ಪ್ರಜ್ಞಾಹೀನ ಯುವಶಕ್ತಿಯೂ ಕಳಪೆ ಮತದಾರನು!
ಅದು ಭವ್ಯ ಭಾರತದ ಒಂದು ಹಳ್ಳಿ,ತಟ್ಟಿಯಿಂದ ಮಾಡಿಕೊಂಡ ಒಂದು ಹೋಟಲ.,ಚಹಾ,ಒಗ್ಗಾಣಿ,ಬಜಿ,ಖಾರ ಇತ್ಯಾದಿಗಳನ್ನು ಅಲ್ಲಿ ಮಾರುತ್ತಾರೆ,ಮನುಷ್ಯರಿಗಿಂತ ನೊಣ ಹೆಚ್ಚಿರುವ ಜಾಗವದು!ವಿಪರೀತವಾದ ಸಕ್ಕರೆಯನ್ನು ಅಲ್ಪ ಚಹಾಪುಡಿಯೊಂದಿಗೆ ಕೊಡ ನೀರಿನಲ್ಲಿ ಕುದಿಸಿದ ಚಹಾ ಎನ್ನುವ ದ್ರವ ಹೆಚ್ಚು ಮಾರಾಟವಾಗುವ ಸ್ಥಳ ಅದಾಗಿದ್ದರಿಂದ ಮತ್ತು ಆ ಪಾನಕ ಯಥೇಚ್ಛವಾಗಿ ಎಲ್ಲೆಂದರಲ್ಲಿ ಚೆಲ್ಲಾಡಿದ್ದರಿಂದ ನೊಣಗಳು ಗಂವ್ ಅಂತಿರುತ್ತವೆ!ನೀರು ಕುಡಿಯಲಿಕ್ಕೆಂದು ಪ್ಲಾಸ್ಟಿಕ್ ಜಗ್ಗುಗಳನ್ನು ಇಡಲಾಗಿರುತ್ತವೆ,ಅವೂ ನೊಣಗಳಿಂದ ಮುಕ್ಕರಿರುತ್ತವೆ,ಜನ ಏನೂ ಭಾವಿಸುವುದಿಲ್ಲ.ಏಕೆಂದರೆ ಇದರಕ್ಕಿಂತಲೂ ದಾರುಣವಾಗಿ ಅವರ ಮನೆ ಇರುತ್ತದೆ;ಕೆಲ ಜಾತಿಗಳಿಗೆ ಮನೆಯ ಸ್ವಚ್ಚತೆಯ ಕಾಳಜಿ ಇರುತ್ತದೆಯೇ ಹೊರತು ಈ ಕಾಟಿಗರಿಗೆ ಅಥವಾ ನಿಮ್ನ ವರ್ಗಗಳಿಗೆ ಅದರ ಕಾಳಜಿ ಇರುವುದಿಲ್ಲ.ಮನೆಯಲ್ಲಿ ನೊಣಗಳು ಗಂವ್ ಎನ್ನದಿದ್ದರೆ ಯಾವುದೋ ಇಷ್ಟದ ಸ್ವರ ಮಿಸ್ ಮಾಡಿಕೊಂಡ ಫೀಲ್ ಉಂಟಾಗುತ್ತದೆ.ನೊಣಗಳು,ಸೊಳ್ಳೆಗಳು,ಕೋಳಿ ಹೇಲು,ದನದ ಸೆಗಣಿ ಮತ್ತು ಮನೆಯ ಮುಂದೆ ತೆರೆದ ಚರಂಡಿ ಹರಿಯುತ್ತಿದ್ದರೆ ಸ್ವರ್ಗದ ಭಾವನೆ ಮತ್ತು ಸ್ವರ್ಗ ಸುಖದ ಭಾವನೆ ಉಂಟಾಗುತ್ತದೆ;ಅದೇ ಸ್ವರ್ಗ ಸುಖ ಕೂಡಾ!ಅದಾಗಲೇ ಫ್ರೆಶ್ ಆಗಿ ಬಯಲಿನಲ್ಲಿ ಕುಳಿತು ಬಂದ ಸಂಡಾಸು ಭೋಜನೆ ಮಾಡಿಬಂದ ನೊಣ ಮರಳಿ ಮನೆಗೆ ಸಂಡಾಸಿನ ಕಣಗಳನ್ನು ತರದಿದ್ದರೆ ಏನಿದೆ ಜೀವನದಲ್ಲಿ ಉಲ್ಲಾಸ?ಕಾಲರ,ಮಲೇರಿಯಾ,ಕರೋನಾ ಮತ್ತು ಈ ಮೂರರ ಅಪ್ಪ ಬಂದರೂ ಅವರಿಗೆ ಯಾವ ಭಯವಿಲ್ಲ!