪೂಜಾರಿಯ ಇಂದಿನ ಅಸಹಜ ವರ್ತನೆಯನ್ನು ಸುಮತಿ ಗುರುತಿಸಿದ್ದಳು;ಕೋಡಿ ಯ್ಯಾಕಿಂಗ್ ಮಾಡುತ್ತಿದೆ ಅಂತ ಮನಸ್ಸಿನಲ್ಲೆ ಅಂದುಕೊಂಡಳಾದರೂ ಅದರ ಬಗ್ಗೆ ತೀರಾ ಗಂಭೀರವಾಗಿ ಯೋಚಿಸಲಿಲ್ಲ.ಮಿಷಿನ್ ಹಿಂದೆ ರಾಶಿಗೆ ಹೊರಡಬೇಕಿರುವ ರವಿಗೆ ಅಕಿ ಬುತ್ತಿ ರೆಡಿ ಮಾಡಬೇಕಿತ್ತು.ಪಟಪಟ ಅಂತ ಒಲೆಯ ಮುಂದೆ ಕುಳಿತು ರೊಟ್ಟಿ ಬಡೆಯುವಾಗ ಮನಸ್ಸಿನ ತಂತುಗಳ ಒಳಗಿನ ವಿಲಕ್ಷಣ ತರಂಗಗಳು ತೇಲಿ ಬಂದು ಅನಿರ್ವಚನೀಯ ರೊಮಾಂಚನವನ್ನು ಮೂಡಿಸಿದವು;ರವಿ ತನ್ನ ಮನೆಯೊಳಗಿರದಿದ್ದರೆ ತನ್ನ ಬದುಕು ರಂಗೇರುತ್ತಿರಲಿಲ್ಲ ಎನ್ನುವ ಭಾವ ಮೂಡಿದಾಗ ಪೂಜಾರಿ ನೆನಪಿನಿಂದ ಮರೆಯಾಗಿದ್ದ.ಪೂಜಾರಿ ಪದೇ ಪದೇ ನೆನಪಿನಿಂದ ಮರೆಯಾಗುತ್ತಿದ್ದ.ಪೂಜಾರಿ ಅಸ್ತಿತ್ವ ಕಳೆದುಕೊಂಡರೆ ಎಷ್ಟು ಚೆಂದ ಅಂತ ಆಕೆ ಭಾವಿಸಿಕೊಳ್ಳುತ್ತಿದ್ದಳು.ಪೂಜಾರಿ ದೆವ್ವವಾಗಿದ್ದ;ಪೂಜಾರಿ ಭೂತವಾಗಿದ್ದ;ಪೂಜಾರಿ ಹಾಲಿನೊಳಗಣ ಬೆರೆತ ಹುಳಿಯಾಗಿದ್ದ;ಪಲ್ಯದೊಳಗೆ ಬೆರೆತ ಅತೀ ಹೆಚ್ಚಿನ ಉಪ್ಪಾಗಿದ್ದ!ಆಕೆ ಪಟಪಟ ರೊಟ್ಟಿ ಬಡೆಯುತ್ತಲೇ ನೆನಪುಗಳ ಸಾಗರದೊಳಗೆ ಮುಳುಗಿ ಹೋಗುತ್ತಿದ್ದಳು.

ಪೂಜಾರಿ ವಿಲಕ್ಷಣ ಜೀವಿಯಾಗಿದ್ದ.ಪೂಜಾರಿ ಮಾಯೆಯ ಬೆನ್ನತ್ತಿದ ಲೌಖಿಕ ಸನ್ಯಾಸಿಯಾಗಿದ್ದ.ಪೂಜಾರಿ ನಿರಂತರ ಶಾಂತಿ ಹುಡುಕುವ ತಪಸ್ವಿಯಾಗಿದ್ದ.ಪೂಜಾರಿ ಹೆಣ್ಣುಗಳ ತೋಳಿನಲ್ಲಿ ವಿಲಕ್ಷಣ ಧ್ಯಾನ ಬಯಸುವ ಋಷಿಯಾಗಿದ್ದ.ಪೂಜಾರಿ ಹೆಣ್ಣೆಂಬ ಮೋಹದ ಕಡೆ ಕುರುಡಾಗಿ ಸಾಗಿ ಹೋಗುವ ಚಪಲಿಯಾಗಿದ್ದ.ಸದಾ ಸುಖದ ಅಶಾಂತಿಯಲ್ಲಿ ಆತ ಹೆಣ್ಣಿನ ದೇಹದಲ್ಲಿ ಭ್ರಮೆಯನ್ನು ಹುಡುಕುವ ತತ್ವಜ್ಞಾನಿಯಾಗಿದ್ದ.ಸಂತನಾಗಿದ್ದ.ಸರ್ವಸಂಗ ಪರಿತ್ಯಾಗಿಯಾಗಿದ್ದ.ಸೇದುವ ಬೀಡಿಯ ಹೊಗೆಯಲ್ಲಿ ವಿಲಕ್ಷಣ ಲೋಕ ಹುಡುಕುವ ಹುಚ್ಚನಾಗಿದ್ದ!

ಪೂಜಾರಿಗೆ ತಾನು ಮೊದಲ ಹೆಂಡತಿಯಾಗಿದ್ದಳು.ಪೂಜಾರಿ ಅತೀ ಬೇಗನೆ ತನ್ನ ದೇಹ ನಿರ್ಮೋಹವಾಗಿತ್ತು.ಪೂಜಾರಿ ತನ್ನಿಂದ ವಿಮುಖನಾಗಿದ್ದ.ಪೂಜಾರಿ ಆಸಕ್ತಿ ಕಳೆದುಕೊಳ್ಳುವಷ್ಟರಲ್ಲಿ ತನಗೆ ಮೂರು ಮಕ್ಕಳು;ಗಂಡನ ಮನೆ ಸೇರದೆ ಮೂರು ಮಕ್ಕಳ ತಾಯಿಯಾಗಿ ತಾನು ತವರಿನಲ್ಲೇ ಉಳಿದಳು.ಪೂಜಾರಿ ದೂರವಾಗಿದ್ದ:ಹೂವಿನಿಂದ ಹೂವಿಗೆ ಹಾರುವ ದುಂಬಿಯಂತೆ!ಪೂಜಾರಿ ತನ್ನ ಊರಿನಲ್ಲಿ ಮತ್ತೊಂದು ತೋಳು ಸೇರಿದ್ದ.ಪೂಜಾರಿ ಯಾವುದೇ ಅರ್ಹತೆಯಿಲ್ಲದ ತನ್ನ ಸೌಂದರ್ಯದಲ್ಲಿ ಒಂದಂಶವೂ ಇಲ್ಲದ ಹೆಣ್ಣಿನಲ್ಲಿ ಅನುರಕ್ತನಾಗಿದ್ದ.ಪೂಜಾರಿ ಇನ್ನೊಂದು ಮಡಿಲಿನಲ್ಲಿ ಈಜುತ್ತಾ ತನ್ನಿಂದ ದೂರವಾಗಿದ್ದ.ಆಗ ಮೂಡಿತ್ತಾ ರೊಚ್ಚು?

ಸುಮತಿ ಯೋಚಿಸತೊಡಗಿದಳು.

ಸುಮತಿಯ ಬದುಕಿ ಇದ್ದಕ್ಕಿದ್ದಂತೆ ಗ್ರಹಣಕ್ಕೊಳಗಾಗಿತ್ತು.ಸೂರ್ಯ ಮರೆಯಾದ ಹಾಗೆ ಆಕೆಯ ಬದುಕು ಅಂಧಕಾರಕ್ಕೆ ಈಡಾಗಿತ್ತು.ಮೂರು ಮಕ್ಕಳೊಂದಿಗೆ ಗಂಡನಿಲ್ಲದೆ ಬದುಕು ಸಾಗಿತ್ತಾದರೂ ಆಕೆಯ ಜೀವನ ನಾಮಫಲಕವಿಲ್ಲದ ಬಸ್ಸಿನಂತಾಗಿತ್ತು.ಸೌಂದರ್ಯದಲ್ಲಿ ಸುಮತಿಗಿಂತ ಯಾವ ಅರ್ಥದಲ್ಲೂ ಸಾಟಿ ಇಲ್ಲದ ಹೆಣ್ಣನ್ನು ಪೂಜಾರಿ ಮದುವೆಯಾಗಿದ್ದ.ಆಕೆಯ ಅಹಂಗೆ ಭಾರೀ ಪೆಟ್ಟು ಬಿದ್ದಿತ್ತು.ಹಣದ ತೊಂದರೆ ಏನೂ ಇರಲಿಲ್ಲ.ಪೂಜಾರಿ ಆರ್ಥಿಕವಾಗಿ ಆಕೆಯನ್ನು ಚೆನ್ನಾಗಿಯೇ ಇಟ್ಟಿದ್ದ.ಉಣ್ಣಲಿಕ್ಕೆ ತಿನ್ನಲಿಕ್ಕೆ,ಬಟ್ಟೆ ಬರೆ,ಬಂಗಾರ ಸಮೃದ್ಧವಾಗಿ ಕೊಡಮಾಡಿದ್ದ.ಧವಸ ದಾನ್ಯದ ಕೊರತೆ ಮಾಡಿರಲಿಲ್ಲ.ಹಾಲು ಮೊಸರು ತುಪ್ಪ ಸಮೃದ್ಧವಾಗಿತ್ತು.ಬದುಕಿಗೆ ಆರ್ಥಿಕ ಭದ್ರತೆಯನ್ನು ಪೂಜಾರಿ ಚೆನ್ನಾಗಿಯೇ ಒದಗಿಸಿದ್ದ.ಆದೆರೆ ಪೂಜಾರಿ ಸುಮತಿಯ ಗಾಜಿನಂತಹ ಮನಸ್ಸನ್ನು ಒಡೆದು ಛಿದ್ರ ಛಿದ್ರ ಮಾಡಿದ್ದ.ಸುಮತಿ ಮಾನಸಿಕವಾಗಿ ಸತ್ತು ಹೋಗಿದ್ದಳು.ಪೂಜಾರಿ ತನ್ನ ತಿರಸ್ಕಾರಕ್ಕೆ ಕಾರಣ ಹೇಳದೆ ನರಕ ಸೃಷ್ಟಿಸಿದ್ದ.ಆಕೆ ದಿನ ದಿನ ನೋವಿನ ಹಿಂಸೆಯಲ್ಲಿ ಬೆಂದು ಹೋಗತೊಡಗಿದ್ದಳು.

ಸುಮತಿ ವ್ಯಗ್ರಳಾದಳು;ಬದುಕಬೇಕು ತಾನು ಎಂದಳು?ತಿರಸ್ಕಾರದ ಏಟಿಗೆ ಛಿದ್ರಗೊಂಡ ಮನಸ್ಸಿನ ಕನ್ನಡಿಯನ್ನು ಮತ್ತೆ ಜೋಡಿಸುವ ನಿರ್ಧಾರ ಮಾಡಿದಳು.ಆಕೆ ಆ ಕುರಿತು ಯೋಚಿಸತೊಡಗಿದಾಗ....
ಪೂಜಾರಿ ಅವಕಾಶ ಒದಗಿಸಿದನಾ?ತುಂಬಾ ವರ್ಷಗಳ ನಂತರ ಆ ಅಂಶ ಆಕೆಯ ಗಮನಕ್ಕೆ ಬಂದಿತ್ತು;ಆದರೆ ಕಾಲ ಮಿಂಚಿ ಹೋಗಿತ್ತು.ಸುಮುತಿಯ ಛಿದ್ರಗೊಂಡ ಮನಸ್ಸಿನ ಕನ್ನಡಿಯಲ್ಲಿ ಚಂದಿರ ಮೂಡಿದ್ದ.ಬೆಳದಿಂಗಳು ಬದುಕನ್ನು ವ್ಯಾಪಿಸಿತ್ತು.ಆಳು ಚಂದಿರನಾಗಿದ್ದ.ಸುಮತಿಯ ಸೌಂದರ್ಯಕ್ಕೆ ಅರ್ಥ ಮೂಡಿಸಿದ್ದ.ಸುಮತಿಯ ಅಸಮಾಧಾನಕ್ಕೆ ಉತ್ತರವಾಗಿದ್ದ.ಸುಮತಿಯ ಅತೃಪ್ತಿಗೆ ಆತ ಆತ ತೃಪ್ತಿ ಒದಗಿಸಿದ್ದ.

ಅದೊಂದು ರಾತ್ರಿ.ಅಮಾವಾಸ್ಯೆ ಹರಡಿದ ರಾತ್ರಿ,ಕತ್ತಲು ತುಂಬಿದ ರಾತ್ರಿ.ಜಗತ್ತಿನ ಅಸಂಖ್ಯಾತ ಅತೃಪ್ತ ಕನಸುಗಳ ಒಂದು ಕಡೆ ಸಂಗಮವಾದಂತೆ ನಕ್ಷತ್ರಗಳು ಭಾನ ತುಂಬಾ ಹರಡಿದ್ದವು.ನಕ್ಷತ್ರಗಳ ಬೆಳಕಿನಲ್ಲಿ ಜೋಳದ ಹೊಲದ ಮೆಟ್ಟಿನ ಮೇಲೆ ಅವರಿಬ್ಬರು ಅಂಗಾತವಾಗಿದ್ದರು.ಆಕೆಯ ಕನಸುಗಳು ಛಿದ್ರಗೊಂಡಿದ್ದವು.ಆತ ಕನಸುಗಳನ್ನು ಜೋಡಿಸುತ್ತಿದ್ದ.ಆಕೆ ಸಂತೃಪ್ತಳಾಗುತ್ತಿದ್ದಳು.ಆತ ಮನಸ್ಸಿನ ಊರುಗೋಲಾಗುವ ಭರವಸೆ ಮೂಡಿಸುತ್ತಿದ್ದ.ಆಕೆಯ ಮುಖ ಪ್ರಸನ್ನವಾಗುತ್ತಿತ್ತು.ಚುಕ್ಕಿಯೊಂದು ಮಿನುಗಿದಾಗೊಮ್ಮೆ ಆಕೆ ಕಿಸಕ್ಕನೆ ನಗುತ್ತಿದ್ದಳು;ಆತ ಕಚಗುಳಿ ಇಡುತ್ತಿದ್ದ.

“ತಪ್ಪಲ್ಲವಾ ಇದು?”ಆತ ಕೇಳುತ್ತಿದ್ದ.

“ತಪ್ಪಲ್ಲವಾ ಪೂಜಾರಿ ಮಾಡಿದ್ದು?”

ಹೆಣ್ಣಿನ ಮನಸ್ಸಿನ್ನು ಮುರಿಯುವ,ಹೆಣ್ಣಿನ ಭಾವನೆಗಳನ್ನು ಸಾಯುಸುವ,ಹೆಣ್ಣಿನ ಸೌಂದರ್ಯವನ್ನು ತಿರಸ್ಕರಿಸುವ ಹಕ್ಕನ್ನು ಪೂಜಾರಿಗೆ ಕೊಟ್ಟವರು ಯಾರು?ದೇಹದ ಅಸ್ತಿತ್ವತ್ವ ಇರುವಂತೆಯೇ ಆಕೆಯ ಕನಸುಗಳನ್ನು ಕಿತ್ತುಕೊಳ್ಳುವ ಹಕ್ಕನ್ನು ಪೂಜಾರಿಗೆ ಕೊಟ್ಟವರು ಯಾರು?ಸುಖವೆಂದರೆ ಹಣವಾ?ಸುಖವೆಂದರೆ ಅನ್ನವಾ? ಸುಖವೆಂದರೆ ಬಂಗಾರವಾ?ಸುಖವೆಂದರೆ ಆಸ್ತಿಯಾ?ಏನು ಸುಖವೆಂದರೆ?ಜೀವದ ಸಂತೃಪ್ತಿ,ಮನಸ್ಸಿನ ನಿರಾಳತೆ ಯಾವುದರಿಂದ ಪ್ರಾಪ್ತವಾಗುತ್ತದೆ?ಲೌಖಿಕ ಬದುಕಿನ ಮುಖವಾಡ,ಲೌಖಿಕ ಬದುಕಿನ ವೇಷ,ಲೌಖಿಕ ಬದುಕಿನ ಸಂಕೋಲೆಗಳನ್ನು ಕಳಚಿ ಉಓಚಿಸಿದಾಗ ಏನು ನಾನು-ನೀನು?ನಾನಾಗಿ ಬದುಕುವ ಅರ್ಹತೆಯೂ ನನಗಿಲ್ಲವಾ?ಶರೀರ ಮನಸ್ಸು ಬೆಸುಗೆ ಕಾಮ ಮೋಹ ಮತ್ತು ನಾನು,ಇವೆಲ್ಲವುಗಳೊಂದಿಗೆ ನಾನಾಗಬಯಸುತ್ತೇನೆ.ಪೂಜಾರಿ ಹುಡುಕುತ್ತಾನೆ,ಪೂಜಾರಿ ಕೊಲ್ಲುತ್ತಾನೆ,ಪೂಜಾರಿ ಚಿನ್ನದ ಪಂಜರ ಹೆಣೆಯುತ್ತಾನೆ!ಸರೀನಾ?
ರವಿ ಮೌನವಾದ.ಅದಾದ ನಂತರ ಆ ರಾತ್ರಿಗಳು ಮತ್ತೆ ಮತ್ತೆ ಪುನಾರಾವರ್ತನೆಯಾದವು.ನಿಟ್ಟುಸಿರಿಗೆ ಲೆಖ್ಖವಿಲ್ಲದಾಯಿತು.ಬೆವರು ಹೊಳೆಯಾಗಿ ಹರಿಯುತು.ಎಲ್ಲಿಯವರೆಗೆ?

ನಗ್ಮಾ ಗಾಭರಿಗೊಂಡು ತಾಯಿಯನ್ನು ಕೂಗಿದಳು. “ಅವ್ವಾ,ಅಪ್ಪ ಹೆಂಗೆಂಗೋ ಮಾಡುತ್ತಿದ್ದಾನೆ ಬಾ ಇಲ್ಲಿ!!”ಸುಮತಿ ಅಡುಗೆ ಮನೆಯಿಂದ ಓಡಿ ಬಂದಳು.ಪೂಜಾರಿ ಶೂನ್ಯದಲ್ಲಿ ದೃಷ್ಟಿ ಇಟ್ಟು ನಗುತ್ತಿದ್ದ.ಆತನ ನಗು ಅಲೆಅಲೆಯಾಗಿತ್ತು.ಆತನ ಮುಖ ಪ್ರಸನ್ನವಾಗಿತ್ತು.ಆತ ಎಲ್ಲವನ್ನೂ ತೊರೆದವನ ಹಾಗೆ ಕಾಣಿಸುತ್ತಿದ್ದ.ಆತನ ಮುಖ ಬೆಳದಿಂಗಳಾಗಿತ್ತು.

“ಎಲ್ಲವೂ ಭ್ರಮೆ,ಎಲ್ಲವೂ...ನೀನು,ನಾನು! ಸೌಂದೆರ್ಯ.ಮಾತುಗಳು,ಮೌನಗಳು,ಬದುಕು,ನಗು ಅಳುಗಳು,ಸುಖ ದುಃಖಗಳು,ಬಾಂಧವ್ಯ,ಸ್ನೇಹ ಪ್ರೀತಿಗಳು,ಹಣ ಆಸ್ತಿ ಸಂಪತ್ತು-ಎಲ್ಲವೂ ಭ್ರಮೆಗಳು.ನಮ್ಮ ಇರುವೂ ಭ್ರಮೆ!ಸಂಸಾರವೂ ಭ್ರಮೆ!ಎಲ್ಲವೂ ಭ್ರಮೆ,ಭ್ರಮೆ,ಭ್ರಮೆ....!”ಆತ ಗಹಗಹಿಸಿ ನಗತೊಡಗಿದ.ನಗು ಅಲೆಅಲೆಯಾಗಿ ಪರಿಸರವನ್ನು ವ್ಯಾಪಿಸತೊಡಗಿದಂತೆ...

ಸಮಾಜ ಪೂಜಾರಿಗೆ ಹುಚ್ಚು ಹಿಡಿದಿದೆ ಎಂದಿತು.ಪೂಜಾರಿಗೆ ಹುಚ್ಚು ಹಿಡಿದ ನಂತರ ಆತ ಬಹಳ ದಿನ ಬದುಕಲಿಲ್ಲ.ಪೂಜಾರಿ ಸತ್ತ ಮೇಲೆ ಕನಸು ಜೋಡಿಸಿದ ರವಿ ಮತ್ತೊಂದು ದೇಹ ಹುಡುಕಿದ್ದ.ನಗ್ಮಾ ಬಸುರಿಯಾಗಿದ್ದಳು.

                                                                              .                                    ಲಕ್ಷ್ಮೀಕಾಂತ ನಾಯಕ

ವೈದ್ಯಲೋಕದ ವಂಚನೆಯಲ್ಲಿ ಒಂದು ಸುತ್ತು...


ವೈದ್ಯಲೋಕದ ವಂಚನೆಯಲ್ಲಿ ಒಂದು ಸುತ್ತು...