ಇದು ರೂಢಿಗತ ಗ್ರಾಮೀಣ ಬದುಕು,ಯಾರಾದರೂ ಇಂಥಹ ಬದುಕನ್ನು ನೋಡಲಿಕ್ಕೆ ಇಚ್ಚೆಪಟ್ಟರೆ ನನ್ನ ನಂಬರಿಗೆ ಕರೆ ಮಾಡಿರಿ,ಭೂ ಸ್ವರ್ಗವೆಂದು ಹೇಳಲ್ಪಡುವ ಭಾರತದ ಬದುಕನನ್ನು ನಿಮ್ಮ ಕಣ್ಣಿಗೆ ಕಟ್ಟುವಂತೆ ತೋರಿಸುತ್ತೇನೆ ಮತ್ತು ಉತ್ತಮ ನಿರೂಪಣೆಯನ್ನೂ ಕೊಡುತ್ತೇನೆ.ಆಸಕ್ತರು ಬರಬಹುದು,ಮುಖ್ಯವಾಗಿ ಹವಾನಿಯಂತ್ರಿತ ಕೋಣೆ,ಹವಾನಿಯಂತ್ರಿತ ದುಬಾರಿ ಕಾರಿನಲ್ಲಿ ಕುಳಿತು ಭಾರತ ಭೂ ಸ್ವರ್ಗ ಎಂದು ತೌಡು ಕುಟ್ಟುವವರು ಭಾರತದ ಗ್ರಾಮೀಣ ಜೀವನವನ್ನು ನೋಡಲು ಬರಬಹುದು,ಅಲ್ಲಿ ನಾನಿರುತ್ತೇನೆ,ನನ್ನಂಥವರೆ ಊರಿಗೊಬ್ಬರು ಇರುತ್ತಾರೆ.
ನವದೆಹಲಿಯಿಂದ ಬಂದ ಸುದ್ದಿಯೊಂದನ್ನು ಓದಿದೆ,15ನೇ ಹಣಕಾಸು ಆಯೋಗದ ಶಿಫಾರಸ್ಸಿನ ವರದಿಯನ್ನು ಆಧರಿಸಿದ ಸುದ್ದಿಯದು,ರಾಜ್ಯಕ್ಕೆ ಇದೇ ಮೊದಲ ಬಾರಿ ಗ್ರಾಮ ನೈರ್ಮಲ್ಯಕ್ಕಾಗಿ ಮತ್ತು ನೈರ್ಮಲ್ಯದ ಕುರಿತಿರುವ ಯೋಜನೆಗಳಿಗಾಗಿ ಕೇಂದ್ರ ಸರ್ಕಾರ 804 ಕೋಟಿಗಳನ್ನು ಬಿಡುಗಡೆ ಮಾಡಿದೆ ಎನ್ನುವುದು ಸುದ್ದಿ ಸಾರ.ಇದು ಮೊದಲೇನು ಅಲ್ಲ.ಪ್ರತಿ ವರ್ಷ ಗ್ರಾಮ ನೈರ್ಮಲ್ಯದ ಕುರಿತಿರುವ ಅನೇಕ ಯೋಜನೆಗಳಿಗಾಗಿ ಸರ್ಕಾರಗಳು ಸಾಕಷ್ಟು ಹಣವನ್ನು ಮೀಸಲಿಡುತ್ತವೆ,ಗ್ರಾಮ ಪಂಚಾಯತಿಗಳು ಖರ್ಚು ಮಾಡುತ್ತಲೇ ಇರುತ್ತವೆ,ಕಾಗದಗಳಲ್ಲಿ ಗ್ರಾಮಗಳು ನಿರಮಲವಾಗುತ್ತವೆ,ಸ್ವಚ್ಛವಾಗುತ್ತವೆ,ದೇಶ ಭವ್ಯವಾಗುತ್ತಲೇ ಹೋಗುತ್ತದೆ!ಪಂಚಾಯತ್ ರಾಜ್ ಇಲಾಖೆ ಮತ್ತದರ ಅಂಗ ಸಂಸ್ಥೆಗಳು ನಡೆಸುವ ಭ್ರಷ್ಟಾಚಾರವೇ ರಾಜಕಾರಣಿಯ ಸಂಪತ್ತು ವೃದ್ಧಿಯ ಮೂಲ.ಆ ವಿಷಯದ ಕುರಿತು ಇನ್ನೊಮ್ಮೆ ಬರೆಯೋಣ.