“ಮನುಷ್ಯನ ದೇಹ ನೈಸರ್ಗಿಕವಾಗಿರುವ ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಂಡಿತೆಂದರೆ ಆ ವ್ಯಕ್ತಿಯನ್ನು ಯಾರೂ ಕಾಪಾಡಲಾರರು,ಡಾಕ್ಟರ್,ದೇವರು!”ಹಾಗಂತ ಹೇಳಿದರು;ನನ್ನ ಸ್ನೇಹಿತ ಮತ್ತು ವೈದ್ಯರಾಗಿರುವಂತವರು.ಆ ಬ್ಯಾನಿ,ಈ ಬ್ಯಾನಿ,ಅಲ್ಲಿ ಚುಚ್ಚಿದಂಗ ಆಗ್ತದ,ಇಲ್ಲಿ ಚುಚ್ಚಿದಂಗ ಆಗ್ತದ ಅಂತ ನನ್ನ ಅನುಮಾನದ ರೋಗಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನನಗವರು ಆ ಮಾತು ಹೇಳಿದರು;ಅದು ಸತ್ಯವೇ.ನನ್ನ ಫೇಸ್ ಬುಕ್ ವೈದ್ಯ ಉಪನ್ಯಾಸಕರೊಬ್ಬರು ಇದೆ ಮಾತನ್ನು ದೃಢೀಕರಿಸುತ್ತಾ ಔಷಧಿ ಎನ್ನುವುದು ವೈದ್ಯಲೋಕ ಸೃಷ್ಟಿಸಿದ ಮೂಢನಂಬಿಕೆ;ಔಷಧಿಗಳು ತಾತ್ಕಾಲಿಕ ಪರಿಹಾರವನ್ನು ನೀಡಬಹುದೇನೋ ನಿಜ,ಅವುಗಳಿಂದ ದುಷ್ಪರಿಣಾಮಗಳೆ ಹೆಚ್ಚು.ಔಷಧಿಗಳಲ್ಲಿ ಹೆಚ್ಚು ಹೆಚ್ಚು ಅವಿಸ್ಕಾರಗಳನ್ನು ಮಾಡುತ್ತಿರುವಂತೆ ರೋಗಗಳ ಸಂಖ್ಯೆ ಮರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಸಾಗಿದೆ.ಮತ್ತು ವೈದ್ಯವನ್ನು ಉದ್ಯಮವಾಗಿಸಿಕೊಂಡಿರುವ ಕೆಲವರು ನೂರಾರು ಸಾವಿರಾರು ಕೋಟಿಯ ಒಡೆಯರಾಗುತ್ತಿದ್ದಾರೆ.ಔಷಧಿ ಉತ್ಪಾದಕರು ಮತ್ತು ಅವುಗಳನ್ನು ಪ್ರಿಸ್ಕ್ರಿಪ್ಷನ್ ನಲ್ಲಿ ಬರೆಯುವ ವೈದ್ಯರು ಸೇರಿ ಇಡೀ ಮಾನವ ಜಗತ್ತನ್ನು ವಂಚಿಸುತ್ತಿದ್ದಾರೆ.ಈ ಕುರಿತು ಅವೇರ್ನೆಸ್ ಬರಹಗಳನ್ನು ಬರೆದ ನನ್ನ ಮೇಲೆ ಅನೇಕ ಷಡ್ಯಂತ್ರಗಳು ನಡೆದವು ಮತ್ತು ಕೇಸೂ ದಾಖಲಿಸುವ ಪ್ರಯತ್ನಗಳು ನಡೆದವು ಎಂದು ಒಮ್ಮೆ ಅವರು ನನ್ನೊಂದಿಗೆ ಹೇಳಿಕೊಂಡಿದ್ದರು.ಅದು ಸತ್ಯವೆ,ವೈದ್ಯಲೋಕದಲ್ಲಿ ಈಗಿನಂತೆ ಬಗೆಬಗೆಯ ಔಷಧಿಗಳ ಅವಿಸ್ಕಾರವಾಗದ ದಿನಗಳಲ್ಲಿ ಮನುಷ್ಯರು ಆರೋಗ್ಯವಾಗಿಯೇ ಇದ್ದರು;ನೂರು ವರ್ಷಗಳ ಸುದೀರ್ಘ ಬದುಕನ್ನು ಸಾಗಿಸುತ್ತಿದ್ದರು.ನೂರಾ ಎಂಟು ವರ್ಷಗಳ ಸುದೀರ್ಘವಾಗಿ ಬದುಕಿದ ನಮ್ಮೂರಿನ ವ್ಯಕ್ತಿಯೊಬ್ಬ ಉಣ್ಣುವಾಗ ತಿನ್ನುವಾಗ ಮಣ ಮಣ ಸಕ್ಕರೆ ತಿನ್ನುತ್ತಿದ್ದ;ಆತ ನೂರಾ ಎಂಟು ವರ್ಷ ಪೂರೈಸಿ ಸಾಯುವವರೆಗೆ ಆತ ಆಸ್ಪತ್ರೆಗಳಿಗೆ ಹೋಗಲಿಲ್ಲ.ಸಕ್ಕರೆ ಖಾಯಿಲೆ,ಹೃದಯದ ಒತ್ತಡ,ಕಿಡ್ನಿ ವೈಫಲ್ಯ ಎನ್ನುವ ಹೆಸರಿನ ರೋಗದ ನೆರಳಿನಲ್ಲಿ ಬದುಕಲಿಲ್ಲ.ಮತ್ತವು ಆತನ ಹತ್ತಿರಕ್ಕೂ ಬರಲಿಲ್ಲ;ಅಸಲು ಆ ಪದಗಳ ಪರಿಚಯವೇ ಆತನಿಗೆ ಆಗಲಿಲ್ಲ.ಆತ ಮನೆಬಿಟ್ಟು ಹೊರ ಬರುತ್ತಿರಲಿಲ್ಲ.ನಾಲಕ್ಕೆ ನಾಲ್ಕು ಹೆಜ್ಜೆ ಆತ ನಡೆದಿರುವುದನ್ನು ನಾನು ನೋಡಲಿಲ್ಲ.ಸಾಯುವವರೆಗೆ ಸುಖವಾಗಿ ಇದ್ದು ಸತ್ತ.ಇದು ವೈದ್ಯಲೋಕದ ಅಚ್ಚರಿ ಅಲ್ಲದೆ ಮತ್ತೇನು?

ಅಸಲು ಮೂರು ನಾಲ್ಕು ದಶಕಗಳ ಹಿಂದೆ ಆಸ್ಪತ್ರೆಗಳೆ ಇರಲಿಲ್ಲ.ತಾಲ್ಲೂಕಿಗೆ ಒಂದೋ ಎರಡೋ ಅವತ್ತಿನ ಮೌಲ್ಯಯುತ ಎಂಬಿಬಿಎಸ್ ಶಿಕ್ಷಣ ಪಡೆದ ವೈದ್ಯರಿರುತ್ತಿದ್ದರು;ಧನದಾಹ ಇರುತ್ತಿರಲಿಲ್ಲ.ವೈದ್ಯವನ್ನು ಒಂದು ಸೇವೆ ಎನ್ನುವಂತೆ ನಿರ್ವಹಿಸುತ್ತಿದ್ದರು;ಕಿತ್ತು ತಿನ್ನುವ ಬಡತನದ ಮಧ್ಯೆ ಆ ಕಾಲಘಟ್ಟದಲ್ಲಿ ಆಸ್ಪತ್ರೆಗಳಿಗೆ ಹೋಗುವವರಾದರು ಯಾರು?ಪೂಜಾರಿ,ಮುಲ್ಲಾ ಸಾಹೇಬ,ನಾಟಿ ವೈದ್ಯರು ಮಂತ್ರಿಸಿ ಕೊಡುವ ಲಿಂಬೆಕಾಯಿಯೇ ಬಹುತೇಕ ರೋಗಗಳನ್ನು ವಾಸಿ ಮಾಡುತ್ತಿತ್ತು;ಮತ್ತದು ಜನ ಜೀವನವನ್ನು ಆರೋಗ್ಯವಂತವಾಗಿ ಸದೃಢವಾಗಿಟ್ಟಿತ್ತು!ಆಗ ಜನಗಳಿಗೆ ವರ್ಷಕ್ಕೊಮ್ಮೆಯೊ ಎರಡು ಸಲವೋ ಜ್ವರ ಬರುತ್ತಿದ್ದವು;ಪಿತ್ತಗ್ರಸ್ತ ಜ್ವರ;ಮನುಷ್ಯನ ಬಹು ಆರೋಗ್ಯ ಸಮಸ್ಯೆಗಳಿಗೆ ವಾತಾ-ಪಿತ್ತ-ಕಫಗಳ ಅಸಂಬದ್ಧತೆಯೇ ಕಾರಣ ಎಂದು ನಿರ್ಧರಿಸಲಾಗುತ್ತಿತ್ತು.ನಾಡಿ ಪರೀಕ್ಷೆ ಮಾಡಿ ರೋಗ ನಿರ್ಧಾರ ಮಾಡಲಾಗುತ್ತಿತ್ತು.ಶುಂಠಿ,ಜೀರಗೆ,ಮೆಣಸು,ಅರಿಷಿಣಗಳ ಸರಿಯಾದ ಬಳಕೆಯ ಚಿಕಿತ್ಸೆ ಹೇಳಲಾಗುತ್ತಿತ್ತು.ಜನ ಆರೋಗ್ಯ ಸುಧಾರಿಸುತ್ತಿತ್ತು.ದೊಡ್ಡ ಖಾಯಿಲೆ ಅಂತ ಯಾವೂ ಬರುತ್ತಿರಲಿಲ್ಲ.ಬರುವಂತಹವು ಎಂದರೆ ಪ್ಲೇಗು,ಕಾಲಾರಾ,ಮಲೇರಿಯಾ,ಟೈಪಾಯ್ಡು...ಈ ರೋಗಗಳು ಬಂದಾಗ ಮನುಷ್ಯ ಉಳಿಯುತ್ತಿರಲಿಲ್ಲ.ದೇವರು ಇಷ್ಟೇ ಆಯುಷ್ಯ ಬರೆದಿದ್ದನೇನೋ ಎಂದು ಸುಮ್ಮನಾಗಿ ಬಿಡುತ್ತಿದ್ದರು.ಈಗಿನಂತೆ ಆವಾಗ ಘನ ಪಂಡೀತರಿರಲಿಲ್ಲವಲ್ಲಾಎಮ್ ಆರ್ ಸ್ಕ್ಯಾನ್ ಮಾಡಿಸಿಕೊಂಡು ಬನ್ನಿ,ಸಿಟಿ ಸ್ಕ್ಯಾನ್ ಮಾಡಿಸಿಕೊಂಡು ಬನ್ನಿ,ರಕ್ತ ಪರೀಕ್ಷೆ ಮಾಡಿಸಿಕೊಂಡು ಬನ್ನಿ ಎನ್ನುವ ಲಕ್ಷ ಟೆಸ್ಟುಗಳು ಹಾಗ ಎಲ್ಲಿದ್ದವು?ಈಗ ಪರೀಕ್ಷೆಗೆಂದು ಹೊರಟರೆ ಹತ್ತಾರು ಲಕ್ಷ ರೂಪಾಯಿಗಳ ಟೆಸ್ಟುಗಳಿವೆ;ವೈದ್ಯರ ಸಲಹೆಯ ಮೇರೆಗೆ ಅವುಗಳನ್ನು ಮಾಡಿಸಲೇಬೇಕು;ಇಲ್ಲವೆಂದರೆ ರೋಗ ನಿರ್ಣಯವಾಗುವುದಿಲ್ಲ.

ಇದೇನು ಎಲ್ಲಾ ಬಿಟ್ಟು ಈ ವೈದ್ಯಕೀಯ ಪ್ರಹಸನ ಏಕೆ ಶುರುಹಚ್ಚಿಕೊಂಡ ಎನ್ನುವ ಸಂದೇಹ ಮೂಡುತ್ತಿದೆಯಾ,ನಿಜ;ಕೆಲವೊಂದು ಆಸಕ್ತಿಕರ ಘಟನೆಗಳು ಈ ಬರಹವನ್ನು ಬರೆಯುವಂತೆ ಮಾಡಿದವು.ಎಷ್ಟೊಂದು ಮೋಸವಿದೆಯಲ್ಲವೇ ವೈದ್ಯಲೋಕದಲ್ಲಿ ಎನ್ನುವ ನನ್ನ ಪ್ರಶ್ನೆಗೆ ಉತ್ತರಿಸಿಕೊಳ್ಳುವ ಪ್ರಯತ್ನವೇ ಈ ಲೇಖನ.

ಅದೊಂದು ದಿನ ನನ್ನ ಹೆಳೆಯನೊಬ್ಬ ಮಾವ ಅದೇನೋ ಎದೆಯಲ್ಲಿ ನೋಯಿಸಿದಂತೆ ಅನ್ನಿಸುತ್ತಿದೆ ಎಂದ.ಸಾಯಂಕಾಲದ ಹೊತ್ತು;ಆರು ಗಂಟೆಯಾಗಿತ್ತು.ಕತ್ತಲು ನಿಧಾನವಾಗಿ ಆವರಿಸುತ್ತಿತ್ತು.ಬಾ ಹೋಗೋಣ ಆಸ್ಪತ್ರೆಗೆ ಎಂದೆ.ಇಬ್ಬರೂ ಸೇರಿ ಆಸ್ಪತ್ರೆ ತಲುಪಿದೇವು.ಡಾಕ್ಟರ್ ಆತ್ಮೀಯರೆ,ಕೂಡಲೇ ಪರೀಕ್ಷೆಗೆ ಒಳಪಡಿಸಿದರು;ಇಸಿಜಿ ಮಾಡುತ್ತಾ ಮೊದಲು ಯಾವಾಗಾದರೂ ಈ ರೀತಿ ಆಗಿತ್ತಾ ಎಂದು ಕೇಳಿದರು,ಮೊದಲು ಇಸಿಜಿ ಮಾಡಿದ ವರದಿಗಳಿವೆಯಾ ಎಂದರು.ಅವರ ಮುಖದಲ್ಲಿ ಅನುಮಾನವಿತ್ತು;ನಮ್ಮ ಹತ್ತಿರ ಇದ್ದವು;ಅವುಗಳನ್ನು ಮತ್ತತೆ ಮನೆಗೆ ಬಂದು ಹುಡುಕಿ ಕೊಟ್ಟೇವು.ಎರಡೂ ಇಸಿಜಿ ವರದಿಗಳನ್ನು ಕೂಲಂಕುಶವಾಗಿ ಪರಿಶೀಲಿಸಿ “ಏನೋ ವ್ಯತ್ಯಾಸ ಕಾಣಿಸುತ್ತಿದೆ,ರಾತ್ರಿಯ ಹೊತ್ತು ತುಂಬಾ ಅಪಾಯ,ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಕಾರಾತ್ಮಕವಾಗಿ ಪರಿಗಣಿಸುವಂತಿಲ್ಲ.ಬೆಟರ್ ಎಂದರೆ ಹೃದಯ ರೋಗದ ಆಸ್ಪತ್ರೆಗೆ ಇವತ್ತು ದಾಖಲಾಗಬೇಕು ನೀವು,ಕೆಲವೊಂದು ಪರೀಕ್ಷೆಗಳ ಅಗತ್ಯವಿದೆ”ಎಂದರು;ರೋಗಿ ಗಾಬರಿಗೊಂಡ,ಆತತನ ಮುಖ ಕಪ್ಪಾಗುತ್ತಿರುವುದನ್ನು,ಹೆದರಿಕೆಯಿಂದ ಕಂಪಿಸುತ್ತಿರುವುದನ್ನು ನಾನು ಗಮನಿಸಿದೆ.ತಡಮಾಡಲಿಲ್ಲ ನಾವು;ವೈದ್ಯರ ಶಿಫಾರಸು ಪತ್ರ ಬರೆಸಿಕೊಂಡು ಜಿಲ್ಲಾ ಕೇಂದ್ರಕ್ಕೆ ಬಂದು ಬಿಟ್ಟೇವು;ಅಲ್ಲೋ ರೋಗಿಯನ್ನು ನೆಲದ ಮೇಲೆ ಪಾದ ಊರಲಿಕ್ಕೇ ಬಿಡಲಿಲ್ಲಅವನು ಚೆನ್ನಾಗಿಯೇ ಇದ್ದಾನೆ;ಯಾವ ಸಮಸ್ಯೆಯೂ ಇಲ್ಲ.ವೀಲ್ ಚೇರಿನ ಮೇಲೆ ಕೂಡಿಸಿಕೊಂಡು ಟೆಸ್ಟಿಂಗ್ ಟೇಬಲ್ಲಿಗೆ ಕೊಂಡೊಯ್ದು ಟೆಸ್ಟಿಂಗ್ ಟೇಬಲ್ಲಿನ ಮೇಲೆಯೇ ಹಲವಾರು ಪರೀಕ್ಷೆಗಳನ್ನು ಮಾಡಿದರು!ಗಾಬರಿಯಿಂದ ಓಡಾಡಿದರು;ಅಂಜಿಯೋಗ್ರಫಿ ಮಾಡಬೇಕು,ಅಲ್ಟ್ರಾ ಸೌಂಡ್ ಪರೀಕ್ಷೆ ಮಾಡಬೇಕು,ಇಪ್ಪತ್ತು ನಾಲ್ಕು ಗಂಟೆಗಳ ಅಬ್ಸರ್ವೇಷನ್ ಅಗತ್ಯವಿದೆ ಎಂದು ಐಸಿಯೂನಲ್ಲಿ ದಾಖಲಿಸಿದರು;ನಾನು ದಂಗಾಗಿ ಹೋದೆ,ಇಷ್ಟರಲ್ಲಿ ಹತ್ತು ಸಾವಿರ ಪೇ ಮಾಡಿದ್ದೆ.ಗೆಳೆಯ ಐಸಿಯೂನಲ್ಲಿ ಸಂತೋಷವಾಗಿ ಮೈತುಂಬಾ ವೈರಿನ ನಳಿಕೆಗಳನ್ನು ಫಿಕ್ಸ್ ಮಾಡಿಸಿಕೊಂಡು ಸಂತೋಷವಾಗಿ ಮಲಗಿರುವಾಗ ನಾನು ಆ ಆಸ್ಪತ್ರೆಯ ವಿಸಿಟರ್ಸ್ ಹಾಲಿನಲ್ಲಿ ಕುಳಿತು ಯೋಚಿಸತೊಡಗಿದೆ.

ಸುಮಾರು ಹತ್ತುಕೋಟಿಗಳ ಮಹುಮಹಡಿ ಕಟ್ಟಡ,ನೂರಾರು ಸುಸಜ್ಜಿತ ಕೊಠಡಿಗಳು,ತುಂಬಾ ಬೆಲೆಬಾಳುವ ಪೀಠೋಪಕರಣಗಳು,ಕೋಟಿಗಟ್ಟಲೆ ಬೆಲೆಬಾಳುವ ಟೆಸ್ಟಿಂಗ್ ಉಪಕರಣಗಳು,ಅವಗಳಿಗೆ ಅವುಗಳ ಅಧ್ಯಯನ ಮಾಡಿದ ರೋಗ ನಿರ್ಧಾರಕ “ನಿಪುಣ”ತಜ್ಞರು,ನೂರಾರುಗಟ್ಟಲೆ ಇರುವ ಉಪಚಾರಿಕರು,ನರ್ಸುಗಳು,ಸೇವಕರು,ಬೃಹತ್ ಪ್ರಮಾಣದ ಔಷಧಾಲಯ,ನೋಟು ಎಣಿಸುವ ಮೆಷಿನ್..ಇದನ್ನೆಲ್ಲಾ ಹೇಗೆ ನಿಭಾಯಿಸುತ್ತಾರೆ.ಒಬ್ಬ ಕಸಗುಡಿಸುವವನಿಗೂ ಸದ್ಯದ ವರ್ತಮಾನದಲ್ಲಿ ಹತ್ತಾರು ಸಾವಿರ ಸಂಬಳ ಕೊಡಬೇಕು;ಈ ಮಲ್ಟಿಸ್ಪೆಷಲಿಸ್ಟ್ ಆಸ್ಪತ್ರೆ ದಿನವೊಂದಕ್ಕೆ ಹತ್ತಿಪ್ಪಪತ್ತು ಲಕ್ಷ ರೂಪಾಯಿಗಳ ವೈಹಿವಾಟು ಮಾಡಲೇಬೇಕು;ಹೇಗೆ ಮಾಡಬೇಕು?