ಚಹಾದ ಅಂಗಡಿಯಲ್ಲಿ ಭವ್ಯ ಭಾರತದ ಯುವಶಕ್ತಿ ಕುಳಿತಿತ್ತು,ಅದು ಘನವಾಗಿತ್ತು,ದೃಢವಾಗಿತ್ತು.ಅದರ ಬಾಯಿ ತುಂಬಾ ದೇಶ ಭಕ್ತಿ ಇತ್ತು,ಅದರ ಸರ್ವ ಅಂಗವನ್ನು ಕೇಸರಿಮಯವಾಗಿಸಿಕೊಂಡಿತ್ತು,ಮತ್ತದು ಪ್ರಾಣಿಯೊಂದರ ಕುರಿತು ಒಲವನ್ನುಹೊಂದಿತ್ತು;ಮಾತಿನ ಮಧ್ಯೆ ದನಕ್ಕಾಗಿ ಮನುಷ್ಯರು ಸತ್ತರೆ ಪಾಡೇನು ಎಂದು ನಾನು ಕೇಳಿದ ಪ್ರಶ್ನೆಗೆ ಅದು ಗಂಭೀರವಾಗಿ ದನಗಳ ಕುರಿತು ಯಾರಿಗೆ ಒಲವು ಇಲ್ಲವೋ ಅವರು ಭೂಮಿಯ ಮೇಲೆ ಬದುಕಲಿಕ್ಕೆ ಅರ್ಹರಲ್ಲ ಎಂದಿತು,ಅದು ಭೂಮಿಯ ಮೇಲಿನ ಎಲ್ಲಾ ಪ್ರಾಣಿಗಳು ಎಂದರೆ ಎತ್ತು,ಎಮ್ಮೆ,ಕರು,ಕುರಿ,ಕೋಳಿ,ನಾಯಿ,ನರಿ,ಪಕ್ಷಿಗಳು ಇತ್ಯಾದಿ ಏನನ್ನೂ ತಿಂದರೆ ಪರವಾಗಿಲ್ಲ,ಆಕಳು ತಿನ್ನಬಾರದು ಎಂದಿತು.ಅದು ಮರೆತಿರುವ ಒಂದು ವಿಷಯವೆಂದರೆ ಭಾರತದ ಜನ ಸಂಖ್ಯೆಯ ಪ್ರತಿಶತ ತೊಂಬತ್ತೆಂಟು ಜನರ ಆಹಾರ ಮಾಂಸಾಹರವೆಂದೂ ಈ ಮಾಂಸಾಹಾರ ಪದ್ಧತಿಯಲ್ಲಿ ಎಲ್ಲಾ ಪ್ರಾಣಿಗಳೂ ಸೇರುತ್ತವೆ ಎಂದೂ ಕೇವಲ ಜನಾಂಗೀಯ ಸಂಘರ್ಷವನ್ನು ಜೀವಂತವಿಡುವ ನಿಟ್ಟಿನಲ್ಲಿ ಕೆಲ ಮಾನಸಿಕ ಅಸ್ವಸ್ಥರು ರಾಜಕೀಯ ಮತ್ತು ಧಾರ್ಮಿಕ ತಮ್ಮ ಹಿತಾಸಕ್ತಿಯ ಕಾರಣಗಳಿಗೆ ಸೃಷ್ಟಿ ಮಾಡಿದ ವಾದ ಎನ್ನುವುದನ್ನು ಅದು ತಿಳಿಯದಾಗಿತ್ತು.ಅದರ ಮೆದುಳಿನಲ್ಲಿ ಸಮಸ್ತ ವೈರಾಣುಗಳನ್ನೂ ತುಂಬಿಕೊಂಡಿದ್ದ ಜೀವಿಯಾಗಿತ್ತು!ಇಂತಿಪ್ಪ ಆ ಯುವಶಕ್ತಿಯೊಂದಿಗೆ ಕೆಲ ಮಾತುಕತೆಯನ್ನು ನಡೆಸುತ್ತಾ ಸದ್ಯ ಕೋವಿಡ್ ಸಂಕಷ್ಟದ ಈ ಸಮಯದಲ್ಲಿ ಕರ್ನಾಟಕ ಆರೋಗ್ಯ ಸಚಿವಾಲಯದ ಭ್ರಷ್ಟಾಚಾರದ ಬಗ್ಗೆ ಮಾತು ಬಂದಿತು,ಸಣ್ಣದಲ್ಲ,ಜನರ ಸಾವಿನ ಭೀತಿಯ ಮೇಲೆ(ಭಯ ಸೃಷ್ಟಿ ಮಾಡಲಾಗಿದೆ) ಸುಮಾರು 2200 ಕೋಟಿ ಹಣವನ್ನು ದುಷ್ಟ ರಾಜಕಾರಣಿಗಳು ತಿಂದು ಹಾಕಿದ್ದಾರಲ್ಲ ಇದರ ಕುರಿತು ಭಾರತೀಯ ಪ್ರಜ್ಞಾವಂತ ಯುವಕನಾಗಿ ನೀನು ಏನು ಹೇಳಲು ಇಷ್ಟ ಪಡ್ತೀಯ ಎಂದೆ,ಆತ ಯಾರು ಭ್ರಷ್ಟಾಚಾರ ಮಾಡುತ್ತಿಲ್ಲ ಹೇಳಿ,ಅಧಿಕಾರಕ್ಕೆ ಬರುವ ಮುನ್ನ ಎಲ್ಲರೂ ಹಾಗೇ ಹೇಳುತ್ತಾರೆ,ರವಿಕೃಷ್ಣಾರೆಡ್ಡಿಯಾಗಿರಬಹುದು ಮತ್ತೊಬ್ಬನಿರಬಹುದು ಎಂದ.ಹೋಗಲಿ ಕಳೆದ ಆರೇಳು ವರ್ಷದಿಂದ ಭಾರತ ಏನಾದರೂ ಬದಲಾಗಿರುವಂತೆ ಕಾಣಿಸುತ್ತಿದೆಯಾ ಎಂದು ಕೇಳಿದೆ,ಈ ಮಧ್ಯೆ ಕಪ್ಪು ಹಣದ ವಾಪಸಾತಿ ಮತ್ತು ಅದರ ನಿಯಂತ್ರಣದ ಕುರಿತು ಪ್ರಾಸ್ತಾಪಿಸುತ್ತಾ.ಕಾಂಗ್ರೇಸ್ಸಿನವರು ಮಾಡಿದ್ದರಲ್ಲಿ(ಭ್ರಷ್ಟಾಚಾರ) ನಮ್ಮ ಸರ್ಕಾರ ಹತ್ತು ಪ್ರತಿಶತವೂ ಮಾಡಿಲ್ಲ ಎಂದ.ನಂತರ ಭ್ರಷ್ಟಾಚಾರ ಸಾಮಾನ್ಯ ಎಂದ,ನೀವು ಮಾಡೋದಿಲ್ಲವಾ ಎಂದು ನನ್ನನ್ನು ಪ್ರಶ್ನಿಸಿದ(ನಾನು ಹರಕು ಅಂಗಿ ಮತ್ತು ಲುಂಗಿಯ ಮೇಲೆ ಅಲ್ಲಿದ್ದೆ,ನನ್ನ ವಸ್ತ್ರಗಳಿಗೆ ಹಾಗಷ್ಟೆ ಮೋಟರ್ ಲಿಫ್ಟ್ ಮಾಡಿದ್ದೆನಲ್ಲಾ ಅದರ ಕಿಲುಮು,ಜಂಗು ಹತ್ತಿತ್ತು).ಕಳ್ಳ ಮಾರ್ಗದಿಂದ ಹಣ ಗಳಿಸುವ ಉದ್ದೇಶ ನನಗಿದ್ದರೆ ನಾನೂ ಕಿವಿಯಲ್ಲಿ ವೈರ್ ಲೆಸ್ ಇಯರ್ ಫೋನ್ ಹಾಕಿಕೊಂಡು,ಮನೆಯಲ್ಲಿ ಏನೂ ಇರದಿದ್ದರೂ ಒಳ್ಳೊಳ್ಳೆ ವಸ್ತ್ರಗಳನ್ನು ಹಾಕಿಕೊಂಡು ಜನರ ಮಧ್ಯೆ ಬಿಲ್ಡಪ್ ಕೊಡುವ ಡೆಮ್ಮಿ ಕಾಲ್ ಮಾಡಿಕೊಂಡು ಇರುತ್ತಿದ್ದೆ ತಮ್ಮಾ ಅಂದೆ,ಮಾತು ಅಲ್ಲಿಗೇ ನಿಂತು ಹೋದವು!ಇದು ಭಾರತದ ಯುವಶಕ್ತಿಯ ಮನಸ್ಥಿತಿ.