ಮರುದಿನ ಬೆಳಿಗ್ಗೆ ಬಿಲ್ ಸೆಟಲ್ ಆದ ಮೇಲೆ ಡಾಕ್ಟರ್, “ದೊಡ್ಡ ಸಮಸ್ಯೆ ಏನೂ ಇಲ್ಲ,ಹೃದಯದ ವಾಲೊಂದು ಕೊಂಚ ಚಪ್ಪಟೆಯಾಗಿದೆ.ಇದಕ್ಕೆ ಆಪರೇಷನ್ ಅಗತ್ಯವಿಲ್ಲ.ಮೆಡಿಸಿನ್ ಮುಖಾಂತರ ಸರಿ ಹೋಗುತ್ತದೆ,ಆದರೆ ಪ್ರತಿತಿಂಗಳು ತಪ್ಪದೆ ಬರಬೇಕು”ಎಂದ.ಅದಾಗಲೇ ಬಿಲ್ಲು ಇಪ್ಪತ್ತೆರಡು ಸಾವಿರವಾಗಿತ್ತು!ಪ್ರತಿ ತಿಂಗಳು ಆಗುವ ಖರ್ಚು ನಾಲ್ಕು ಸಾವಿರ ಎಂದ,ಮಾತ್ರೆಗಳನ್ನು ತಪ್ಪಿಸಬಾರದು ಎಂದ.ನನ್ನ ಸ್ನೇಹಿತನನ್ನು ಐಸಿಯೂನಲ್ಲಿ ದಾಖಲಿಸಿ ಗ್ಲುಕೋಸ್ ಬಾಟಲಿ ತಗುಲಿಸಿ ಅದರೊಳಗೆ ಔಷಧಿ ಹಾಕುವಾಗ ನಾನು ಔಷಧಿಗಳನ್ನು ಪರಿಶೀಲಿಸುತ್ತಲೇ ಇದ್ದೆ.ಒಂದು ಸಿಪ್ರೊಪ್ಲಾಕ್ಸಾಸಿನ್ ಎನ್ನುವ ಆಂಟಿಬಯೋಟಿಕ್ ಮತ್ತು ಕೆಲವು ನೋವು ನಿವಾರಕ ಇಂಜೆಕ್ಷನ್ ಮತ್ತು ಪಿತ್ತ ನಿವಾರಕ ಪೆಂಟಾಪ್ರೊಜೋಲ್ ಇಂಜೆಕ್ಷನ್ ಹೊರತು ನನಗೆ ತಿಳಿಯದ ಯಾವ ಔಷಧಿಯನ್ನೂ ಹಾಕಿರಲಿಲ್ಲ!ಇಪ್ಪತ್ತೆರಡು ಸಾವಿರ ಬಿಲ್ ಆಗಿತ್ತು;ಬರೀ ಒಂದು ರಾತ್ರಿಗೆ!ಹಾಹ್ಹಾ ವೈದ್ಯಲೋಕವೇ ಎಂದು ಉದ್ಗರಿಸಿದ್ದೆ ಮನಸ್ಸಿನಲ್ಲಿ!

ಇಷ್ಟಕ್ಕೂ ಆಗಿದ್ದೇನು ಗೊತ್ತೆ?ದೀಪಾವಳಿಯ ಲಕ್ಷ್ಮೀ ಪೂಜೆಯಲ್ಲಿ ನಮ್ಮ ಕಡೆ ಮೂರ್ಖರೊಂದು ಪದ್ದತಿಯೊಂದನ್ನು ಪಾಲಿಸುತ್ತಾರೆ.ಈ ಹಳ್ಳಿಯಲ್ಲಿ ಸಣ್ಣಪುಟ್ಟ ಅಂಗಡಿಗಳಿರುತ್ತವೆ,ಬೀಡಿ ಸಿಗರೇಟು ಮಾರುವ ಅಂಗಡಿಗಳು;ಅವು ಸಿನ್ಸಿಯರ್ ಆಗಿ ಲಕ್ಷ್ಮಿಗೆ ಪೂಜೆ ಮಾಡುತ್ತವೆ;ದೀಪಾವಳಿಗೆ!ಹಾಗೆ ಮಾಡಿದರೆ ಅವರಿಗೆ ಲಕ್ಷ್ಮಿ ಒಲೆಯುತ್ತಾಳೆ.ಇದೇ ಸಂದರ್ಭದಲ್ಲಿ ಲಕ್ಷ್ಮಿ ಅನೇಕರಿಗೆ ಒದೆಯುತ್ತಾಳೆ!ಹೇಗೆ ಅಂತೀರಾ?ಈ ಮೂರ್ಖರು ಊರಿನ ಮೂರ್ಖರನ್ನೆಲ್ಲಾ ಪೂಜೆಗೆ ಆಹ್ವಾನಿಸಿ ರಾತ್ರಿ ಇಡೀ ಇಸ್ಪೀಟು ಆಡಿಸುತ್ತಾರೆ.ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಈತನೂ ರಾತ್ರಿ ಇಡೀ ಮದ್ಯ ಸೇವಿಸಿ,ಸಿಗರೇಟು,ಗುಟಕಾ ತಿನ್ನುತ್ತಾ ನಿದ್ದೆಗೆಟ್ಟು ಇಸ್ಪೀಟು ಆಡಿದ್ದಾನೆ.ನಿದ್ದೆ ಇರದ ಕಾರಣಕ್ಕೆ ಅನೇಕ ದುಶ್ಚಟಗಳನ್ನು ಮಾಡಿದ್ದಕ್ಕೆ,ಹಣ ಸೋತದ್ದಕ್ಕೆ ತಿಂದ ಅನ್ನ ಕರಗಿಲ್ಲ.ಲಕ್ಷ್ಮಿಯನ್ನು ಒಲೆಸಿಕೊಳ್ಳುವವರು ಸಮೃದ್ಧ ಹೋಳಿಗೆಯ ಊಟ ಹಾಕಿಸಿದ್ದಾರೆ.ಅದು ಅಜೀರ್ಣವಾಗಿ ವಿಪರೀತ ಪಿತ್ತವಾಗಿ ತಳಮಳ ಶುರುವಾಗಿದೆ.ಇಂತಿರಲು ಎದೆ ನೋಯಿಸದೆ ಇದ್ದೀತೆ?ಇದಕ್ಕಾಗಿ ಮಲ್ಟಿಸ್ಪೆಷಲ್ ಆಸ್ಪತ್ರೆಗೆ ನಾವು ಕಟ್ಟಿದ ದಂಡ ಇಪ್ಪತ್ತೆರಡು ಸಾವಿರ ರೂಪಾಯಿಗಳು;ಮತ್ತು ಒಂದು ಭಯ!ಇದು ವೈದ್ಯಲೋಕದ ಅಚ್ಚರಿ!

ಇಂಥವೇ ಅನೇಕ ಪ್ರಕರಣಗಳು ನನ್ನ ಗಮನಕ್ಕೆ ಬಂದಿವೆ,ಸತ್ತು ಹೋದ ರೋಗಿಗಳನ್ನು ಹತ್ತಾರು ದಿನ ಹವಾನಿಯಂತ್ರಿತ ಕೊಠಡಿಯಲ್ಲಿಟ್ಟು ದುಡ್ಡು ಸುಲಿಯುವುದನ್ನು ಸುಲಿಯುತ್ತಿರುವುದನ್ನು ನಾನು ಕಂಡಿದ್ದೇನೆ.ಬೀಡಿ ಸಿಗರೇಟು ವಿಪರೀತ ಸೇದಿ ಮಲಬದ್ಧತೆಗೆ ಗುರಿಯಾಗಿ ತಿಣುಕಿ ಮಲವಿಸರ್ಜನೆ ಮಾಡುತ್ತಾ ರಕ್ತ ಬಂದದ್ದನ್ನೆ ಆತಂಕ ಮಾಡಿಕೊಂಡು ವಂಚಕ ವೈದ್ಯರ ಜಾಲಕ್ಕೆ ಸಿಲುಕಿ ಗುದ ಕೊಯ್ಯಿಸಿಕೊಂಡವರು ಅನೇಕರಿದ್ದಾರೆ.ಅದಕ್ಕೊಂದು ಉದಾಹರಣೆ ನಾನೇ!ಒಬ್ಬ ಆರ್ ಎಂಪಿ ಎಂದು ಹೇಳಿಕೊಳ್ಳುವ ಡಾಕ್ಟರ್ ನನ್ನು ಶಾಣ್ಯೆ ಎಂದು ಭಾವಿಸಿ ಆತನ ಸಲಹೆಯ ಮೇರೆಗೆ ದ್ರೋಹಿ ಮತ್ತು ನಕಲಿ ಶಸ್ತ್ರ ಚಿಕಿತ್ಸಕನ ಮುಖಾಂತರ ಗುದನಾಳದ ಆಪರೇಷನ್ ಮಾಡಿಸಿಕೊಂಡಿದ್ದೆ.ಇಪ್ಪತ್ತು ಸಾವಿರ ಕಳೆದುಕೊಂಡ ಮೇಲೂ ಆ ಸಮಸ್ಯೆ ಹೋಗಲಿಲ್ಲ.ಸರಿಯಾದ ನೀರು ಸೇವನೆ,ಸರಿಯಾದ ಆಹಾರ ಸೇವನೆಯ ಪದ್ಧತಿ ಅನುಸರಿಸುವುದರ ಹೊರತು.ನಿಜಕ್ಕೂ ಇವತ್ತಿನ ಆಸ್ಪತ್ರೆಗಳು ಜನರ ಮನಸ್ಸಿನ ದೌರ್ಬಲ್ಯವನ್ನು ಬಳಸಿಕೊಂಡು ದುಡ್ಡು ಮಾಡುವ ಉದ್ಯಮವನ್ನಾಗಿ ಮಾಡಿಕೊಂಡಿವೆ.ಇದೊಂದು ಘೋರ ದುರಂತ.ಇವತ್ತಿನ ಬಹು ಮಹತ್ವಾಕಾಂಕ್ಷಿ ಉದ್ಯಮಗಳೆಂದರೆ ಸ್ಕೂಲು ತೆರೆಯುವುದು,ಆಸ್ಪತ್ರೆ ಕಟ್ಟಿಸುವುದು ಮತ್ತು ರಾಜಕೀಯ ಮಾಡುವುದು!ಲೋಕ ಈ ವಂಚಕರ ಅಣತಿಯಂತೆ ಸಾಗುತ್ತಿದೆ.