ಎಲ್ಲರೂ ಅಂತ ಹೇಳುವುದಿಲ್ಲ,ನೈಂಟಿ ನೈನ್ ಪರ್ಸೆಂಟು ಯುವಕರು ಯಾವುದೋ ಮೂಲದಿಂದ ದೊರೆಯಬಹುದಾದ ಹಣದ ನೀರೀಕ್ಷೆಯಲ್ಲಿದ್ದಾರೆ,ಯಾವುದೋ ಮೂಲ,ಅಂದರೆ ಕಳ್ಳ ಮಾರ್ಗದಿಂದ!ತಮ್ಮ ತಮ್ಮ ಕುಲದ ರಾಜಕೀಯ ನಾಯಕರ ಅಭಿಮಾನಿ ಸಂಘಗಳನ್ನು ಮಾಡಿಕೊಂಡಿರುತ್ತಾರೆ.ಇವತ್ತು ಅಣ್ಣನ ಹುಟ್ಟು ಹಬ್ಬ,ಅಕ್ಕನ wedding annivarsory ಅಂತ ಅವುಗಳಿಗೆ ಶುಭಾಶಯಗಳ ಬ್ಯಾನರ್ ಸೃಷ್ಟಿ ಮಾಡುತ್ತಾ ವಾಟ್ಸಪ್ ಫೇಸ್ ಬುಕ್ಕುಗಳಲ್ಲಿ ಹಂಚಿಕೊಳ್ಳುತ್ತಾ ಕಾಲಹರಣ ಮಾಡುತ್ತಾರೆ,ಎಮ್ಮೆಲ್ಲೆ,ಜೆಡ್ಪಿ ಮೆಂಬರ್ ಕರೆದು ಒಂದು ಕೆಲಸ ಕೊಡುತ್ತಾನೆ ಇರಿ ಎಂದು ದಾರಿ ಕಾಯುತ್ತಿರುತ್ತಾರೆ.ಅವರೂ ಕರೆದು ಐದು ಲಕ್ಷದ್ದೋ ಹತ್ತು ಲಕ್ಷದ್ದೊ ಒಂದು ಚಿಲ್ಲರೆ ಕಾಮಗಾರಿಯನ್ನು ಕೊಡುತ್ತಾರೆ,ಕೊಡುವ ಮುನ್ನ ಒಂದು ಕೆಲಸ ಮಾಡುತ್ತಾರೆ:ಹತ್ತು ಜನರನ್ನು ತಂಟು ಇಡುತ್ತಾರೆ,ನಾಳೆ ಕಿತ್ತಾಡಿಕೊಂಡು ಸಾಯಲಿ ಎಂದು!ಇಂಥವುಗಳನ್ನು ಸಾಕಷ್ಟು ಉದಾಹರಣೆಗಳನ್ನು ನಾನು ಕಂಡಿದ್ದೇನೆ.
“ಅದೇನದು ನೀರೇ ಇಲ್ಲದ ಬೋರಿನಲ್ಲಿ ಮೋಟರ್ ಅಳವಡಿಸಲು ಕಾಮಗಾರಿ ರೂಪಿಸಿದ್ದೀರಲ್ಲ?”ಎಂದು ಒಬ್ಬ ಸಹಾಯಕ ಇಂಜಿನಿಯರ್ ನನ್ನು ಕೇಳಿದೆ,ಆತ “ಸುಮ್ನಿರಿರಿ,ಅವರು ಶಾಸಕರ ಬೆಂಬಲಿಗರು,ಶಾಸಕರು ಹೇಳಿದ್ದಾರೆ!”ಎಂದ. “ಅಣ್ಣಾ ಹೆಂಗಾನ ಇಪ್ಪತ್ತು ಮೂವತ್ತು ಸಾವಿರ ರೂಪಾಯಿಯಲ್ಲಿ ನೀರು ಎಗರಿಸಿ ಕೊಡಬೇಕು,ಅದು ನಾಲ್ಕೇ ದಿನ ನಡೆದರೆ ಸಾಕು,ಬಿಲ್ ಆಗುವವರೆಗೆ!”ಎಂದ ಒಬ್ಬ ಯುವಕ,ಆತ ಭವ್ಯ ಭಾರತವನ್ನು ಕಟ್ಟುತ್ತೇವೆ ಎನ್ನುವ ಈಗಿರುವ ಸರ್ಕಾರದ ಕಾರ್ಯಕರ್ತ,ಶಾಸಕರ ಅನುಯಾಯಿ,ಅನುಸರಿಸುವ ನಾಯಿ! “ಎಷ್ಟಿದೆ ನಿಗದಿತ ಹಣ?” ಎಂದು ಕೇಳಿದ ಪ್ರಶ್ನೆಗೆ “ಐದು ಲಕ್ಷ!”ಎಂದು ಉತ್ತರಿಸಿದ, “ತಪ್ಪಲ್ಲವಾ ಇದು?” ಎಂದು ಕೇಳಿದ ಪ್ರಶ್ನೆಗೆ ಕೆಲವು ಹೆಸರುಗಳನ್ನು ಉದಾಹರಿಸುತ್ತಾ “ಅವರು ಕೋಟಿ ಕೋಟಿ ಹಣ ಲೂಟಿ ಮಾಡುತ್ತಿಲ್ಲವಾ?”ಎಂದು ಮರು ಪ್ರಶ್ನೆ ಹಾಕಿದ.ನನ್ನ ಹತ್ತಿರ ದಾಖಲೆಗಳಿಲ್ಲವಾದ್ದರಿಂದ ದೃಢೀಕೃತವಾಗಿ ಬರೆಯುತ್ತಿಲ್ಲವಾಗಲಿ ಕರ್ನಾಟಕ ರಾಜ್ಯದ ಇಲಾಖೆಯೊಂದರ ಸಚಿವ ಒಂದೊಂದು ಕಚೇರಿಯಿಂದ ಕೋಟಿ ರೂಪಾಯಿಯ ಹಣ ಆ ಕಚೇರಿಗಳಿಗೆ ಬೇಡಿಕೆ ಇಟ್ಟಿರುವುದರ ಸುದ್ದಿ ನನಗೆ ಕಿವಿಗೆ ಬಿದ್ದಿದೆ,ಬರೀ ಲೂಟಿ,ಲೂಟಿ,ಲೂಟಿ!
ಒಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಎಲ್ಲಾ ಅನುದಾನಗಳನ್ನು ಸೇರಿ ಗ್ರಾಮವೊಂದಕ್ಕೆ ಈ ಐದು ವರ್ಷಗಳಲ್ಲಿ ವಿನಿಯೋಗಿಸಲಾಗಿರುವ ಹಣವನ್ನು ಪರಿಶೀಲಿಸಿ ನೋಡಿ,ಪುಟ್ಟ ಹಳ್ಳಿಯೊಂದಕ್ಕೆ ಸುಮಾರು ಐದಾರು ಕೋಟಿ ರೂಪಾಯಿಗಳ ಖರ್ಚು ಹಾಕಿರಲಾಗುತ್ತದೆ.ಗ್ರಾಮಾಭಿವೃದ್ಧಿಗಾಗಿ!ಕುಡಿಯುವ ನೀರು,ಗ್ರಾಮ ನೈರ್ಮಲ್ಯ,ರಸ್ತೆ,ಆರೋಗ್ಯ ಇತ್ಯಾದಿಗಳಿಗಾಗಿ.ಪ್ರಜ್ಞಾವಂತ ಕಣ್ಣುಗಳ ಸಾಕ್ಷಿಯಾಗಿ!