ಡಾ// ಬಿ.ಎಂ.ಹೆಗಡೆಯವರು ತಮ್ಮ ಯೂಟ್ಯೂಬ್ ಉಪನ್ಯಾಸಗಳಲ್ಲಿ ಮನುಷ್ಯನಿಗೆ ರೋಗಗಳು ಏಕೆ ಬರುತ್ತವೆ ಎನ್ನುವುದಕ್ಕೆ ಅರ್ಥತಪೂರ್ಣ ಮಾತುಗಳನ್ನು ಹೇಳುತ್ತಾರೆ.ಮನುಷ್ಯನ ಒಳಗಿರುವ ದ್ವೇಷ,ಮತ್ಸರ,ದುರಾಸೆಗಳೆ ಮನುಷ್ಯನಿಗೆ ರೋಗಗಳನ್ನು ತರುತ್ತವೆ.ಯಾವ ಕೆಟ್ಟ ಯೋಚನೆಗಳೂ ಇಲ್ಲದೆ ಆರೋಗ್ಯಕರವಾಗಿ ತಿಂದು ಸಂತೋಷದಿಂದ ದುಡಿದು ನೆಮ್ಮದಿಯಿಂದ ಮಲಗುವವರಿಗೆ ಯಾವುದೇ ರೋಗಗಳು ಬರುವುದಿಲ್ಲ ಎನ್ನುತ್ತಾರೆ.ಮನುಷ್ಯ ಅನೇಕ ಸ್ಪರ್ಧೆಗಳಿಗೆ ತನ್ನನ್ನು ಒಡ್ಡಿಕೊಂಡು ಮನಸ್ಸು ಮತ್ತು ದೇಹದ ಮೇಲೆ ಅತಿ ಒತ್ತಡ ಹಾಕುತ್ತಿರುವುದೇ ಹಲವು ಸಮಸ್ಯೆಗಳಿಗೆ ಕಾರಣ ಎನ್ನುತ್ತಾರೆ.ಅವರೂ ಔಷಧವನ್ನು ಒಂದು ಮೂಢನಂಬಿಕೆ ಎಂದೇ ದೃಢೀಕರಿಸುತ್ತಾರೆ.ಅದು ನೂರಕ್ಕೆ ನೂರು ಸತ್ಯ!ಮನುಷ್ಯನ ದೇಹವನ್ನು ಸೃಷ್ಟಿಸಿದ್ದು ನಿಸರ್ಗ ಅಥವಾ ದೇವರು ಎನ್ನುವುದಾದರೆ ಎಲ್ಲಾ ಮಾನವ ದೇಹಗಳನ್ನು ಮತ್ತದರ ಅಂಗಗಳನ್ನು ಒಳಗಿನ ಭಾಗಗಳನ್ನು ಒಂದೇ ಸ್ವರೂಪದಲ್ಲಿ ಭಾವಿಸುವುದು ತಪು ಎನ್ನುತ್ತಾರೆ.ಒಬ್ಬನ ಎಲುಬಿನ ಆಕೃತಿ ಬದಲಿರಬಹುದು,ಒಬ್ಬನ ನರವ್ಯೂಹದ ರಚನೆ ಬೇರೆ ಇರಬಹುದು,ಒಬ್ಬನ ಮೆದುಳಿನ ಸ್ವರೂಪ ಬೇರೆ ಇರಬಹುದು;ಅದ್ಹೇಗೆ ಎಮ್ ಆರ್ ಐ ಮತ್ತು ಸಿಟಿ ಸ್ಕ್ಯಾನ್ ಮುಖಾಂತರ ಅಂಗರಚನೆ ಮತ್ತದರಲ್ಲಿನ ವ್ಯತ್ಯಾಸವನ್ನು ಗುರುತಿಸುತ್ತೀರಿ ಎನ್ನುತ್ತಾರವರು!ಮಾನವ ಮತ್ತು ಮಾನವ ಸಂಪನ್ಮೂಲದ ಸ್ವಾಸ್ಥ್ಯಯ ಕಾಳಜಿ ಇರುವಂತ ಅಪರೂಪದ ವ್ಯಕ್ತಿತ್ವದ ಜನಗಳ ಮಾತಿವು.

ಹಾಗಾದರೆ ವೈದ್ಯರು ಉಪಯೋಗವಿಲ್ಲವಾ?ಎಲ್ಲಾ ವೈದ್ಯರು ವಂಚಕರಾ ಎನ್ನುವ ಎರಡು ಪ್ರಶ್ನೆಗಳು ಕೊನೆಯದಾಗಿ ಉಳಿದುಕೊಳ್ಳುತ್ತವೆ.ಸ್ವಸ್ಥ ಸಮಾಜಕ್ಕಾಗಿ ಮತ್ತು ಸದೃಢ ಮಾನವ ಸಂಪನ್ಮೂಲಕ್ಕಾಗಿ ವೈದ್ಯರ ಉಪಸ್ಥಿತಿ ಅಗತ್ಯ.ಇವತ್ತಿಗೂ ಜನ ದೇವರೆಂದು ಭಾವಿಸುತ್ತಾರೆ.ಅವರು ನೀಡುವ ಔಷಧಿಗಳಿಂದ ರೋಗಗಳು ಪರಿಹಾರವಾಗುವುದಿಲ್ಲ.ಯಾರು ಆ ವೈದ್ಯನ ಮೇಲೆ ಘನವಾದ ನಂಬಿಕೆಯನ್ನಿಟ್ಟಿರುತ್ತಾನೋ ಅಂಥಹ ರೋಗಿಗೆ ವೈದ್ಯನ ಕೈ ಸ್ಪರ್ಷ ಮಾತ್ರ ರೋಗವನ್ನು ಗುಣವಾಗಿಸುತ್ತದೆ.ಮುಖ್ಯವಾಗಿ ಬೇಕಿರುವುದು ನಂಬಿಕೆ ಮತ್ತು ಸಹನೆ.ಡಾಕ್ಟರ್ ಇಲ್ಲದಿದ್ದರೆ ಸಮಾಜ ಉಳಿಯುವುದಿಲ್ಲ.ಹಾಗೆನೆ ಕೆಟ್ಟ ಮತ್ತು ಧನದಾಹಿ ಡಾಕ್ಟರ್ ಗಳಿಂದ ಸಮಾಜ ಉಳಿಯುವುದಿಲ್ಲ.ಬರೀ ಸಮಾಜವಷ್ಟೇ ಅಲ್ಲ ಡಾಕ್ಟರ್ ಮಾಡುವ ಒಂದು ಸಣ್ಣ ತಪ್ಪಪಿನಿಂದ ಒಂದಿಡೀ ಕುಟುಂಬವೇ ನಾಶವಾಗುತ್ತದೆ.ಡಾಕ್ಟರ್ ಹಣದ ಮೇಲೆ ಮನಸ್ಸಿಟ್ಟು ಕೆಲಸ ಮಾಡಬಾರದು,ಅದೊಂದು ದೈವ ಸೇವೆ;ಜನಗಳ ಜೀವ ಮತ್ತು ಜೀವನದ ಪ್ರಶ್ನೆ,ಡಾಕ್ಟರ್ ಬೇಕೆ ಬೇಕು.

ಸರ್ಕಾರಗಳು ನಕಲಿ ವೈದ್ಯರನ್ನು ಅಪರಾಧಿ ಎಂದು ಗುರುತಿಸಿ ಕಾನೂನಿನ ಕಸ್ಟಡಿಗೆ ತೆಗೆದುಕೊಳ್ಳುವ ಕಾನೂನುಗಳನ್ನು ತರಬೇಕು.ಈ ಮಲ್ಟಿಸ್ಪೆಷಲಿಸ್ಟ್ ಆಸ್ಪತ್ರೆಗಳ ಸುಲಿಗೆಯ ಮೇಲೆ ಬಲವಾದ ನಿಯಂತ್ರಣ ತರಬೇಕು.ಮಾನ್ಯ ಸಿದ್ದರಾಮಯ್ಯನವರ ಅವಧಿಯಲ್ಲಿ ಆರೋಗ್ಯ ಸಚಿವರಾಗಿದ್ದ ಶ್ರೀ ರಮೇಶಕುಮಾರ ಸರ್ ಆ ಪ್ರಯತ್ನವನ್ನು ಮಾಡಿದ್ದರು.ಇದರ ವಿರುದ್ಧ ವೈದ್ಯರ ಆಕ್ರೋಶ ವ್ಯಕ್ತವಾಗಿ ಬೀದಿ ಹೋರಾಟಗಳನ್ನು ಮಾಡಿದ್ದರು.ಈ ದೇಶದ ಪ್ರಜ್ಞಾವಂತ ನಾಗರೀಕ ಸುಮ್ಮನೆ ಕುಳಿತಿದ್ದ;ಗುಡಿಯೊಳಗಿನ ದೇವರ ಹಾಗೆ!ಇವತ್ತು ಹಳ್ಳಿಯೊಂದರಲ್ಲಿ ಹತ್ತಾರು ಜನ ಯಾವುದೇ ಅರ್ಹತೆ ಇಲ್ಲದೆ ಮುಗ್ದ ಗ್ರಾಮೀಣಿಗರ ಮೇಲೆ ಮನಸ್ಸಿಗೆ ಬಂದ ಔಷಧಿಗಳನ್ನು ಪ್ರಯೋಗ ಮಾಡುತ್ತಿದ್ದಾರೆ.ಸದ್ದಿಲ್ಲದೆ ಸಾವು ಸಂಭವಿಸುತ್ತಿವೆ.ಗ್ರಾಮೀಣಿಗರ ಆರೋಗ್ಯ ಕಾಯಬೇಕಿರುವ ಆರೋಗ್ಯ ಸಹಾಯಕರು ಹಳ್ಳಿಗಳಿಗೆ ಬರುವುದೇ ಇಲ್ಲ.ನಕಲಿ ವೈದ್ಯರ ಕುರಿತು ವರದಿಗಳನ್ನು ಮಾಡುವುದಿಲ್ಲ.ವಿಪರೀತ ದುಷ್ಪರಿಣಾಮ ಬೀರುವ ನೋವು ನಿವಾರಕ ಮಾತ್ರೆಗಳನ್ನು ಹೆಗ್ಗಿಲ್ಲದೆ ಕೊಡಲಾಗುತ್ತದೆ.ಅನ್ ನೆಸಸರಿ ಆಂಟಿಬಯೋಟಿಕ್ ಗಳನ್ನು ಬಳಸಲಾಗುತ್ತದೆ.ಅನಾವಶ್ಯಕವಾಗಿ ಕುಂಡಿಗೆ ಮೂರು ನಾಲ್ಕು ಇಂಜಕ್ಷನ್ ಮಾಡಲಾಗುತ್ತದೆ.ಮಾಡಿದ ಇಂಜಕ್ಷನ್ ನಿಂದ ಇನ್ಫೆಕ್ಷನ್ ಆಗಿ ಕುಂಡೆಯಿಂದ ಕೀವು ರಕ್ತ ಸೋರಿಸಿಕೊಳ್ಳುತ್ತಾ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಹಲವು ಜನರನ್ನು ನನ್ನ ಕಣ್ಣುಗಳು ಕಾಣುತ್ತಿವೆ.ಸರ್ಕಾರ ಯಶಸ್ವಿ ಆಳ್ವಿಕೆ ಮಾಡುತ್ತಿದೆ;ಜನ ನಂಬುತ್ತಿದ್ದಾರೆ.

ಈ ಲೇಖನವೂ ಅನುಭದ ಆಧಾರದ ಮೇಲೆ ಬರೆದಿರುವಂಥದ್ದು,ಇಲ್ಲಿರುವ ವಿಚಾರಗಳು ಕಂಡ ಸತ್ಯಗಳು.ವೈದ್ಯಲೋಕ ವಂಚಕರ ಲೋಕವಾಗಿದೆ.ಜನರ ಮನೋದೌರ್ಬಲ್ಯಗಳನ್ನು ಬಳಸಿಕೊಂಡು ಹಣಕ್ಕಾಗಿ ಹಲವು ಜೀವನಗಳ ನಾಶಕ್ಕೆ ಕಾರಣವಾಗುತ್ತಿರುವ ದ್ರೋಹಿಗಳ ಬಗ್ಗೆ ಎಚ್ಚರವಿರಲಿ ಎನ್ನುವುದು ಈ ಲೇಖನದ ಆಶಯ.

                                                                                                  ಲಕ್ಷ್ಮೀಕಾಂತ ನಾಯಕ

ಪ್ರೇಮ ಕಥೆ

ಪ್ರೇಮಯಾನದ ಪಕ್ಷಿಗಳು-೧

ಇಳಿ ಸಾಯಂಕಾಲ.ವಸಂತದ ಕಾಲ;ಮಾಮರವೊಂದನ್ನು ಬಿಟ್ಟು ಎಲ್ಲಾ ಮರಗಳು ಎಲೆ ಉದುರಿಸಿದ್ದವು.ಈ ಬೇಸಿಗೆ ನಿಜಕ್ಕೂ ದುರ್ಭರವಾಗಿತ್ತು.ಕ್ರಮೇಣ ಕಾಲ ನಾಶದ ಅಂಚಿಗೆ ತಲುಪುತ್ತಿದೆಯೇನೋ ಎಂಬಂತೆ ಪ್ರತಿಯೊಂದೂ ವಿಪರೀತವಾಗತೊಡಗಿದ್ದವು;ಅಂದರೆ ಮಳೆಗಾಲದಲ್ಲಿ ಮಳೆ,ಚಳಿಗಾಲದಲ್ಲಿ ಚಳಿ,ಈಗ ಬೇಸಿಗೆ;ಈ ಬೇಸಿಗೆಯ ಬಿಸಿಲು ಸಹಿಸದೇ ಜನ ಬಯಲಿಗೆ ಬರುವುದೇ ದುಸ್ತರವಾಗಿತ್ತು.ಏಕರೀತಿಯಿಂದ ಸೂರ್ಯದೇವ ಒಂದೇ ಸಮನೆ ಬೆಂಕಿಯ ಮಳೆ ಸುರಿಯುತ್ತಿದ್ದಾನೇನೋ ಎನ್ನುವಂತೆ ಬಿಸಿಲು ಧಾರಾಕಾರ ಸುರಿಯುತ್ತಿತ್ತು.ಸದ್ಯ ಈಗ ಇಳಿಸಂಜೆ,ಸೂರ್ಯ ತನ್ನ ತೀವ್ರತೆಯನ್ನು ಕಳೆದುಕೊಂಡು ಪಡುವಣದ ಕಡೆ ಸಾಗುತ್ತಿದ್ದಾನೆ.ಮುತ್ತೈದೆಯ ಹಣೆಯ ಕುಂಕುಮದ ರಂಗನ್ನು ಪಡೆದು ಆತ ತಾಯ ಗರ್ಭ ಸೇರಲು ಹೊರಟಿದ್ದಾನೆ.ಹಕ್ಕಿಗಳು ಗೂಡಿಗೆ ಹಿಂತಿರುಗುವ ಆ ಹೊತ್ತಿನಲ್ಲಿ ಮರಗಳು ಚಿಲಿಪಿಲಿಯ ಮಾತು ಪಡೆದಿದ್ದವು.ದೂರದ ದಿಕ್ಕಿನಿಂದ ಎಲ್ಲೋ ಕೋಗಿಲೆಯೊಂದು ಸಶ್ರಾವ್ಯವಾಗಿ ಹಾಡುತ್ತಿರುವ ಹಾಡೊಂದು ಕೇಳಿ ಬರುತ್ತಿತ್ತು.ರವಿ ಪುಳಕಿತಗೊಂಡ!ರಶ್ಮಿಯ ಧ್ವನಿ ಯಾವ ಕೋಗಿಲೆಗೂ ಕಡಿಮೆ ಇಲ್ಲವೆನ್ನುವುದು ಆತನ ಮನಸ್ಸಿನಲ್ಲಿ ಹಾದು ಹೋಗಿ ಆತ ಕಾತರಗೊಂಡ;ಅವಳ ಪಿಸುಮಾತು ಅವನನ್ನು ರೋಮಾಂಚಿತಗೊಳಿಸುತ್ತಿತ್ತು.

ಸಮಯ ನೋಡಿಕೊಂಡ,ಐದಾಗಲಿಕ್ಕೆ ಇನ್ನೂ ಹತ್ತು ನಿಮಿಷ ಬಾಕಿ ಇತ್ತು;ಇಷ್ಟೊತ್ತಿಗಾಗಲೇ ಆಕೆ ಬರಬೇಕಿತ್ತು.ತಾವಿಬ್ಬರೂ ಪ್ರತಿದಿನ ಸೇರುತ್ತಿದ್ದದ್ದು ಅದೇ ಸಮಯಕ್ಕೆ;ನಾಲ್ಕುವರೆ ಐದು ಗಂಟೆಯ ಒಳಗೆ.

ಅದು ಊರಿಗೆ ಹತ್ತಿರವಿರುವ ಒಂದು ಸಣ್ಣ ಹಳ್ಳ,ಸಾಯಂಕಾಲ ಅಲ್ಲಿ ಪ್ರಶಾಂತವಾದ ವಾತಾವರಣವಿರುತ್ತದೆ.ಹಳ್ಳದ ನೀರಿನ ಕುಲುಕುಲು ಸದ್ದೂ ಬಹಳ ಹಿತವಾಗಿ ಕೇಳಿಸುತ್ತದೆ.ಹಳ್ಳದ ತೀರದ ಗುಂಟ ಬೆಳೆದ ತರಾವರಿ ಮರಗಳು ತಂಪು ವಾತಾವರಣವನ್ನು ಸೃಷ್ಟಿಸಿರುವವು.ಸಾಯಂಕಾಲ ಅದು ನಿರ್ಜನವಾಗುವ ಪ್ರದೇಶವಾಗುವುದರಿಂದ ತಾವಿಬ್ಬರೂ ಆ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದರು.

ರವಿ ರಶ್ಮಿಯ ಧ್ಯಾನದಲ್ಲಿರುವಂತೆ ದೂರದಲ್ಲಿ ಗೆಜ್ಜೆಯ ಸದ್ದು ಕೇಳುತ್ತಿರವಂತೆ ಅನ್ನಿಸಿತು,ಅದು ರಶ್ಮಿಯದೆ ಕಾಲ್ಗೆಜ್ಜೆ ಸದ್ದು.ಅವಳ ಕಾಲಿನ ಚೈನಿಗೆ ಇರುವ ಗೆಜ್ಜೆಗಳು ಆ ಸದ್ದನ್ನು ಹೊರಡಿಸುತ್ತವೆ.ತುಂಬಾ ಲಯವಾಗಿ ನಡೆಯುವ ಆಕೆ ಒಂದು ನವಿಲಿನಂತೆ ಭಾಸವಾಗುತ್ತಾಳೆ.ಕಡೆದಿಟ್ಟ ಶಿಲ್ಪದಂತಹ ಅವಳ ಚೆಲುವು ವರ್ಣಿಸಲು ಅಸಾಧ್ಯ..ಬೇಲೂರು ಶಿಲಾಬಾಲಿಕೆಯರಿಗೆ ಇವಳೇ ಸ್ಪೂರ್ತಿ ಎನ್ನುವಂತಿದ್ದಳು.ಅದೆಷ್ಟೋ ಬಾರಿ ಅವನು ಹಾಗೆಂದು ಹೇಳಿದಾಗ ಕೆಂಪಾಗುವ ಅವಳ ಕೆನ್ನೆಯನ್ನು ನೋಡಬೇಕು?ಅವಳ ಕಣ್ಣುಗಳ ಮಿಂಚು ಅವನ ಹೃದಯದ ಬೆಳಕಾಗಿತ್ತು.

"ಮನೇಲಿ ಅಪ್ಪಾ ಇದ್ದರು,ಅದ್ಕೆ ತುಸು ತಡವಾಯಿತು!"ಎಂದಳು ರಶ್ಮಿ.
"ತುಸು ತಡವಲ್ಲಾ ಚಿನ್ನಾ,ನಿನ್ನ ನಿರೀಕ್ಷಣೆಯ ಒಂದು ನಿಮಿಷವೂ ನಗೊಂದು ಯುಗ,ಆ ವಿರಹ ಸಹಿಸೇನು ನಾನು.ಕಾಯುವಿಕೆಯಲ್ಲಿ ಎಂಥಹ ನೋವಿದೆ ಅಂತ ಗೊತ್ತಿದೆಯಾ ನಿನಗೆ?"ಎಂದನು ರವಿ.ನಿಜಕ್ಕೂ ಅವನು ಆಕೆಯ ನಿರೀಕ್ಷೆಯಲ್ಲಿ ನೊಂದು ಹೋಗುತ್ತಿದ್ದನು.ಚಂದ್ರಾಪುರವೆಂಬ ಆ ಚಿಕ್ಕ ಹಳ್ಳಿಯಲ್ಲಿ ಜನರನ್ನು ತಪ್ಪಿಸಿಕೊಂಡು ಪ್ರೇಮಿಗಳಿಬ್ಬರು ಸೇರುವುದು ತುಂಬಾ ದುಸ್ತರವಿತ್ತು.ಅದು ಕಂಚಿನ ಘಂಟೆಯಂಥಹ ಹಳ್ಳಿ,ಎಲ್ಲೋ ಏನೋ ತಾಕಿದರೆ ಊರೆಲ್ಲಾ ಸದ್ದು ಕೇಳಿಸುತ್ತಿತ್ತು!ಸಮಾಜ ಹಲವು ಸಂಕೋಲೆಯ ಬಂಧನದಲ್ಲಿರುವಾಗ ಹಳ್ಳಿಗಳ ಮಟ್ಟದಲ್ಲಿ ಪ್ರೀತಿ ಪ್ರೇಮ ಸುಲಭವಿರಲಿಲ್ಲ.

ರಶ್ಮಿ ರವಿಯ ತೊಡೆಯ ಮೇಲೆ ತನ್ನ ತಲೆಯನ್ನು ಇಟ್ಟು ಮಲಗಿದಳು,ಹಾಗೆ ಅವಳು ತೊಡೆಯ ಮೇಲೆ ಮಲಗಿದರೆ ಮಡಿಲಲ್ಲಿ ಒಂದು ಮಲ್ಲಿಗೆಯ ದಂಡೆ ವಿರಮಿಸಿದ ಭಾವ ಪ್ರಾಪ್ತಿಯಾಗುತ್ತಿತ್ತು ರವಿಗೆ;ಅವಳ ಹೆರಳ ಸುಗಂಧ ಅವನನ್ನು ಮತ್ತಿಗೆ ಈಡು ಮಾಡುತ್ತಿತ್ತು.ನಿಧಾನವಾಗಿ ರವಿ ರಶ್ಮಿಯ ಮುಖವನ್ನು ತನ್ನ ಬೊಗಸೆಯಲ್ಲಿ ತುಂಬಿಕೊಂಡು ಚುಂಬಿಸುವನು.ಆ ಕ್ಷಣ ಸ್ವರ್ಗದಲ್ಲಿ ತೇಲುತ್ತಿರುವಂತೆ ಅನ್ನಿಸುತ್ತಿತ್ತು.