ಈ ಲೇಖನದ ಒಟ್ಟು ಸಾರಂಶ ಏನೆಂದರೆ ಭಾರತದ ಪ್ರತಿಶತ 95 ಜನ ಭ್ರಷ್ಟಾಚರದ ಪರವಾಗಿದ್ದಾರೆ,ಅವಕಾಶಗಳಿಗಾಗಿ ದಾರಿ ಕಾಯುತ್ತಿದ್ದಾರೆ.ಕೆಲವೊಂದು ತಾಲ್ಲೂಕಿನಲ್ಲಿ ಶಾಸಕನೊಬ್ಬ ಚುನಾವಣೆಯಲ್ಲಿ ಗೆಲ್ಲಬೇಕು ಎಂದರೆ ಅಕ್ರಮ ಮರಳುಗಣಿಗಾರಿಕೆಗೆ ಮುಕ್ತ ಅವಕಾಶ ಒದಗಿಸಿಕೊಡುವ ಭರವಸೆ ನೀಡಬೇಕು,ಏಕೆಂದರೆ ಆತನ ಸುತ್ತಾ ಇರುವ ಕಾರ್ಯಕರ್ತರು ಮರಳು ಗಣಿಗಾರಿಕೆಗೆ ಸಂಬಂಧಿಸಿದವರು;ಇನ್ನೊಂದು ರೀತಿಯಲ್ಲಿ ಹೇಳಬೇಕು ಎಂದರೆ ಕಳ್ಳರು.
ಭಾರತವನ್ನು ಕಳ್ಳರ ಕೂಟವೊಂದು,ಕಳ್ಳರನ್ನು ಸೃಷ್ಟಿ ಮಾಡುವ ಕೂಟವೊಂದು ರೂಲ್ ಮಾಡುತ್ತಿದೆ,ಇದು ಎಲ್ಲಾ ಪಕ್ಷಗಳಿಗೆ ಅನ್ವಯಿಸುವ ಮಾತು.ಸಾಮಾಜಿಕ ನ್ಯಾಯ ಎನ್ನುವುದು ಬರೀ ಬುಟಾಟಿಕೆ.ನ ಖಾಯೇಂಗೇ,ಖಾನೆ ದೂಂಗಾ ಎಂದ ಪುಣ್ಯಾತ್ಮ ತಾನು ತಿನ್ನುತ್ತಿಲ್ಲವೇನೋ,ಆದರೆ ತಿನ್ನಲು ಮುಕ್ತವಾದ ಎಲ್ಲಾ ಅವಕಾಶಗಳನ್ನು ಒದಗಿಸಿಕೊಟ್ಟಿದ್ದಾನೆ,ಏಕೆಂದರೆ-
ಸದ್ಯ ಭಾರತದಲ್ಲಿ ಪ್ರಾಮಾಣಿಕವಾಗಿ ಭ್ರಷ್ಟಾಚಾರವನ್ನು ನಿಗ್ರಹಿಸಬಲ್ಲ,ಭ್ರಷ್ಟರನ್ನು ಜೈಲಿಗೆ ಕಳಿಸಬಲ್ಲ ಪ್ರಭಾವೀಶಾಲಿ ತನಿಖಾ ಸಂಸ್ಥೆ ಇಲ್ಲ.ಒಂದು ವೇಳೆ ಇದ್ದಾವೆ ಅಂತ ನಿಮಗನ್ನಿಸಿ ಅವುಗಳಿಗೆ ದೂರು ನೀಡಲು ಹೋದಿರೋ,ನೀವಿನ್ನೂ ಆ ಕಚೇರಿ ಆವರಣ ದಾಟಿರುವುದಿಲ್ಲ;ಸಂಬಂದಿಸಿದವರೊಂದಿಗೆ ಮಾತುಕತೆಗಳು ಆರಂಭವಾಗಿರುತ್ತವೆ!ಯಾವ ಯಾವ ಕಚೇರಿಗಳಿಂದ ಈ ತನಿಖಾ ಸಂಸ್ಥೆಗಳಿಗೆ ಎಷ್ಟೆಷ್ಟು ಪಾಲು ಹೋಗುತ್ತಿದೆ ಎನ್ನುವುದು ಬರೀ ಮೌಖಿಕವಾಗಿ ಕೇಳಿದ್ದೇನೆಯೇ ಹೊರತು ಸ್ಪಷ್ಟ ದಾಖಲೆಗಳಿಲ್ಲ,ಇದ್ದರೆ ಅವುಗಳ ಕತೆ ಗತಿಗಣಪ ಮಾಡುತ್ತಿದ್ದೆ.
ಹಾಗಿದ್ದರೆ ಏನು ಮಾಡಬೇಕು,ಅಂದರೆ ಎಲ್ಲವೂ,ಎಲ್ಲರೂ ಭ್ರಷ್ಟಾಚಾರಮಯವಾಗಿರುವ ಸಂದರ್ಭದಲ್ಲಿ ಯಾರಾದರೂ ಏನು ಮಾಡಬೇಕು ಎನ್ನುವುದು ಸದ್ಯಕ್ಕೆ ನಮ್ಮ ಮುಂದಿರುವ ಪ್ರಶ್ನೆ.ಒಂದು ಗ್ರಾಮ,ಸಾವಿರ ಕುಟುಂಬಗಳು ನೂರು ಜನ ಲೀಡರ್ಸ್,ಈ ನೂರು ಜನರಲ್ಲಿ ತೊಂಬತ್ತೈದು ಜನರು ಹೇಲು ತಿನ್ನುವವರಾಗಿರುವಾಗ ಈ ಐದು ಜನರು ಏನು ಮಾಡಬೇಕು,ದೂರು ಬರೆಯಬೇಕಾ?ಯಾರಿಗೆ?ದೂರು ಬರೆದರೆ ಆಗುವ ಹಲ್ಲೆ ವಧೆಗಳನ್ನು ಹೇಗೆ ತಡೆಯುವುದು?ಪೋಲಿಸ್ ವ್ಯವಸ್ಥೆಯಾ?ಅದು ಅಧಿಕಾರಸ್ಥರ ಪರವಾಗಿರುತ್ತದೆ,ಮತ್ತೆ ಹೇಗೆ?
ಹಣ ಕೊಡದೆ,ಹೆಂಡ ಕೊಡದೆ,ಸೀರೆ ಕುಪ್ಪಸಗಳು,ಮಾಂಸದ ಊಟ ಇತ್ಯಾದಿಗಳನ್ನು ಮಾಡದೆ ಈ ದೇಶದಲ್ಲಿ ಚುನಾವಣೆಯನ್ನು ಎದುರಿಸುವುದು ಕಷ್ಟ.ಈ ಐದು ಪರ್ಸೆಂಟು ಭ್ರಷ್ಟಾಚಾರಿ ವಿರೋಧಿ ಧೋರಣೆ ಇರುವವರಿಗೆ ಬಲ ಯಾವಾಗ ಬಂದೀತು?
ಯಾವಾಗ ಬರುತ್ತದೆ ಎಂದರೆ ತಮ್ಮನ್ನು ಲೂಟಿ ಹೊಡೆಯುವ ದೃಷ್ಟರ ಬಗ್ಗೆ ಎಳೆ ಎಳೆಯಾಗಿ ಈ ದೇಶದ ಏನೂ ಅರಿಯದ ಹೆಂಡ ಮತ್ತು ಹಣ ಇತ್ಯಾದಿ ಆಮಿಷಗಳನ್ನು ಪಡೆಯದೆ ಮತ ನೀಡುತ್ತಾರಲ್ಲ ಆ ಜನಗಳಿಗೆ ತಿಳಿಸಬೇಕು,ಜನರಿಗೆ ಪ್ರಜಾಪ್ರಭುತ್ವ ಎಂದರೆ ಏನು ಎಂದು ಪ್ರಭಾವಿಶಾಲಿಯಾಗಿ ತಿಳಿಸಬೇಕು,ಯಾರು ಮಾಡಬೇಕು ಈ ಕೆಲಸವನ್ನು?ಆ ಐದು ಪರ್ಸೆಂಟು ಜನ,ಅವರು ಯಾವ ಅವಮಾನ ಟೀಕೆಗಳನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ಮಾಡಬಲ್ಲವರಾದರೆ ಮುಂಬರುವ ದಿಗಳಲ್ಲಿ ಏನಾದರೂ ಬದಲಾವಣೆ ಕಾಣಬಹುದು.
ನಮಗಿರುವುದು ಜನತಾ ನ್ಯಾಯಲಯವೊಂದೆ,ಅದು ಶಕ್ತಿಶಾಲಿಯಾಗಬೇಕು.
ನಿಮ್ಮವನು-ಲಕ್ಷ್ಮೀಕಾಂತ ನಾಯಕ