"ಇನ್ನೂ ಎಷ್ಟು ದಿನ ನಾವು ಹೀಗೆ ಕದ್ದು ಸೇರುವುದು ರವಿ?"ರಶ್ಮಿ ಕೇಳುವಳು.ಸದ್ಯಕ್ಕೆ ರವಿ ನಿರುತ್ತರನಾಗುವನು.ಅವಳಲ್ಲಿ ಆ ಪ್ರಶ್ನೆ ತಾವಿಬ್ಬರೂ ಸೇರುವ ಸಂದರ್ಭದಲ್ಲಿ ಉದ್ಭವವಾದರೆ ರವಿಗೆ ಅದು ನಿರಂತರವಾಗಿ ಹುಟ್ಟಿಕೊಳ್ಳುತ್ತಿತ್ತು.ತಮ್ಮ ಪ್ರೇಮಕ್ಕೊಂದು ಶಾಸ್ವತ ಬಂಧವನ್ನು ಕಲ್ಪಿಸುವ ಹಲವು ಮಾರ್ಗಗಳನ್ನು ಆತ ನಿರಂತರವಾಗಿ ಯೋಚಿಸುತ್ತಿದ್ದ.ಇತ್ತೀಚೆಗೆ ಈ ಚಿಂತೆಯಿಂದ ಅವನು ಅನ್ನ ಆಹಾರಗಳನ್ನು ತ್ಯೇಜಿಸಿದ್ದ.ರಾತ್ರಿಗಳು ನಿದ್ರಾಹೀನವಾಗಿದ್ದವು.ಸದಾ ಅವಳ ಸಾನಿಧ್ಯಕ್ಕೆ ಹಾತೊರೆಯುತ್ತಿತ್ತು ಮನಸ್ಸು.ಅವಳಿಲ್ಲದ ಕ್ಷಣ ಅವನಿಗೆ ಸಾವಿನ ಯಾತನೆ ನೀಡುತ್ತಿತ್ತು."ಅದೇ ಯೋಚಿಸುತ್ತಿದ್ದೇನೆ ಚಿನ್ನಾ,ಏನೂ ತೋಚುತ್ತಿಲ್ಲ.ನೀನು ಮೇಲ್ಜಾತಿಯವಳು ಎನ್ನುವ ಒಂದೇ ಒಂದು ಅಂಶ ನನ್ನ ಮನಸ್ಸನ್ನು ಛಿದ್ರ ಛಿದ್ರವಾಗಿಸುತ್ತದೆ.ಆತಂಕ ಉಂಟಾಗುತ್ತದೆ.ಮೈ ಬೆವರಿ ಹೋಗುತ್ತದೆ.ಸಮಾಜವನ್ನು ಒಪ್ಪಿಸುವ ಬಗೆ ಹೇಗೆ,ಸಮಾಜ ನಮ್ಮ ಪ್ರೇಮವನ್ನು ಒಪ್ಪುತ್ತದಾ ಎಂದು ಯೋಚಿಸಿ ಹುಚ್ಚು ಹಿಡಿದು ಹೋಗಿದೆ"ಎಂದನು ರವಿ.ಅವನ ಮಾತಿನಲ್ಲಿ ಸಣ್ಣದಾಗಿ ವಿಷಾದ ವ್ಯಕ್ತವಾಗುತ್ತಿತ್ತು."ಏನು ಮಾಡ್ತೀಯೋ ನನಗೆ ಗೊತ್ತಿಲ್ಲ.ನೀನಿಲ್ಲದೆ ಮಾತ್ರ ಬದುಕುವುದಿಲ್ಲನಾನು!ಬೇಗ ಪರಿಹಾರ ಕಂಡು ಹಿಡಿ"ಎಂದಳು ರಶ್ಮಿ.ಅದಾದ ಮೇಲೆ ಅವರು ಕನಸಿನ ಲೋಕಕ್ಕೆ ಬರುವರು.

ತಾವಿಬ್ಬರೂ ಯಾರೂ ಇಲ್ಲದ ನಿರ್ಜನ ಕಾಡಿನಲ್ಲಿ ಒಂದು ಸಣ್ಣ ಕುಟೀರದಂತಹ ಮನೆ ನಿರ್ಮಿಸಿಕೊಳ್ಳುವುದು,ಆ ಕುಟೀರವೂ ಹೂಬಳ್ಳಿಗಳಿಂದ ಆವೃತವಾಗಿರುವುದು;ಮನೆಯ ಮುಂದೆ ಅಂಬಾ ಎನ್ನುವ ಕರು ಇರುವುದು,ಮಡಿಲಿನಲ್ಲಿ ಪುಟ್ಟ ರವಿ ರಶ್ಮೀ ಪುತ್ರನಿರುವುದು ಪ್ರೇಮವೇ ಜೀವನವಾಗಿ ಯಾರ ತಂಟೆ,ಯಾವ ಸಮಸ್ಯೆಯಿಲ್ಲದೆ ಬದುಕುವ ಕನಸದು.ಅದು ಅವರ ಪ್ರತಿ ರಾತ್ರಿಯ ಕನಸಾಗಿತ್ತು.ಅದನ್ನು ಅವರಿಬ್ಬರೂ ಹಂಚಿಕೊಳ್ಳುತ್ತಿದ್ದರು.ನಿಧಾನವಾಗಿ ಹರಿಯುವ ಸಣ್ಣ ನೀರ ತೊರೆಯ ದಂಡೆಯ ಮೇಲೆ ನಿರ್ಮಿಸಿಕೊಂಡ ಆ ಕುಟೀರ ಗಿಣಿ,ಮೊಲ,ಜಿಂಕೆ ಮೊದಲಾದ ಮುದ್ದು ಪ್ರಾಣಿಗಳಿಂದ ಸಮೃದ್ಧವಾಗಿರುವುದು.ಆ ಪ್ರದೇಶದಲ್ಲಿ ಕೋಗಿಲೆಯ ಇಂಪು ಗಾನ,ನವಿಲಿನ ನರ್ತನದ ಸವಿ ಇದರ ಮಧ್ಯೆ ತಮ್ಮಿಬ್ಬರ ಮಿಲನ,ರತಿ ಮನ್ಮಥರ ಮಿಲನ!

"ರವಿ,ಒಂದು ಕ್ಷಣವೂ ನೀನು ನನ್ನಿಂದ ದೂರವಾಗಿ ಇರಬಾರದು,ಒಂದು ಕ್ಷಣದ ಅಗಲಿಕೆಯನ್ನೂ ನಾನು ಸಹಿಸಲಾರೆ.ನನ್ನ ತುಟಿಗಳು ಸದಾ ನಿನ್ನ ಅಧರಾಮೃತವನ್ನು ಸೇವಿಸುತ್ತಿರಬೇಕು.ನಿನ್ನ ಅಪ್ಪಿಗೆಯ ಸವಿಸುಖ ಅರೆಕ್ಷಣವೂ ಕಳೆದುಕೊಳ್ಳಲಾರೆ.ನಿನ್ನ ತೋಳ ಬಂಧನವೇ ಸ್ವರ್ಗ ನನಗೆ"ಎಂದು ಮತ್ತಿನಲ್ಲಿ ತೇಲುತ್ತಿರುವಂತೆ ನುಡಿಯುವಳು ರಶ್ಮಿ!ರವಿ ಅವಳನ್ನು ಮಡಿಲಿನಿಂದ ಸರಿಸಿ ಬಿಗಿದಪ್ಪುವುನು.ಅವರಿಬ್ಬರ ಬಾಹು ಬಂಧನದಲ್ಲಿ ಗಾಳಿಗೂ ಸ್ಥಳವಿಲ್ಲದಂತಾಗುವುದು.ಹದಿನಾರರ ಅವಳು ಇಪ್ಪತ್ತರ ಅವನು ಆ ಕ್ಷಣ ಯೌವನದ ಬೆಂಕಿಯಲ್ಲಿ ಬೆಂದು ಹೋಗುವರು.ಸ್ವರ್ಗದ ಕಲ್ಪನೆಯಲ್ಲಿ ಅವರು ತೇಲುವರು.ರತಿ ಮನ್ಮಥರಂತೆ ರಾಸಲೀಲೆಯಲ್ಲಿ ಸಾಯಂಕಾಲ ಕಳೆಯುವುದು.ಸೂರ್ಯ ತಾಯ ಗರ್ಭ ಸೇರುತ್ತಿರುವಂತೆ ಕತ್ತಲು ನಿಧಾನವಾಗಿ ಇಳಿಯತೊಡಗುತ್ತದೆ.ಆಗ ಅವರು ಬೇರಾಗಲೇಬೇಕು;ಅದು ಕದ್ದು ಸೇರುವಿಕೆ;ಕೊಂಚ ತಡವಾದರೆ ರಶ್ಮಿಯ ತಾಯಿ ಅಲ್ಲಿಗೆ ಬರಬಹುದಾದ ಭೀತಿ!

"ನೋಡು,ಏನ್ಮಾಡ್ತೀಯೋ ಗೊತ್ತಿಲ್ಲ.ಆದಷ್ಟು ಬೇಗ ನಾವು ಒಂದಾಗುವ ದಾರಿ ಹುಡುಕು!"ಅದವಳ ವಿದಾಯದ ಮಾತು.ನಂತರ ಅವರಿಬ್ಬರೂ ಮನೆಯ ಕಡೆ ಹೊರಡುವರು.(ಮುಂದುವರೆಯುತ್ತದೆ)

ಹೋರಾಟವೂ ಉದ್ದಿಮೆಯಾಗಿ ಹೋದ ಈ ಸಂಕೀರ್ಣ ಕಾಲಘಟ್ಟದ ಕುರಿತು

 ನೀವು ಪರೀಕ್ಷಿಸಿ ನೋಡಿ:ಲಕ್ಷಾಂತರ,ಕೋಟ್ಯಾಂತರ ಸಂಘಟನೆಗಳು ಹೋರಾಟಗಾರರು ಜನ್ಮತಳೆದಿದ್ದಾರೆ;ಅಷ್ಟೇ ಸಮಸ್ಯೆಗಳು ಹೆಚ್ಚಾಗುತ್ತಿವೆ.ಇವೆಲ್ಲವನ್ನೂ ವಿಶ್ಲೇಷಿಸಿ ನೋಡಿದಾಗ ಎ...